ಬಿಜೆಪಿಗೆ ಶಾಕ್ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್!
ಬೆಂಗಳೂರು, ನ. 07: ಆಪರೇಶನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಆಗಾಗ ಆರೋಪ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಆರೋಪ ಮಾಡಿ ಸುಮ್ಮನಾಗದೇ ಯಶಸ್ವಿ ರಿವರ್ಸ್ ಆಪರೇಶನ್ ಮಾಡಿ ಮುಗಿಸಿದ್ದಾರೆ. ಹೌದು ಆರ್ ಆರ್ ನಗರ ಹಾಗೂ ಶಿರಾ ಉಪ ಚುನಾವಣೆಯ ಫಲಿತಾಂಶ ಬರುವ ಮೊದಲೇ ಮತ್ತೊಂದು ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ಸಿದ್ಧತೆ ಆರಂಭಿಸಿದ್ದಾರೆ.
ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನೇ ಪಕ್ಷಕ್ಕೆ ಸೆಳೆಯುವ ಮೂಲಕ ಕಾಂಗ್ರೆಸ್ ನಾಯಕರು ರಾಜಕೀಯ ತಂತ್ರ ಮಾಡಿದ್ದಾರೆ. ಇದು ರಾಜ್ಯ ಬಿಜೆಪಿ ಮಟ್ಟಿಗೆ ಬಹುದೊಡ್ಡ ಎಚ್ಚರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಬೇರೆ ಪಕ್ಷದಿಂದ ಬಂದು ಬಿಜೆಪಿ ಸೇರಿ ಮಂತ್ರಿಯಾಗುತ್ತಿದ್ದವರನ್ನು ನೋಡಿ ರೋಸಿ ಹೋಗಿದ್ದ ಬಿಜೆಪಿಯಲ್ಲಿನ ಬಂಡಾಯವೀಗ ಸ್ಫೋಟವಾದಂತಾಗಿದೆ. ಜೊತೆಗೆ ಮತ್ತೊಂದು ಉಪ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಂಟಿ ಸಿದ್ಧತೆ ಆರಂಭಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರಲು ಬಿಜೆಪಿ ನಾಯಕ ಸಿದ್ಧತೆ ನಡೆಸಿದ್ದಾರೆ. ಇದೇ ಸೋಮವಾರ ಕಾಂಗ್ರೆಸ್ ಕೈ ಹಿಡಿಯಲಿರುವ ಬಿಜೆಪಿ ನಾಯಕ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ!
ಯಶಸ್ವಿ ರಿವರ್ಸ್ ಆಪರೇಶನ್ ಕಮಲ
ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ತುರವಿಹಾಳ್ ಅವರು ಕಾಂಗ್ರೆಸ್ ಸೇರುತ್ತಿದ್ದಾರೆ. ಆಪರೇಶನ್ ಕಮಲದ ಮೂಲಕ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಬಿಜೆಪಿ ಸೆಳೆದಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ತುರವಿಹಾಳ ಅವರನ್ನು ಇದೀಗ ಕಾಂಗ್ರೆಸ್ ಪಕ್ಷ ಸೆಳೆದಿದೆ. ಆ ಮೂಲಕ ನಾವೂ ರಿವರ್ಸ್ ಆಪರೇಶನ್ ಮಾಡುತ್ತೇವೆ ಎಂಬ ಸಂದೇಶವನ್ನು ಕಾಂಗ್ರೆಸ್ ನಾಯಕರು ಕೊಟ್ಟಿದ್ದಾರೆ. ಇದೇ ಸೋಮವಾರ (ನ. 09) ಬಸನಗೌಡ ಪಾಟೀಲ್ ತುರವಿಹಾಳ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ.
ಸಿದ್ದರಾಮಯ್ಯ ಭೇಟಿ ಮಾಡಿದ ತುರವಿಹಾಳ್
ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಸನಗೌಡ ತುರವಿಹಾಳ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು. ಇದಕ್ಕೂ ಮೊದಲು ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿದ್ದರು. ಸಿದ್ದರಾಮಯ್ಯ ಅವರ ಪ್ರಯತ್ನದಿಂದ ತುರವಿಹಾಳ್ ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ನಾಯಕರು ಸಹಮತ ವ್ಯಕ್ತಪಡಿಸಿದ್ದರು.
ಮಾಜಿ ಸಂಸದ ಬಿ.ವಿ. ನಾಯಕ್, ಕಾಂಗ್ರೆಸ್ ಶಾಸಕ ಬಸನಗೌಡ ಪಾಟೀಲ್ ದದ್ದಲ್, ಅಮರೇಗೌಡ ಬಯ್ಯಾಪೂರ, ಎನ್.ಎಸ್. ಬೋಸ್ರಾಜ್, ಶಾಸಕ ಡಿ.ಎಸ್. ಹುಲಗೇರಿ ಸೇರಿದಂತೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆಗೆ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿ ಮನವೊಲಿಸಿದ್ದರು.
ನಂತರ ಡಿಕೆಶಿ ಭೇಟಿ ಮಾಡಿದ ಬಸನಗೌಡ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ತುರವಿಹಾಳ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ತುರವಿಹಾಳ್ ಅವರು ಸದಾಶಿನಗರದ ಡಿಕೆಶಿ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ನಾಯಕ್, ಎನ್.ಎಸ್. ಬೋಸ್ರಾಜ್, ಬಸವರಾಜ್ ಪಾಟೀಲ್ ಇಟಗಿ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಪಾಟೀಲ್ ದದ್ದಲ್, ಲಿಂಗಸೂಗೂರು ಶಾಸಕ ಡಿ.ಎಸ್. ಹುಲಿಗೇರಿ, ಮಾಜಿ ಸಚಿವ ಹಂಪನಗೌಡ ಬಾದರ್ಲಿ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟಿಲ್, ಹನುಮಂತಪ್ಪ ಮುದ್ದಾಪೂರ್ ಈ ಸಂದರ್ಭದಲ್ಲಿ ಹಾಜರಿದ್ದರು.
Recommended Video
ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್ ಕಣಕ್ಕೆ
ಆಪರೇಶನ್ ಕಮಲದ ಮೂಲಕ ರಾಯಚೂರು ಜಿಲ್ಲೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಬಿಜೆಪಿ ಸೆಳೆದಿತ್ತು. ಪ್ರತಾಪಗೌಡ ಪಾಟೀಲ್ ಆವರು ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರುವ ಮೂಲಕ ಅನರ್ಹ ಶಾಸಕರಾಗಿದ್ದಾರೆ.
ಇದೀಗ, ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಪಾಟೀಲ್ ತುರವಿಹಾಳ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆಶಿ, ಸಿದ್ದರಾಮಯ್ಯ ಅವರ ಜಂಟಿ ಕಾರ್ಯಾಚರಣೆ ಸಫಲವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುರವಿಹಾಳ್ ಅವರು ಕೇವಲ 218 ಮತಗಳಿಂದ ಪ್ರತಾಪಗೌಡ ಪಾಟೀಲ್ ಎದುರು ಸೋತಿದ್ದರು.