ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಭಟ್ಕಳ, ಜನವರಿ 19 : ಚುನಾವಣೆ ಸಮೀಪಿಸುತ್ತಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕೆ ಇಳಿಯಲು ಕಸರತ್ತು ಆರಂಭಿಸಿವೆ. ಮತೀಯ ಸೂಕ್ಷ್ಮ ಪ್ರದೇಶವಾದ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿಯೂ ಚುನಾವಣಾ ಕಾವು ಏರತೊಡಗಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ಅಂತಿಮಗೊಂಡಂತಿದೆ. ಬಿಜೆಪಿಯಲ್ಲಿ ಮಾತ್ರ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯಲಾರಂಭಿಸಿದೆ.
ಭಟ್ಕಳದಲ್ಲಿ ಸುನೀಲ್ ನಾಯ್ಕ್ ಅಭಿಮಾನಿ-ವಿರೋಧಿಗಳ ಹಗ್ಗಜಗ್ಗಾಟ
2013ರಲ್ಲಿ ಬಿಜೆಪಿಯಿಂದ ಗೋವಿಂದ ನಾಯ್ಕ, ಕಾಂಗ್ರೆಸ್ನ ಜೆ.ಡಿ.ನಾಯ್ಕ, ಕೆಜೆಪಿಯಿಂದ ಶಿವಾನಂದ ನಾಯ್ಕ ಸ್ಪರ್ಧಿಸಿದ್ದರು. ಮೂವರ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಆದರೆ, ಸದ್ದಿಲ್ಲದೆ ಜನರು ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಾಂಕಾಳ ವೈದ್ಯ ಅವರನ್ನು ಗೆಲ್ಲಿಸಿದ್ದರು.
ಭಟ್ಕಳ ಕ್ಷೇತ್ರ: ಮತೀಯ ಸೂಕ್ಷ ಕ್ಷೇತ್ರದ ಗದ್ದುಗೆ ಯಾರ ಹೆಗಲಿಗೆ?
ಈ ಬಾರಿ ಮುರುಡೇಶ್ವರನ ಕೃಪೆ ಯಾರ ಮೇಲಿದೆ?. ಭಟ್ಕಳದ ಜನರು ಯಾರನ್ನು ಚುನಾಯಿಸುತ್ತಾರೆ? ಎಂದು ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಕಮಲ ಅರಳುತ್ತಾ? ಅಥವಾ ಜೆಡಿಎಸ್ ಗೆಲ್ಲುತ್ತಾ ಎಂದು ಕಾದು ನೋಡಬೇಕು. ಭಟ್ಕಳದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ..
ಶಿವಾನಂದ ನಾಯ್ಕ ಆಕಾಂಕ್ಷಿ
ಈಗ ಬಿಜೆಪಿ-ಕೆಜೆಪಿ ವಿಲೀನವಾಗಿದೆ. ಹಿಂದಿನ ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿದ್ದ ಶಿವಾನಂದ ನಾಯ್ಕ ಈಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸೇರಿಕೊಂಡಿದ್ದಾರೆ. ಟಿಕೆಟ್ ಕೊಟ್ಟರೆ ನೋಡೆ ಬಿಡುವೆ ಎಂಬ ಲೆಕ್ಕದಲ್ಲಿ ಕಾದು ಕುಳಿತಿದ್ದಾರೆ.
ವೈದ್ಯರ ಚಿತ್ತ ಕಾಂಗ್ರೆಸ್ ನತ್ತ
ಕಳೆದ ಬಾರಿ ಪಕ್ಷೇತರರಾಗಿ ಗೆದ್ದಿದ್ದ ಮಾಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಇತ್ತೀಚೆಗೆ ಭಟ್ಕಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಮಂಕಾಳ ವೈದ್ಯರಿಗೆ ನೀವು ಮತ್ತೊಮ್ಮೆ ಆಶೀರ್ವಾದ ಮಾಡಬೇಕು' ಎಂದು ಜನರಲ್ಲಿ ಮನವಿ ಮಾಡಿ, ಕಾಂಗ್ರೆಸ್ ಟಿಕೆಟ್ ಪಕ್ಕಾ ಎಂದು ಪರೋಕ್ಷವಾಗಿ ಘೋಷಿಸಿದ್ದಾರೆ. ಆದರೆ, ತಂಜೀಂ ಬೆಂಬಲಿತ ಮುಝಾಮಿಲ್ ಖಾಜಿಯಾ ಮತ್ತು ಯೂನೂಸ್ ಖಾಜಿಯಾ ಹೆಸರು ಕೂಡ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿದೆ.
