ಚಿಕ್ಕಪೇಟೆ ಬಿಜೆಪಿ ಟಿಕೆಟ್ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳು!
ಬೆಂಗಳೂರು, ಜನವರಿ 16 : ಉದ್ಯಾನ ನಗರಿ ಬೆಂಗಳೂರಿನ ಪ್ರಮುಖ ವ್ಯಾಪಾರಿ ಕೇಂದ್ರ ಚಿಕ್ಕಪೇಟೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದ ಬಿಜೆಪಿ ಟಿಕೆಟ್ಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಕ್ಷೇತ್ರದ ಟಿಕೆಟ್ಗೆ 5 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಸದ್ಯ, ಕಾಂಗ್ರೆಸ್ ವಶದಲ್ಲಿರುವ ಕ್ಷೇತ್ರ ಚಿಕ್ಕಪೇಟೆ. ಆರ್.ವಿ.ದೇವರಾಜ್ ಕ್ಷೇತ್ರದ ಶಾಸಕರು. 2018ರ ಚುನಾವಣೆಗೆ ಆರ್.ವಿ.ದೇವರಾಜ್ ಅಥವ ಅವರ ಪುತ್ರ, ಸುಧಾಮನಗರ ವಾರ್ಡ್ ಬಿಬಿಎಂಪಿ ಸದಸ್ಯ ಆರ್.ವಿ.ಯುವರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಬಹುದು.
ಚಿಕ್ಕಪೇಟೆಯಿಂದ ಕಣಕ್ಕಿಳಿಯಲಿದ್ದಾರೆ ಪಿ.ಜಿ.ಆರ್.ಸಿಂಧ್ಯಾ?
ಆದರೆ, ಬಿಜೆಪಿಯಲ್ಲಿ ಕ್ಷೇತ್ರದ ಟಿಕೆಟ್ಗಾಗಿ ಭಾರೀ ಪೈಪೋಟಿ ಇದೆ. 5 ಕ್ಕೂ ಹೆಚ್ಚು ನಾಯಕರು ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಕೆಲವು ನಾಯಕರ ಸಂಕ್ರಾಂತಿ ಶುಭಾಶಯ ಕೋರುವ ಫ್ಲೆಕ್ಸ್ಗಳು ಜನರಿಗೆ ಚುನಾವಣೆಯ ಸ್ವಾಗತ ಕೋರುತ್ತಿವೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಹಿರಿಯ ಬಿಬಿಎಂಪಿ ಸದಸ್ಯರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಅಕ್ಕ-ಪಕ್ಕದ ಕ್ಷೇತ್ರವಾದ ಚಿಕ್ಕಪೇಟೆ ಮೇಲೆ ಗಮನಹರಿಸಿದ್ದಾರೆ. ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಬಿಟ್ಟ ವಿಚಾರ...
ಕಳೆದ ಚುನಾವಣೆಯಲ್ಲಿ ಸೋತಿದ್ದರು
ಉದಯ ಬಿ.ಗರುಡಾಚಾರ್ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸೋತಿದ್ದ ಇವರು ಈ ಬಾರಿಯೂ ಟಿಕೆಟ್ ಬಯಸಿದ್ದಾರೆ. ಕಳೆದ ಬಾರಿ 31,655 ಮತಗಳನ್ನು ಪಡೆದು, ಆರ್.ವಿ.ದೇವರಾಜ್ ವಿರುದ್ಧ ಸೋಲು ಕಂಡಿದ್ದರು.
ಎನ್.ಆರ್.ರಮೇಶ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಹಗರಣಗಳನ್ನು ಬಯಲು ಮಾಡುತ್ತಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ, ಯಡಿಯೂರು ವಾರ್ಡ್ ಮಾಜಿ ಸದಸ್ಯ ಎನ್.ಆರ್.ರಮೇಶ್ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆರ್.ಅಶೋಕ್, ಕೇಂದ್ರ ಸಚಿವ ಅನಂತ್ ಕುಮಾರ್ ಇಬ್ಬರಿಗೂ ಆಪ್ತರಾಗಿರುವ ರಮೇಶ್ಗೆ ಟಿಕೆಟ್ ಸಿಗುತ್ತದೆಯೇ? ಕಾದು ನೋಡಬೇಕು.
