ಸಂಪುಟದಲ್ಲಿ ಸ್ಥಾನ ಸ್ಥಾನ ನೀಡದೆ ಎಂಬಿ ಪಾಟೀಲರಿಗೆ ಅನ್ಯಾಯ?
Recommended Video
ಬೆಂಗಳೂರು, ಜೂನ್ 06 : ಇಡೀ ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ನೇತೃತ್ವ ವಹಿಸಿದ್ದ, ಬಬಲೇಶ್ವರದ ಶಾಸಕ ಮಲ್ಲನಗೌಡ ಬಸನಗೌಡ ಪಾಟೀಲ (53) ಅವರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರದಲ್ಲಿ ಸಚಿವ ಸ್ಥಾನ ಲಭಿಸದಿದ್ದರೆ ಅದು ದುರಂತವೇ ಸರಿ.
ಸಿದ್ದರಾಮಯ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿ ಉತ್ತರ ಕರ್ನಾಟಕದಲ್ಲಿ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಬರಗಾಲದಲ್ಲೂ ಕೆರೆ ಕಟ್ಟೆಗಳನ್ನು ತುಂಬಿಸಿ, ಜಾನುವಾರುಗಳಿಗೆ, ಬೆಳೆಗಳಿಗೆ ನೀರು ಸಿಗುವಂತೆ ಮಾಡಿರುವ ಉತ್ಸಾಹಿ ಮತ್ತು ಮಹತ್ವಾಕಾಂಕ್ಷಿ ರಾಜಕಾರಣಿ ಎಂಬಿ ಪಾಟೀಲರು.
ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ
ಈ ಕಾರಣಕ್ಕಾಗಿಯೇ, ವಿನಯ್ ಕುಲಕರ್ಣಿ, ಶರಣ ಪ್ರಕಾಶ್ ಪಾಟೀಲ ಸೇರಿದಂತೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಲ್ಲ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ಮಣ್ಣು ಮುಕ್ಕಿದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಿಂದ ಜಯಭೇರಿ ಬಾರಿಸಿದವರು ಎಂಬಿ ಪಾಟೀಲರು ಒಬ್ಬರೇ.
ಸಂಪುಟದಲ್ಲಿ ಯಾವ್ಯಾವ ಜಾತಿಗೆ ಪ್ರತಿನಿಧಿತ್ವ ನೀಡಿದೆ ಕಾಂಗ್ರೆಸ್?
ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯನವರಿಗೆ ಪರ್ಯಾಯವಾಗಿ ಯಾರು ಮುಖ್ಯಮಂತ್ರಿಯಾಗಬಲ್ಲರು ಎಂಬ ಚರ್ಚೆ ಆರಂಭವಾಗಿದ್ದಾಗ ಮೊದಲು ಕೈ ಎತ್ತಿದವರೇ ಎಂಬಿ ಪಾಟೀಲರು. ದೇಶಪಾಂಡೆ, ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್, ಕೆಎಚ್ ಮುನಿಯಪ್ಪನಂಥವರ ನಡುವೆ ಎಂಬಿ ಪಾಟೀಲರ ಹೆಸರು ಕೂಡ ಕೇಳಿಬಂದಿತ್ತು.
ಮುಖ್ಯಮಂತ್ರಿ ಆಗುವ ಕನಸು ಐತಿ, ತಪ್ಪೇನೈತಿ?
ಮಹಾನ್ ಘಟಾನುಘಟಿ ನಾಯಕರಿರುವ ಪಕ್ಷ ಕರ್ನಾಟಕ ಕಾಂಗ್ರೆಸ್. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಇತರ ಪಕ್ಷಗಳಲ್ಲಿರುವಂತೆ ನಾಯಕರಿಗೆ ಕೊರತೆಯೇ ಇಲ್ಲ. ಹುಡುಕಾಡುವ ಅಗತ್ಯವೂ ಇಲ್ಲದೆ ಅರ್ಧಡಜನ್ ನಾಯಕರು ಸಿಗುತ್ತಾರೆ. ಅದೇ ತಲೆನೋವೂ ಕೂಡ ಆಗಿರುವಂಥ ವಿಷಯ. ನನಗೂ ಮುಖ್ಯಮಂತ್ರಿ ಆಗುವ ಕನಸು ಐತಿ, ಕನಸು ಕಾಣೋದರಾಗ ತಪ್ಪೇನೈತಿ? ಎಂದು ಎಂಬಿ ಪಾಟೀಲರು ತಮ್ಮ ಅಸ್ತಿತ್ವವನ್ನು ಪ್ರಚುರಪಡಿಸಿದ್ದರು.
ಸಂಪುಟ ಸಚಿವರ ಮೊದಲ ಪಟ್ಟಿಯಲ್ಲಿ ಪಾಟೀಲರಿಲ್ಲ
ಇದೀಗ ಬಂದಿರುವ ಬೆಳವಣಿಗೆಯೆಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸಂಪುಟದಲ್ಲಿ ಮಹತ್ವಾಕಾಂಕ್ಷಿ ಎಂಬಿ ಪಾಟೀಲರ ಹೆಸರು ಕೇಳಿ ಬಂದಿಲ್ಲ. ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿ ಪಾಟೀಲರು ಸಂಪುಟದಲ್ಲಿ ಸ್ಥಾನ ಗಳಿಸಿಯೇ ಗಳಿಸುತ್ತಾರೆ ಎಂದು ಕಾದಿದ್ದ ಅವರ ಬೆಂಬಲಿಗರಿಗೆ ಭಾರೀ ನಿರಾಶೆ ಆಗಿದೆ. ತಮ್ಮ ಅಸಮಾಧಾನವನ್ನು ಬೆಂಬಲಿಗರು ನಾನಾ ರೀತಿಯಲ್ಲಿ ತೋರಿಸಲು ಆರಂಭಿಸಿದ್ದಾರೆ. ಇದು ಮೊದಲ ಪಟ್ಟಿಯಾದರೂ, ಇದರಲ್ಲೇ ಹೆಸರು ಕಾಣಿಸದಿರುವುದು ಭಾರೀ ನಿರಾಶೆ ತಂದಿದೆ.
