ಸಿದ್ದಗಂಗಾ ಮಠ Vs ಮಾತೆ ಮಹಾದೇವಿ: ಏನಿದು ಕೇಶ ಮುಂಡನ ವಿವಾದ?
Recommended Video
ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಎಂಟು ದಿನದಲ್ಲಿ, ಮಠದ ವಿದ್ಯಾರ್ಥಿಗಳ ವಿಚಾರದಲ್ಲಿ ಸಿದ್ದಗಂಗಾ ಮಠದ ಹಾಲೀ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಮತ್ತು ಬಸವಧರ್ಮ ಪೀಠದ ಮಾತೆ ಮಹಾದೇವಿ ನಡುವೆ ವಿವಾದ ಎದ್ದಿದೆ.
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಅವರ ಹನ್ನೊಂದನೇ ದಿನದ ಕಾರ್ಯಕ್ರಮಕ್ಕೂ ಮುನ್ನ, ಮಠದಲ್ಲಿ ಓದುತ್ತಿರುವ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಕೇಶಮುಂಡನ ಮಾಡಿಸುವ ಸುದ್ದಿಯ ವಿಚಾರದಲ್ಲಿ, ಮಠದ ನಿಲುವನ್ನು ಪ್ರಶ್ನಿಸಿ ಮಾತೆ ಮಹಾದೇವಿ ಟೀಕಾ ಪ್ರಹಾರ ಮಾಡಿದ್ದಾರೆ.
ಮಾತೆ ಮಹಾದೇವಿಯ ಟೀಕೆಗೆ ನಯವಾಗಿ ತಿರುಗೇಟು ನೀಡಿರುವ ಸಿದ್ದಲಿಂಗ ಶ್ರೀಗಳು, ಮಾತೆ ಮಹಾದೇವಿ ದೊಡ್ಡವರು, ತಿಳಿದವರು, ಕ್ಷೌರ ಮತ್ತು ಕೇಶಮುಂಡನದ ನಡುವಿನ ವ್ಯತ್ಯಾಸವನ್ನು ತಿಳಿದವರು ಅರ್ಥ ಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ. ಆದರೆ, ಸಿದ್ದಗಂಗಾ ಮಠ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಕೇಶಮುಂಡನ ಎಂದೇ ನಮೂದಿಸಲಾಗಿತ್ತು.
ಶ್ರೀಗಳ ಪುಣ್ಯಸ್ಮರಣೆ: ಸಿದ್ದಗಂಗಾ ಮಠದ ವಿದ್ಯಾರ್ಥಿಗಳಿಂದ ಸಾಮೂಹಿಕ ಕೇಶ ಮುಂಡನೆ
ಸಿದ್ದಗಂಗಾ ಮಠ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾದ ಗುರುಪೀಠವಲ್ಲ ಎನ್ನುವುದು ನಾಡಿಗೆ ಗೊತ್ತಿರುವ ವಿಚಾರ. ದೊಡ್ಡವರು ದೊಡ್ಡ ಮಾತನ್ನಾಡುತ್ತಾರೆ. ಅವರು, ಹಾಗೇ ಮಾತನಾಡುತ್ತಲೇ ಇರಲಿ ಎಂದು ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ.
ಗುರುವಾರ (ಜ 31) ಮಠದ ಆವರಣದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ
ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆಗೆ ಮಠದಲ್ಲಿ ಭರದಿಂದ ಸಿದ್ಧತೆಗಳು ಸಾಗುತ್ತಿವೆ. ಶ್ರೀಗಳು ಶಿವೈಕ್ಯರಾಗಿ ಎಂಟು ದಿನ ಪೂರ್ಣಗೊಂಡ ಹಿನ್ನಲೆಯಲ್ಲಿ, ಸೋಮವಾರ (ಜ 28) ಸುತ್ತೂರು ಶ್ರೀಗಳು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಇದೇ ಗುರುವಾರ (ಜ 31) ಮಠದ ಆವರಣದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಪುಣ್ಯಸ್ಮರಣೆ ಕಾರ್ಯಕ್ರಮದ ಎರಡು ದಿನದ ಮೊದಲು, (ಜ 29) ವಿದ್ಯಾರ್ಥಿಗಳಿಗೆ ಸಾಮೂಹಿಕ ಹೇರ್ ಕಟ್ಟಿಂಗ್ ನಡೆಯಲಿದೆ.
