ಬೀದರ್ ದಕ್ಷಿಣ ಕಾಂಗ್ರೆಸ್ ಟಿಕೆಟ್ಗೆ ಖೇಣಿ, ಚಂದ್ರಾಸಿಂಗ್ ಪೈಪೋಟಿ!
ಬೀದರ್, ಏಪ್ರಿಲ್ 06 : ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ಗಾಗಿ ಚಂದ್ರಾಸಿಂಗ್ ಮತ್ತು ಅಶೋಕ್ ಖೇಣಿ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ಸಿಗಲಿದೆ? ಎಂದು ಕಾದು ನೋಡಬೇಕು.
ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬಿಸಿಲಿನ ತಾಪದಂತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ಜಿಲ್ಲಾ ನಾಯಕರ ವಿರೋಧದ ನಡುವೆಯೂ ಖೇಣಿ ಕಾಂಗ್ರೆಸ್ ಸೇರಿದ್ದಾರೆ. ಈಗ ಟಿಕೆಟ್ ವಿಚಾರ ಬಂದಾಗ ಅಸಮಾಧಾನ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಚಂದ್ರಾಸಿಂಗ್ ಅವರು ಮಾಜಿ ಮುಖ್ಯಮಂತ್ರಿ ದಿ.ಧರಂಸಿಂಗ್ ಅವರ ಅಳಿಯ. ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಳೆದ 9ವರ್ಷಗಳಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಸಹಜವಾಗಿ ಈ ಬಾರಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
'ಕೈ' ಹಿಡಿದ ಖೇಣಿ, ಬೀದರ್ ದಕ್ಷಿಣದ ರಾಜಕೀಯ ಚಿತ್ರಣ ಬದಲು!
ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ ಮೇಲೆ ಟಿಕೆಟ್ ಯಾರಿಗೆ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಸದ್ಯದ ಮಾಹಿತಿಯಂತೆ ಅಶೋಕ್ ಖೇಣಿ, ಚಂದ್ರಾಸಿಂಗ್, ಪ್ರದೀಪ್ ಕೂಶನುರು, ಮೀನಾಕ್ಷಿ ಸಂಗ್ರಾಮ್ ಮತ್ತು ಅಶೋಕ್ ಕಂದಗೋಳ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರ ಪರಿಚಯ : 'ನೈಸ್' ಮುಖ್ಯಸ್ಥರನ್ನು ಗೆಲ್ಲಿಸಿದ ಕ್ಷೇತ್ರವಿದು!
ಅಶೋಕ್ ಖೇಣಿಗೆ ಟಿಕೆಟ್?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಟಿಕೆಟ್ ನೀಡುವ ಭರವಸೆ ಮೇಲೆಯೇ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂಬ ಸುದ್ದಿ ಹಬ್ಬಿದೆ. ಆದ್ದರಿಂದ, ಖೇಣಿ ಅವರು ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ.
ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ಗೆ ಇನ್ನೊಬ್ಬ ಪ್ರಬಲ ಆಕಾಂಕ್ಷಿ ಚಂದ್ರಾಸಿಂಗ್. ಕ್ಷೇತ್ರದಲ್ಲಿ ಕಳೆದ9 ವರ್ಷಗಳಿಂದ ಪಕ್ಷ ಸಂಘಟಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ, ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಖೇಣಿ ಅವರು ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಚಂದ್ರಾಸಿಂಗ್ ಅವರು ವಿರೋಧ ವ್ಯಕ್ತಪಡಿಸಿದ್ದರು.
ಚಂದ್ರಾಸಿಂಗ್ ಅವರ ವಿರುದ್ಧ ಷಡ್ಯಂತ್ರ
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಳಿಯ ಚಂದ್ರಾಸಿಂಗ್ ಅವರನ್ನು ಜಿಲ್ಲೆಯ ರಾಜಕೀಯದಿಂದಲೇ ದೂರ ಸರಿಸಲು ಕೆಲವು ಸಂಘಟನೆಗಳು ಷಡ್ಯಂತ್ರ ರೂಪಿಸಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದ್ದರಿಂದಲೇ ಖೇಣಿ ಕಾಂಗ್ರೆಸ್ ಸೇರುವಾಗ ಪಕ್ಷದ ಕೆಲವು ನಾಯಕರು ಮೌನಕ್ಕೆ ಶರಣಾಗಿದ್ದರು.
