ಮಂಗಳೂರು ರೈಲಿನಲ್ಲಿ ಅನುಮಾನಸ್ಪದ ವ್ಯಕ್ತಿ ಬ್ಯಾಗ್ನಲ್ಲಿ 1.88 ಕೋಟಿ ಹಣ ಪತ್ತೆ
ಬೆಂಗಳೂರು, ಜ. 24: ಮಂಗಳೂರಿನ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನಲ್ಲಿದ್ದ ಅನುಮಾನಸ್ಪದ ವ್ಯಕ್ತಿ ಬ್ಯಾಗಿನಲ್ಲಿ 1.48 ಕೋಟಿ ರೂ. ನಗದು ಹಣ ಹಾಗೂ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಈ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಕ್ಕೆ ಯಾವುದೇ ದಾಖಲೆ ನೀಡದ ಅರೋಪಿಯನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಎಲ್ಲಾ ರೈಲ್ವೇ ಪೊಲೀಸ್ ಸಿಬ್ಬಂದಿಗೆ ಎಡಿಜಿಪಿ ಭಾಸ್ಕರರಾವ್ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ರೈಲ್ವೇ ಪೊಲೀಸ್ ಸಿಬ್ಬಂದಿ ಅನುಮಾನಸ್ಪದ ಸಿಬ್ಬಂದಿಯನ್ನು ತಪಾಸಣೆ ನಡೆಸುತ್ತಿದ್ದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲು ತಪಾಸಣೆ ನಡೆಸುವಾಗ ವ್ಯಕ್ತಿಯೊಬ್ಬನ ಕೈಯಲ್ಲಿ ಕಪ್ಪು ಬಣ್ಣದ ಬ್ಯಾಗ್ ಕಾಣಿಸಿಕೊಂಡಿದೆ. ಪೊಲೀಸರನ್ನು ನೋಡಿ ಗಾಬರಿಗೊಂಡ ವ್ಯಕ್ತಿಯನ್ನು ಮಂಗಳೂರು ರೈಲ್ವೇ ಪೊಳೀಸರು ವಶಕ್ಕೆ ಪಡೆದು ಬ್ಯಾಗ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬ್ಯಾಗಿನಲ್ಲಿ 1.48 ಕೋಟಿ ರೂ. ಹಣ ಇರುವುದು ಗೊತ್ತಾಗಿದೆ. ಹೆಚ್ಚುವರಿ ತಪಾಸಣೆ ನಡೆಸಿದಾಗ ಬ್ಯಾಗಿನಲ್ಲಿ 40 ಲಕ್ಷ ರೂ. ಮೌಲ್ಯದ ಒಂದು ಕೆ.ಜಿ. ಚಿನ್ನ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ನೀಡುಂವತೆ ಕೇಳಿದರೆ ಆ ವ್ಯಕ್ತಿ ಯಾವುದೇ ದಾಖಲೆ ನೀಡಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಒಟ್ಟು 1.88 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹವಾಲ ದಂಧೆಯ ಭಾಗವಾಗಿ ಈ ಹಣ ಸಾಗಿಸುತ್ತಿದ್ದರೇ? ಇಲ್ಲವೇ ತೆರಿಗೆ ವಂಚಿಸಿ ಚಿನ್ನಾಭರಣ ಖರೀದಿ ವಿಚಾರವಾಗಿ ಹಣ ವಹಿವಾಟು ನಡೆಸಲಾಗುತ್ತಿತ್ತೇ ಎಂಬುದರ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ರಾಜಸ್ಥಾನ್ ಮೂಲದವನಾಗಿದ್ದು ನಾನು ಚಿನ್ನದ ವ್ಯಾಪಾರ ಮಾಡುತ್ತೇನೆ. ಚಿನ್ನ ತಂದು ಮಾರಾಟ ಮಾಡುವ ವಹಿವಾಟು ಮಾಡುತ್ತೇನೆ. ಇದರಲ್ಲಿ ಯಾವುದೇ ಅಕ್ರಮ ವಹಿವಾಟು ಇಲ್ಲ. ಬಿಲ್ಗಳನ್ನು ತಂದು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇನ್ನು ಇಷ್ಟು ಪ್ರಮಾಣದ ಹಣವನ್ನು ನಗದು ರೂಪದಲ್ಲಿ ವಹಿವಾಟು ನಡೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ನ್ಯಾಯಾಲಯಕ್ಕೆ ಎಲ್ಲಾ ವಿವರಗಳನ್ನು ಸಲ್ಲಿಸಿದ್ದು, ಅಸಲಿ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಹಣ ಬಿಡಿಸಿಕೊಳ್ಳಲು ಸೂಚಿಸಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ರೈಲ್ವೇ ಎಸ್ಪಿ ಸಿರಿಗೌರಿ 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರಕರಣ ಕುರಿತು ಸ್ಪಷ್ಟನೆ ನೀಡಿದ್ದಾರೆ.