'ಕೈ' ತಪ್ಪಿದ ಸಚಿವ ಸ್ಥಾನ : ಎಂ.ಬಿ.ಪಾಟೀಲ್ ಅಸಮಾಧಾನ
ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ!
ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಎಂಬಿ ಪಾಟೀಲರು, ಏನು ನಡೆಯುತ್ತಿದೆ ನನಗೆ ಸರಿಯಾಗಿ ಗೊತ್ತಿಲ್ಲ. ಪಕ್ಷದ ಸಂಘಟನೆಯಲ್ಲಿ, ಪಕ್ಷದ ಏಳ್ಗೆಗಾಗಿ ನಾನು ಕೂಡ ಸಾಕಷ್ಟು ಶ್ರಮಿಸಿದ್ದೇನೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರನ್ನು ಭೇಟಿಯಾಗಿ ಈ ಬಗ್ಗೆ ವಿಚಾರ ಮಂಡಿಸುತ್ತೇನೆ ಎಂದು ಅವರು ಮಾಧ್ಯಮದವರ ಮುಂದೆ ಕಿಡಿಕಾರಿದ್ದಾರೆ. ಜೊತೆಗೆ ಅವರು, ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಗಾಳಿಸುದ್ದಿ ಇದ್ದಕ್ಕಿದ್ದಂತೆ ಗಾಳಿಪಟದಂತೆ ಹಾರಾಡಲು ಆರಂಭಿಸಿದೆ.
ಶಾಮನೂರು ಅಚ್ಚರಿಯ ಸೇರ್ಪಡೆ
ಅಚ್ಚರಿಯ ಸಂಗತಿಯೆಂದರೆ, ಹಿರಿಯರಿಗೆ ಸಂಪುಟದಲ್ಲಿ ಸ್ಥಾನ ನೀಡುವುದಿಲ್ಲ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾಗಿ ಎಲ್ಲೆಡೆ ಪ್ರಕಟವಾಗಿತ್ತು. ಈ ಕಾರಣದಿಂದಾಗಿಯೇ, ಶಾಮನೂರು ಶಿವಶಂಕರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಕ್ಕಿಲ್ಲ ಎಂದು ಹೇಳಲಾಗಿತ್ತು. ಆದರೆ, ಆಶ್ಚರ್ಯಕರ ಬೆಳವಣಿಗೆಯಲ್ಲಿ ಲಿಂಗಾಯತ ಕೋಟಾದಲ್ಲಿ ತೊಂಬತ್ತರ ಗಡಿಯಲ್ಲಿರುವ ಶಾಮನೂರು ಶಿವಶಂಕರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಎಂಬಿ ಪಾಟೀಲರಿಗೆ ಕೈಕೊಡಲಾಗಿದೆ.
ಕೆಂಪು ಮೆಣಸಿನಕಾಯಿ ಖಡಕ್ ರೊಟ್ಟಿ
ಕೆಂಪು ಮೆಣಸಿನಕಾಯಿ ಚಟ್ನಿಯ ಜೊತೆ ಖಡಕ್ ರೊಟ್ಟಿ ದಿನನಿತ್ಯ ಮೆಲ್ಲುವ ಎಂಬಿ ಪಾಟೀಲರು ಸುಮ್ಮನಿರುತ್ತಾರೆಯೆ? ತಮ್ಮ ಆಕ್ರೋಶದ ಹೊಗೆಯನ್ನು ಈಗಾಗಲೆ ಉಗುಳಲು ಆರಂಭಿಸಿದ್ದಾರೆ. ಅವರ ಬೆಂಬಲಿಗರು ಕೂಡ ಪಾಟೀಲರ ಮನೆಯ ಮುಂದೆ ಜಮಾಯಿಸಿದ್ದು, ತಮ್ಮ ನಾಯಕನಿಗೆ ಪ್ರಾನಿಧಿತ್ವ ಸಿಗಲಿಲ್ಲವೆಂದು ಕೋಪೋದ್ರಿಕ್ತರಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನೇನು ಭಿನ್ನಮತ ಆಸ್ಫೋಟವಾಗುವುದೊಂದು ಬಾಕಿಯಿದೆ.
ಪಾಟೀಲರ ಮನವೊಲಿಕೆಗೆ ಪ್ರಯತ್ನ
ಇದಕ್ಕೆ ಪೂರಕವೆಂಬಂತೆ, ಎಂಬಿ ಪಾಟೀಲರು ರಾಜೀನಾಮೆ ಬಿಸಾಕಿದ್ದು, ಅವರ ಮನವೊಲಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದರ ಜೊತೆಗೆ, ಸಂಪುಟದಲ್ಲಿ ಸ್ಥಾನ ಸಿಗದ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದೆಲ್ಲ ಗಾಳಿಸುದ್ದಿಗಳಿಗೆ ಸ್ಪಷ್ಟ ಉತ್ತರ ಸಂಪುಟ ಪುನಾರಚನೆಯ ನಂತರ ಸಿಗಲಿದೆ.