ಜೆಡಿಎಸ್ ಅಭ್ಯರ್ಥಿ ಯಾರು?
ಜೆಡಿಎಸ್ನ ಇನಾಯತ್ ಉಲ್ಲಾ ಶಾಬಂದ್ರಿ ಕೂಡ ತೆರೆಮರೆಯಲ್ಲಿ ಭಟ್ಕಳದಲ್ಲಿ ಸ್ಪರ್ಧಿಸಿ, ಮುಸ್ಲಿಂ ಮತಗಳ ಬೆಂಬಲದಿಂದ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಚುನಾವಣೆಗೆ ನಿಂತರೆ ಮುಸ್ಲಿಂ ಮತಗಳನ್ನು ಸಂಪೂರ್ಣವಾಗಿ ಇವರೇ ಬಾಚಿಕೊಳ್ಳುವುದು ಖಚಿತ ಎಂಬ ಮಾತಿದೆ.
ಟಿಕೆಟ್ ಆಕಾಂಕ್ಷಿಗಳು ಹೆಚ್ಚು
ಬಿಜೆಪಿಯಲ್ಲಿ ಮಾತ್ರ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಆದರೆ, ಯುವ ಮುಖಂಡ ಸುನೀಲ್ ನಾಯ್ಕ ಹಾಗೂ ಸಂಘ ಪರಿವಾರದ ಹಿನ್ನಲೆಯ ಗೋವಿಂದ ನಾಯ್ಕರ ಬೆಂಬಲಿಗರ ನಡುವೆಯೇ ಕೆಸರೆರಚಾಟ ಶುರುವಾಗಿದೆ. ಇವರಿಬ್ಬರು ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಯಡಿಯೂರಪ್ಪ ಬೆಂಬಲಿಗರು
ಯಡಿಯೂರಪ್ಪರ ಅವರ ಕಟ್ಟಾ ಬೆಂಬಲಿಗ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ ಅವರು ಬಿಜೆಪಿಗೆ ಮರಳಿದ್ದಾರೆ. ಆದ್ದರಿಂದ, ಬಿಜೆಪಿ ಟಿಕೆಟ್ ಯಾರಿಗೆ ನೀಡಬೇಕು? ಎಂಬುದು ವರಿಷ್ಠರಿಗೆ ಸವಾಲಿನ ಕೆಲಸವಾಗಿದೆ.
ಶಿವಾನಿ ಶಾಂತರಾಮ
ಶಿವಾನಿ ಶಾಂತಾರಾಮ ಹಾಗೂ ಇತ್ತೀಚೆಗೆ ದಿ.ತಿಮ್ಮಪ್ಪ ನಾಯ್ಕರ ಪುತ್ರ ಸುರೇಶ್ ನಾಯ್ಕ ಸೇರಿದಂತೆ ಸುಮಾರು ಏಳಕ್ಕೂ ಅಧಿಕ ಆಕಾಂಕ್ಷಿಗಳು ಕೂಡ ಬಿಜೆಪಿಯ ಟಿಕೆಟ್ ಬಯಸಿದ್ದಾರೆ. ಕಬಡ್ಡಿ, ಕ್ರಿಕೆಟ್ ಪಂದ್ಯ ಆಯೋಜನೆ. ಪರೀಕ್ಷಾ ತರಬೇತಿ ಕಾರ್ಯಕ್ರಮ ಸೇರಿದಂತೆ ಒಂದಿಲ್ಲೊಂದು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಿಂದ ಗುರುತಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.