ಚುಟುವಟಿಕೆ ಕೇಂದ್ರ ಬಿಂದುವಾದ ಯಡಿಯೂರಪ್ಪ 'ಧವಳಗಿರಿ' ನಿವಾಸ
ಬೆಂಗಳೂರು, ಸೆಪ್ಟೆಂಬರ್ 12 : ಆಪರೇಷನ್ ಕಮಲದ ಸುದ್ದಿ ರಾಜ್ಯ ರಾಜಕೀಯದಲ್ಲಿ ಬಲವಾಗಿ ಹಬ್ಬಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು, ನಾಯಕರ ಹೇಳಿಕೆಗಳು ಬುಧವಾರವೂ ಸಹ ಮುಂದುವರೆದಿವೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ 'ಧವಳಗಿರಿ' ನಿವಾಸ ಹಲವು ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಗೌರಿ ಹಬ್ಬದ ದಿನವಾದ ಇಂದು ರಾಜಕೀಯ ನಾಯಕರು, ವಿವಿಧ ಕ್ಷೇತ್ರದ ಶಾಸಕರು ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ಜಾರಕಿಹೊಳಿ ಬ್ರದರ್ಸ್ ಗೆ ವಿದೇಶದಿಂದ ಬಂತು ಸಿದ್ದರಾಮಯ್ಯ ಸಂದೇಶ!
ಶಾಸಕರಾದ ಗೋವಿಂದ ಕಾರಜೋಳ, ಎಂ.ಪಿ.ರೇಣುಕಾಚಾರ್ಯ, ಪ್ರೀತಮ್ ಗೌಡ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಬುಧವಾರ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು.
ಉದ್ಯಮ, ರಾಜಕೀಯ : ಜಾರಕಿಹೊಳಿ ಸಹೋದರರ ಪ್ರಭಾವವಿದು!
ಅತ್ತ ಕಾಂಗ್ರೆಸ್ ಪಕ್ಷದಲ್ಲಿಯೂ ಚುಟುವಟಿಕೆ ಚುರುಕಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸತೀಶ್ ಜಾರಕಿಹೊಳಿ ಅವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಸಚಿವ ರಮೇಶ್ ಜಾರಕಿಹೊಳಿ ಅವರು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ.
ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್ಗೆ ಅಸ್ತು?
ಬಿಜೆಪಿಯ ಒಬ್ಬ ಶಾಸಕನನ್ನು ಟಚ್ ಮಾಡೋಕೆ ಆಗಲ್ಲ
ಯಡಿಯೂರಪ್ಪ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, 'ಕಾಂಗ್ರೆಸ್ ಮತ್ತು ಜೆಡಿಸ್ ನವರು ಬಿಜೆಪಿಯ ಒಬ್ಬ ಶಾಸಕನನ್ನು ಟಚ್ ಮಾಡೋಕೆ ಆಗಲ್ಲ. ಆಪರೇಷನ್ ಕಮಲದ ಬಗ್ಗೆ ಮಾತನಾಡುವಷ್ಟು ದೊಡ್ಡ ನಾಯಕ ನಾನಲ್ಲ. ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ. ಯಡಿಯೂರಪ್ಪ ಅವರಿಗೆ ರಾಜ್ಯದ ಜನರ ಮತ್ತು ಮಠಾಧೀಶರ ಆಶೀರ್ವಾದವಿದೆ' ಎಂದು ಹೇಳಿದರು.
ಒಂದೇ ಒಂದು ಪಾನ್ ಅಲ್ಲಾಡಿಸಲಿ ನೋಡೋಣ : ಅಖಾಡಕ್ಕಿಳಿದ ಡಿಕೆಶಿ!
ಬಿಜೆಪಿ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಬಿಜೆಪಿ ನಾಯಕರು ಸರ್ಕಾರ ಪತನವಾಗಲಿದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಸರ್ಕಾರ ಸುಭದ್ರವಾಗಿದೆ' ಎಂದು ಹೇಳಿದರು.
ಅಂದೇ ರಾಜೀನಾಮೆ ಕೊಡುತ್ತಿದ್ದೆವು
'ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಬಳಿಕ ನಮಗೆ ಮುಖಭಂಗವಾಗಿದೆ ಎಂಬುದು ತಪ್ಪು. ಮುಖಭಂಗವಾಗಿದೆ ಎಂದರೆ ಅಂದೇ ರಾಜೀನಾಮೆ ನೀಡುತ್ತಿದ್ದೆವು. ದಿನೇಶ್ ಗುಂಡೂರಾವ್ ಮತ್ತು ಡಾ.ಜಿ.ಪರಮೇಶ್ವರ ಜೊತೆ ಚರ್ಚಿಸಿದ್ದೇವೆ. ನಮ್ಮ ಎಲ್ಲಾ ಸಮಸ್ಯೆ ಬಗೆಹರಿದಿದೆ' ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಬುಧವಾರ ಹೇಳಿದರು.
ಬಿಜೆಪಿಯ 10 ಶಾಸಕರ ಹೆಸರು ಹೇಳುವೆ
ಸಚಿವ ಸಾ.ರಾ.ಮಹೇಶ್ ಅವರು ಆಪರೇಷನ್ ಕಮಲದ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 'ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗುವ ಒಬ್ಬ ಶಾಸಕರ ಹೆಸರನ್ನು ಅವರು ಹೇಳಲಿ ನೋಡೋಣ, ಬಿಜೆಪಿಯಿಂದ ಜೆಡಿಎಸ್ಗೆ ಬರಲು ಸಿದ್ಧವಿರುವ 10 ಶಾಸಕರ ಹೆಸರನ್ನು ನಾನು ಹೇಳುವೆ. ನಮ್ಮ ಜೊತೆ ಬಿಜೆಪಿಯ 10 ಶಾಸಕರು ಸಂಪರ್ಕದಲ್ಲಿದ್ದಾರೆ. ನಾನು ಮತ್ತು ಸಿ.ಎಸ್.ಪುಟ್ಟರಾಜು ಅವರು ಶಾಸಕರನ್ನು ಜೆಡಿಎಸ್ಗೆ ಕರೆತರಲು ಸಿದ್ಧರಿದ್ದೇವೆ' ಎಂದರು.