ಉಪ ಚುನಾವಣೆ: ಕಾಂಗ್ರೆಸ್ ನಾಯಕರಿಗೆ ಬಹಿರಂಗ ಎಚ್ಚರಿಕೆ ಕೊಟ್ಟ ಮಾಜಿ ಸಚಿವ!
ಬೆಂಗಳೂರು, ಸೆ. 29: ಎಲ್ಲ ಪಕ್ಷಗಳಿಗೂ ಅತ್ಯಂತ ಪ್ರತಿಷ್ಠೆಯಾಗಿರುವ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಅದರಲ್ಲಿಯೂ ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ಗಾಗಿ ಬಹಿರಂಗ ಹೇಳಿಕೆಗಳು ಹೆಚ್ಚಾಗುತ್ತಿವೆ. ಹಾನಗಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಭೇಟಿಗೆ ಬಂದಿದ್ದ ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಗರಂ ಆಗಿ ಹೇಳಿಕೆ ನೀಡಿದ್ದಾರೆ.
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಈಗಾಗಲೇ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಿ ಪ್ರಕಟಿಸಿದೆ. ಆದರೆ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕೃತವಾಗಿ ತಮ್ಮ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿದೆ. ಈ ಮಧ್ಯೆ ಟಿಕೆಟ್ ಬಯಸಿ ಸಿದ್ದರಾಮಯ್ಯ ಭೇಟಿಗೆ ಬಂದಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಅವರಿಗೆ ನಿರಾಸೆಯಾಗಿದೆ. ಹೀಗಾಗಿ ಗರಂ ಆಗಿ ಮನೋಹರ ತಹಶೀಲ್ದಾರ್ ಮಾತನಾಡಿದ್ದಾರೆ.
ಯಾಕೆ ನಮಗೆ ಗಂಡಸ್ತನ ಇಲ್ವಾ?
ಹಾನಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಗರಂ ಆಗಿದ್ದಾರೆ. ಉಪ ಚುನಾವಣೆ, ಟಿಕೆಟ್ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ತಹಶೀಲ್ದಾರ್ ತೆರಳಿದ್ದರು. ಆದರೆ ಸಿದ್ದರಾಮಯ್ಯ ಅವರು ಭೇಟಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಗರಂ ಆಗಿಯೇ ಮನೋಹರ ತಹಶೀಲ್ದಾರ್ ಮಾತನಾಡಿದ್ದಾರೆ. ನಮಗೆ ಗಂಡಸ್ತನ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ!
"ನಮಗ್ಯಾಕೆ ಟಿಕೆಟ್ ಕೊಡಲ್ಲ? ನಮಗೆ ಯೋಗ್ಯತೆ ಇಲ್ವಾ? ನಮಗೆ ಅರ್ಹತೆ ಇಲ್ಲವಾ? ನಮಗೆ ಗಂಡಸ್ತನ ಇಲ್ವಾ?' ಎಂದು ಹಾನಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪೈಪೋಟಿ ಮತ್ತೆ ತಾರಕಕ್ಕೇರಿದೆ.
"ಯಾವುದೇ ಕಾರಣಕ್ಕೂ ಶ್ರೀನಿವಾಸ ಮಾನೆ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬಾರದು' ಎಂದು ತಹಶೀಲ್ದಾರ ಆಗ್ರಹಿಸಿದ್ದಾರೆ. ಜೊತೆಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಮಾನೆಗೆ ಟಿಕೆಟ್: ತಹಶೀಲ್ದಾರ್ ಏನು ಮಾಡ್ತಾರೆ?
"ಶ್ರೀನಿವಾಸ ಮಾನೆ ಹಾನಗಲ್ ನವರಲ್ಲ, ಹೊರಗಿನವರು. ಸ್ಥಳೀಯರಿಗೆ ಯಾರಿಗಾದರೂ ಟಿಕೆಟ್ ಕೊಟ್ಟರೂ ಪಕ್ಷದ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತೇವೆ. ಆದರೆ ಶ್ರೀನಿವಾಸ ಮಾನೆಗೆ ಟಿಕೆಟ್ ಕೊಟ್ಟಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಲ್ಲ. ಮಾನೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ, ಆದರೆ ಆ ಹೆಸರು ನಾನು ಹೇಳುವುದಿಲ್ಲ. ನಾನೇ ಗೆಲ್ಲುವ ಅಭ್ಯರ್ಥಿ, ಹೀಗಾಗಿ ನನಗೆ ಟಿಕೆಟ್ ಕೊಡಬೇಕು. ಇದನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೂ ಹೇಳುತ್ತೇನೆ' ಎಂದು ಮಾಜಿ ಶಾಸಕ ಮನೋಹರ್ ತಹಶಿಲ್ದಾರ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಟಿಕೆಟ್ ಘೋಷಣೆ ಮಾಡಿದ್ದಾರೆ "ಕೈ' ನಾಯಕರು!
2018ರ ವಿಧಾನಸಭಾ ಚುನಾವಣೆಗೂ ಮೊದಲು ಒಂದು ಬಾರಿ ಸಿ.ಎಂ. ಉದಾಸಿ ಮತ್ತೊಂದು ಬಾರಿ ಮನೋಹರ ತಹಶೀಲ್ದಾರ್ ಚುನಾವಣೆಯಲ್ಲಿ ಗೆಲವು ಸಾಧಿಸುತ್ತಿದ್ದರು. ಆದರೆ 2018ರಲ್ಲಿ ಮೊದಲ ಸಲ ಮನೋಹರ ತಹಶೀಲ್ದಾರ್ ಬದಲಿಗೆ ಶ್ರೀನಿವಾಸ ಮಾನೆ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿತ್ತು. ಆದರೆ ಆ ಚುನಾವಣೆಯಲ್ಲಿ ದಿ. ಸಿ.ಎಂ. ಉದಾಸಿ ಗೆಲವು ಸಾಧಿಸಿದ್ದರು. ಸಿ.ಎಂ. ಉದಾಸಿ ಅವರ ನಿಧನದಿಂದ ಉಪ ಚುನಾವಣೆ ಎದುರಾಗಿದೆ. ಈಗ ಮತ್ತೆ ಶ್ರೀನಿವಾಸ ಮಾನೆ ಅವರಿಗೆ ಟಿಕೆಟ್ ಕೊಡುವ ವಾಗ್ದಾನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಆದರೆ ಶ್ರೀನಿವಾಸ ಮಾನೆ ಅವರು ಸ್ಥಳೀಯರಲ್ಲ ಎಂದು ಕಾಂಗ್ರೆಸ್ ಟಿಕೆಟ್ ಕೊಡದಂತೆ ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಆಗ್ರಹಿಸಿದ್ದಾರೆ. ತಹಶೀಲ್ದಾರ್ ಒತ್ತಡಕ್ಕೆ ಮಣಿದು ಕೈ ನಾಯಕರು ತಮ್ಮ ನಿರ್ಧಾರ ಬದಲಿಸುತ್ತಾರಾ? ಎಂಬುದು ಕುತೂಹಲ ಮೂಡಿಸಿದೆ.