ಅಶೋಕ್ ಖೇಣಿ ಕಾಂಗ್ರೆಸ್ ಸೇರುವಾಗ ಮಾಧ್ಯಮಗಳ ಜೊತೆ ಮಾತನಾಡಿದ್ದ ಚಂದ್ರಾಸಿಂಗ್, 'ನಾಲ್ಕೂವರೆ ವರ್ಷದಿಂದ ಅಶೋಕ್ ಖೇಣಿ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಈಗ ಅವರನ್ನು ಅಭ್ಯರ್ಥಿಯಾಗಿ ಮಾಡಲಾಗುತ್ತದೆ ಎಂಬ ಸುದ್ದಿಇದೆ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆ ಮಾಡಿದಂತೆ ಆಗುವುದಿಲ್ಲವೇ?. ನಾವು ಜನರ ಬಳಿ ಹೋಗಿ ಹೇಗೆ ಮತ ಕೇಳಬೇಕು?' ಎಂದು ಪ್ರಶ್ನಿಸಿದ್ದರು.
ಏಪ್ರಿಲ್ 11ರಂದು ಸ್ಟಷ್ಟ ಚಿತ್ರಣ
ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ಗೆ ಅಶೋಕ್ ಖೇಣಿ, ಚಂದ್ರಾಸಿಂಗ್, ಪ್ರದೀಪ್ ಕೂಶನುರು, ಮೀನಾಕ್ಷಿ ಸಂಗ್ರಾಮ್, ಅಶೋಕ್ ಕಂದಗೋಳ ಅವರು ಆಕಾಂಕ್ಷಿಗಳಾಗಿದ್ದಾರೆ. ಚುನಾವಣೆ ಸಮಯದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ.
ಏಪ್ರಿಲ್ 11 ರಂದು ಎಲ್ಲಾ ಗಾಳಿ ಸುದ್ದಿಗಳಿಗೆ ತಡೆ ಬೀಳಲಿದೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. ಅಂದು ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಬೀದರ್ ದಕ್ಷಿಣ ಕ್ಷೇತ್ರದ ಟಿಕೆಟ್ಗೆ ಯಾರಿಗೆ ಎಂದು ಘೋಷಣೆಯಾಗುವ ಸಾಧ್ಯತೆ ಇದೆ.
ಈಶ್ವರ ಖಂಡ್ರೆ ಮೌನವಾಗಿದ್ದಾರೆ
ಧರಂಸಿಂಗ್ ನಿಧನದ ಬಳಿಕ ಬೀದರ್ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗಿದೆ. ಅಶೋಕ್ ಖೇಣಿ ಅವರ ಪಕ್ಷ ಸೇರ್ಪಡೆ ಸಮಯದಲ್ಲಿ ಜಿಲ್ಲಾ ನಾಯಕರ ಅಭಿಪ್ರಾಯಕ್ಕೆ ಬೆಲೆ ನೀಡಿಲ್ಲ ಎಂಬ ಆರೋಪಗಳೂ ಇವೆ.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸಹ ಅಶೋಕ್ ಖೇಣಿ ಪಕ್ಷ ಸೇರ್ಪಡೆ ವಿಚಾರದಲ್ಲಿ ಮೌನವಾಗಿದ್ದರು. ಧರಂಸಿಂಗ್ ಅವರ ಕುಟುಂಬದವರ ಬೆಂಬಲಕ್ಕೆ ಸಚಿವರು ನಿಲ್ಲಲಿಲ್ಲ ಎಂಬ ಅಸಮಾಧಾನವೂ ಕೆಲವು ನಾಯಕರಲ್ಲಿದೆ.