ರವಿ ಚನ್ನಣ್ಣನವರ್ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗ
ಬೆಂಗಳೂರು, ಆಗಸ್ಟ್ 05: ಯಡಿಯೂರಪ್ಪ ಅವರ ಏಕಾಂಗಿ ಸರ್ಕಾರದಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದ್ದು, ಇಂದು ರವಿ ಚನ್ನಣ್ಣನವರ್ ಸೇರಿ 09 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಅಪರಾಧ ತನಿಖೆ ವಿಭಾಗದ ಎಸ್ಪಿ ಆಗಿದ್ದ ಐಪಿಎಸ್ ಅಧಿಕಾರಿ ಸಿಂಗಂ ಖ್ಯಾತಿಯ ರವಿ ಚನ್ನಣ್ಣನವರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಆಗಿ ನೇಮಕ ಮಾಡಲಾಗಿದೆ.
ವರ್ಗಾವಣೆ : ಸಿಎಟಿಗೆ ಅರ್ಜಿ ಸಲ್ಲಿಸಿದ ಅಲೋಕ್ ಕುಮಾರ್
ಮತ್ತೊಬ್ಬ ಪ್ರಮುಖ ಅಧಿಕಾರಿ ರವಿಕಾಂತೇಗೌಡ ಅವರನ್ನು ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಇವರನ್ನು ಈ ಮುಂಚೆಯೇ ವರ್ಗಾವಣೆ ಮಾಡಲಾಗಿತ್ತು ಆದರೆ ಸ್ಥಳ ನಿಯೋಜನೆ ಮಾಡಿರಲಿಲ್ಲ.
ಪೊಲೀಸ್ ಆಡಳಿತ ವಿಭಾಗದ ಎಡಿಜಿ ಆಗಿದ್ದ ಪರಶಿವ ಮೂರ್ತಿ ಅವರನ್ನು ಬೆಂಗಳೂರು ನಗರ ವಿಭಾಗದ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಅಪರಾಧ ಮತ್ತು ತಂತ್ರಜ್ಞಾನ ಸೇವೆ ಎಡಿಜಿ ಆಗಿದ್ದ ಸಬ್ದುಲ್ಲಾ ಸಲೀಮ್ ಅವರನ್ನು ಆಡಳಿತ ವಿಭಾಗದ ಎಡಿಜಿ ಆಗಿ ನೇಮಿಸಲಾಗಿದೆ. ಕರ್ನಾಟಕ ಮೀಸಲು ಪಡೆಯ ಕಮಾಂಡೆಂಟ್ ಆಗಿದ್ದ ಕುಲದೀಪ್ ಕುಮಾರ್ ಜೈನ್ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ರದ್ದು
ಬೆಂಗಳೂರು ನಗರ ಅಪರಾಧ ವಿಭಾಗದ ಉಪಾಯುಕ್ತರಾಗಿದ್ದ ಎಸ್ ಗಿರೀಶ್ ಅವರನ್ನು ಕರ್ನಾಟಕ ಮೀಸಲು ಪಡೆ 9 ನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿ ನೇಮಿಸಲಾಗಿದೆ.
ಬೆಂಗಳೂರು ನಗರ ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಹರಿಶೇಖರನ್ ಅವರನ್ನು ಕರ್ನಾಟಕ ಮೀಸಲು ಪಡೆಯ ಐಜಿ ಆಗಿ ವರ್ಗ ಮಾಡಲಾಗಿದೆ.
ಉಡುಪಿ-ಕಾರ್ಕಳದ ನಕ್ಸಲ್ ವಿರೋಧಿ ಪಡೆಯ ಎಸ್ಪಿ ಆಗಿದ್ದ ಅರುನಾಂಗ್ಷು ಗಿರಿ ಅವರನ್ನು ಮಂಗಳೂರು ನಗರ ಕಾನೂನು, ಸುವ್ಯವಸ್ಥೆ ಉಪ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಇದರ ಜೊತೆ ಇಂದೇ ಕೆಲವು ಐಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದ್ದು, ಬಿಡಿಎ ಕಮೀಷನರ್ ಆಗಿದ್ದ ಮಂಜುಳ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಸಿಜಿ ಪ್ರಕಾಶ್ ಬಿಡಿಎ ನೂತನ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಹಾಗೆಯೇ ಮಂಡ್ಯದ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ವೆಂಕಟೇಶ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.