ಮಾಜಿ ಶಾಸಕರು ಆಕ್ಷಾಂಕ್ಷಿ
ಡಾ.ಹೇಮಚಂದ್ರ ಸಾಗರ್ ಒಂದು ಬಾರಿ ಚಿಕ್ಕಪೇಟೆ ಕ್ಷೇತ್ರದ ಶಾಸಕರಾಗಿದ್ದವರು. ಈ ಬಾರಿ ಕೂಡಾ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರು ಹೇಮಚಂದ್ರ ಸಾಗರ್. ಟಿಕೆಟ್ ಸಿಗಲಿದೆಯೇ ಕಾದು ನೋಡಬೇಕು.
ಬಿಬಿಎಂಪಿ ಮಾಜಿ ಮೇಯರ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಎಸ್.ಕೆ.ನಟರಾಜ್ ಅವರು ಸಹ ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅವರು ಒಳಪಡುತ್ತಾರೆ. ಆದರೆ, ಅಲ್ಲಿ ಬಿ.ಎನ್.ವಿಜಯಕುಮಾರ್ ಶಾಸಕರು. ಆದ್ದರಿಂದ, ಚಿಕ್ಕಪೇಟೆ ಮೇಲೆ ಕಣ್ಣಿಟ್ಟಿದ್ದಾರೆ.
ಇನ್ನೂ ಕೆಲವು ನಾಯಕರು ಟಿಕೆಟ್ ಬಯಸಿದ್ದಾರೆ
ಬಿಜೆಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ, ಪಾಲಿಕೆ ಸದಸ್ಯರಾದ ಭೈರಸಂದ್ರ ನಾಗರಾಜ್, ಮಾಜಿ ಸದಸ್ಯರಾದ ಎ.ಎಲ್.ಶಿವಕುಮಾರ್, ಸಿ.ಕೆ.ರಾಮಮೂರ್ತಿ ಮುಂತಾದ ನಾಯಕರು ಟಿಕೆಟ್ ಆಕಾಂಕ್ಷಿ. ಯಾರಿಗೆ ಟಿಕೆಟ್ ಎಂಬುದು ಅಮಿತ್ ಶಾ ಅವರಿಗೆ ಬಿಟ್ಟ ವಿಚಾರ.
ಪಿ.ಜಿ.ಆರ್.ಸಿಂಧ್ಯಾ ಕಣಕ್ಕೆ
ಇನ್ನು ಜೆಡಿಎಸ್ನಿಂದ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಚಿಕ್ಕಪೇಟೆಯಿಂದ ಈ ಬಾರಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕಳೆದ ಚುನಾವಣೆಯಲ್ಲಿ ಕನಕಪುರದಿಂದ ಸ್ಪರ್ಧಿಸಿದ್ದ ಅವರು ಈ ಬಾರಿ ಕ್ಷೇತ್ರ ಬದಲಾವಣೆ ಮಾಡಿ ಚಿಕ್ಕಪೇಟೆಗೆ ಬರುತ್ತಿದ್ದಾರೆ. ಆದರೆ, ಜೆಡಿಎಸ್ ನಾಯಕರು ಈ ಬಗ್ಗೆ ಇನ್ನೂ ಯಾವುದೇ ಹೇಳಿಕೆ ಕೊಟ್ಟಿಲ್ಲ.
ದೇವರಾಜ್, ಯುವರಾಜ್ ಯಾರ ಸ್ಪರ್ಧೆ?
ಚಿಕ್ಕಪೇಟೆ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಆರ್.ವಿ.ದೇವರಾಜ್. 2013ರ ಚುನಾವಣೆಯಲ್ಲಿ 44,714 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿ ಅವರ ಪುತ್ರ ಸ್ಪರ್ಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಯಾರು ಸ್ಪರ್ಧಿಸಲಿದ್ದಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.