ಸಿದ್ದಗಂಗಾ ಶ್ರೀಗಳ ಅಂತ್ಯವಿಧಿಗೆ ಮೋದಿ ಗೈರು: ಕೆಣಕಿದ ಪರಮೇಶ್ವರ್, ಚಳಿಬಿಡಿಸಿದ ಟ್ವಿಟ್ಟಿಗರು
ಮಾತೆ ಮಹಾದೇವಿ ಖಾರವಾದ ಪ್ರತಿಕ್ರಿಯೆ
ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ಮಠದಲ್ಲಿರುವ ವಿದ್ಯಾರ್ಥಿಗಳಿಗೆ ಕೇಶಮುಂಡನ ಮಾಡಲಾಗುತ್ತಿದೆ ಎನ್ನುವ ತಪ್ಪು ಸಂದೇಶ ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರಿಗೆ ಹೋಗಿತ್ತೋ ಏನೋ, ಒಟ್ಟಿನಲ್ಲಿ ಈ ವಿಚಾರದಲ್ಲಿ ಮಾತೆ ಖಾರವಾದ ಪ್ರತಿಕ್ರಿಯೆಯನ್ನು ನೀಡಿದ್ದರು. ಸಿದ್ದಲಿಂಗ ಶ್ರೀಗಳು ನೀಡಿರುವ ಆಶೀರ್ವಾದ ಪತ್ರದಲ್ಲಿ ಕೇಶಮುಂಡನ ಎಂದೇ ನಮೂದಿಸಲಾಗಿದೆ.
ಶಿವಕುಮಾರ ಸ್ವಾಮೀಜಿಗೆ ಭಾರತರತ್ನ ನೀಡದಿರುವುದಕ್ಕೆ ಡಿಕೆಶಿ ಏನಂದ್ರು?
ಕೇಶಮುಂಡನ ಬಹುದೊಡ್ಡ ಮೂರ್ಖತನ
ಕೇಶಮುಂಡನ ಬಹುದೊಡ್ಡ ಮೂರ್ಖತನ, ಲಿಂಗಾಯತ ಧರ್ಮದ ಪ್ರಕಾರ, ಯಾರಾದರೂ ಲಿಂಗೈಕ್ಯರಾದರೆ ಅವರ ಹೆಸರಿನಲ್ಲಿ ತಲೆಯನ್ನು ಬೋಳಿಸುವಂತದ್ದು ಇಲ್ಲವೇ ಇಲ್ಲ. ಹಾಗಾಗಿ ಈ ಮೂಢಾಚರಣೆಯನ್ನು ಕಿರಿಯ ಸಿದ್ದಗಂಗಾ ಶ್ರೀಗಳು ಮಾಡಬಾರದು. ಬಸವತತ್ವ ಎಂದು ಹೇಳಿಕೊಂಡು ಅದಕ್ಕೆ ವಿರುದ್ದವಾದ ಕೆಲಸವನ್ನು ಮಾಡಬಾರದು. ಆ ರೀತಿ ಮಾಡಿದರೆ, ಸಿದ್ದಗಂಗಾ ಶ್ರೀಗಳಂತಹ ಮಹಾನ್ ಚೇತನಕ್ಕೆ ತಪ್ಪು ಮಾಡಿದಂತಾಗುತ್ತದೆ - ಮಾತೆ ಮಹಾದೇವಿ.
ಸಾಮೂಹಿಕ ಲಿಂಗಪೂಜೆ, ದಾಸೋಹವನ್ನೂ ಮಾಡಲಿ
ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಪ್ರಾರ್ಥನೆಯನ್ನು ಮಾಡಲಿ, ಸಾಮೂಹಿಕ ಲಿಂಗಪೂಜೆ, ದಾಸೋಹವನ್ನೂ ಮಾಡಲಿ. ಆದರೆ, ಮೌಢ್ಯಾಚರಣೆ, ಮನುವಾದ ಸರಿಯಲ್ಲ. ಮಕ್ಕಳಿಗೆ ಸಾಮೂಹಿಕವಾಗಿ ಕೇಶಮುಂಡನ ಮಾಡಿದರೆ ಅನಾಥಭಾವ ಕಾಡುವುದಿಲ್ಲವೇ ಎಂದು ಪ್ರಶ್ನಿಸಿರುವ ಮಾತೆ ಮಹಾದೇವಿ, ಕಿರಿಯ ಶ್ರೀಗಳು ಹಲವು ವರ್ಷಗಳಿಂದ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದಾರೆ. ಮಕ್ಕಳ ಕೇಶಮುಂಡನಕ್ಕೆ ಅವರು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಸವಿತಾ ಸಮಾಜದ ಬಂಧುಗಳು
ಮಾತೆ ಮಹಾದೇವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಿದ್ದಲಿಂಗಾ ಶ್ರೀಗಳು, ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘ ಶಿಬಿರವನ್ನು ಆಯೋಜಿಸಿ ನಮ್ಮ ವಿದ್ಯಾರ್ಥಿಗಳಿಗೆ ಉಚಿತ ಹೇರ್ ಕಟಿಂಗ್ ಮಾಡುತ್ತಾರೆ. ಇದು ನಾನು ಆರಂಭಿಸಿರುವುದಲ್ಲ, ದೊಡ್ಡ ಶ್ರೀಗಳು ಇದ್ದಾಗಲೇ ಆರಂಭವಾಗಿರುವಂತದ್ದು. ಈ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಬಲವಂತ ಮಾಡುತ್ತಿಲ್ಲ. ಮಾತೆ ಮಹಾದೇವಿ ದೊಡ್ಡವರು, ಹೇರ್ ಕಟ್ಟಿಂಗ್ ಅನ್ನು ಕೇಶಮುಂಡನ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.