ಮಂಗಳೂರು ಕ್ಷೇತ್ರ: ಖಾದರ್ ಖದರ್ರು ಇಳಿಸುವುದೇ ಬಿಜೆಪಿ?
ಮಂಗಳೂರು, ಜನವರಿ 25: ಕರಾವಳಿಯ ರಾಜಕೀಯ ವಲಯ ಈಗಾಗಲೇ ಕಾವೇರಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಈಗಾಗಲೇ ಪ್ರಚಾರದ ಕಣಕ್ಕಿಳಿದಿವೆ. ಮುಂದಿನ ಚುನಾವಣಾ ಅಖಾಡಕ್ಕಿಳಿಯುವ ಅಭ್ಯರ್ಥಿಯಾರು? ಗೆಲುವಿನ ಸಾಧ್ಯತೆ ಎಷ್ಟು? ಎಂಬ ಲೆಕ್ಕಾಚಾರ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಗಳೂರು ವಿಧಾನಸಭಾ ಕ್ಷೇತ್ರ. ಈ ಹಿಂದೆ ಉಳ್ಳಾಲ ವಿಧಾನಸಭಾ ಕ್ಷೇತ್ರ ಎಂದು ಗುರುತಿಸಿ ಕೊಂಡಿದ್ದ ಈ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ಮಂಗಳೂರು ವಿಧಾನಸಭಾ ಕ್ಷೇತ್ರವಾಗಿ ಬದಲಾಗಿದೆ.
ದೇಶದ ಸ್ವಾತಂತ್ರ್ಯ ಹೋರಾಟ ಇತಿಹಾಸದಲ್ಲಿ ದೇಶದ ಪ್ರಥಮ ಹೋರಾಟಗಾರ್ತಿ ಎಂದೇ ಹೇಳಲಾಗುವ ವೀರರಾಣಿ ಅಬ್ಬಕ್ಕ ಆಡಳಿದ ಪ್ರದೇಶವನ್ನು ಈ ವಿಧಾನ ಸಭಾ ಕ್ಷೇತ್ರ ಒಳಗೊಂಡಿದೆ. 16 ನೇ ಶತಮಾನದಲ್ಲಿ ಉಳ್ಳಾಲ, ಅಬ್ಬಕ್ಕ ರಾಣಿಯ ರಾಜಧಾನಿಯಾಗಿತ್ತು. ಈ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆ ಒಂದೆಡೆಯಾದರೆ ಇನ್ನೊಂದೆಡೆ ವಿಶ್ವ ಪ್ರಸಿದ್ಧ ಸೈಯದ್ ಅಹಮ್ಮದ್ ಷರೀಫ ಮದನೀ ದರ್ಗಾ ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕ ಮತದಾರರು. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಇಲ್ಲಿಯ ಶಾಸಕರಾಗಿದ್ದಾರೆ. ಹಿಂದಿನಿಂದಲೂ ಈ ಕ್ಷೇತ್ರ ಕಾಂಗ್ರೆಸ್ ನ ಭದ್ರ ಕೋಟೆ. 1994 ರಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಈ ಕ್ಷೇತ್ರ ಗೆದ್ದಿತ್ತು. ಆದರೆ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಚಂದ್ರಹಾಸ್ ಉಳ್ಳಾಲ್ ಅವರ ಎದುರು ಯು.ಟಿ.ಖಾದರ್ 29,111 ಮತಗಳ ಅಂತರದಿಂದ ಜಯಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೈ ಪಾಳಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮಂಗಳೂರು ವಿಧಾನಸಭಾ ಅತ್ಯಂತ ಸೇಫ್ ಕ್ಷೇತ್ರ.
ಕಾಂಗ್ರೆಸ್ ನಿಂದ ಇಲ್ಲಿ ಯು.ಟಿ.ಖಾದರ್ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಬಿಜೆಪಿಗೆ ಇದು ಅತ್ಯಂತ ಕಠಿಣ ಕ್ಷೇತ್ರವಾದರೂ ಆಕಾಂಕ್ಷಿಗಳ ಸಂಖ್ಯೆಗೆ ಇಲ್ಲಿ ಬರವಿಲ್ಲ. ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್, ಬಿಜೆಪಿ ಯುವ ಮುಖಂಡ ಸಂತೋಷ್ ಕುಮಾರ್ ಬೋಳಿಯಾರ್, ಚಂದ್ರಹಾಸ ಉಚ್ಚಿಲ್ ಟಿಕೆಟ್ ಆಕಾಂಕ್ಷಿಗಳಾದರೆ ಕಳೆದ ಬಾರಿ ಸ್ಪರ್ಧಿಸಿದ್ದ ಚಂದ್ರಹಾಸ್ ಉಳ್ಳಾಲ್ ಕೂಡ ಈ ಬಾರಿಯೂ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ದರಾಗಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದುಕೂಡ ಯು.ಟಿ.ಖಾದರ್ ಅವರಿಗೆ ವರದಾನವಾಗುವ ಸಾದ್ಯತೆ ಇದೆ. ಆದರೆ ಈ ಕ್ಷೇತ್ರದಲ್ಲಿ ಖಾದರ್ ಅವರಿಗೆ ಸೆಡ್ಡು ಹೊಡೆಯಲು ಬಿಜೆಪಿ ಯಾರನ್ನು ಅಖಾಡಕ್ಕೆ ಇಳಿಸಲಿದೆ ಎಂಬುದೇ ಕುತೂಹಲದ ಸಂಗತಿ.