ಕೆಆರ್ಎಸ್ ಸುತ್ತಲೂ ಅಕ್ರಮ ಗಣಿಗಾರಿಕೆ: ಕುತೂಹಲ ಮೂಡಿಸಿದ ಸುಮಲತಾ-ಮುರುಗೇಶ್ ನಿರಾಣಿ ಭೇಟಿ!
ಬೆಂಗಳೂರು, ಜು. 12: ಮಹತ್ವದ ಬೆಳವಣಿಗೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕೆಆರ್ಎಸ್ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅವರ ಮಧ್ಯೆ ಕಳೆದ ಒಂದು ವಾರದಿಂದ ವಾಕ್ಸಮರವೇ ನಡೆಯುತ್ತಿದೆ. ಹೀಗಾಗಿ ಕೆಆರ್ಎಸ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ಭೇಟಿಗೆ ಬಹಳಷ್ಟು ಮಹತ್ವ ಬಂದಿದೆ.
ಬೆಂಗಳೂರಿನಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಸುಮಲತಾ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಸಚಿವ ನಿರಾಣಿ ಅವರಿಗೆ ಸುಮಲತಾ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ. ಜೊತೆಗೆ ನಿರಾಣಿ ಅವರಿಗೆ ಸುಮಲತಾ ಕೊಟ್ಟಿರುವ ಪತ್ರ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಚಿವ ನಿರಾಣಿ ಅವರಲ್ಲಿ ಸುಮಲತಾ ಅವರು ಮಾಡಿಕೊಂಡಿರುವ ಮನವಿ ಏನು? ಮುಂದಿದೆ ಮಾಹಿತಿ!
ಸುಮಲತಾ-ನಿರಾಣಿ ಮಹತ್ವದ ಚರ್ಚೆ
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸುವಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರನ್ನು ಸಂಸದೆ ಸುಮಲತಾ ವಿನಂತಿಸಿದ್ದಾರೆ. ಬೆಂಗಳೂರಿನಲ್ಲಿ ನಿರಾಣಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಸುಮಲತಾ ಅವರು, "ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಹಲವಾರು ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ಅಕ್ರಮ ಗಣಿಗಾರಿಕೆಯನ್ನು ಪರಿಶೀಲನೆ ಮಾಡಲು ಸ್ಥಳ ಪರಿಶೀಲನೆ ಮಾಡಲು ವಿನಂತಿಸಿದ್ದೇನೆ. ಮೊನ್ನೆ ನಾನು ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಸರ್ಕಾರಕ್ಕೆ ನಷ್ಟ ಆಗುತ್ತಿದೆ, ರಾಜಧನವನ್ನು ಸಂಗ್ರಹ ಮಾಡಬೇಕು, ಆ ಹಣದಿಂದ ಮಂಡ್ಯ ಅಭಿವೃದ್ಧಿ ಬಳಸಬೇಕು. ಜೊತೆಗೆ ಬೇಬಿ ಬೆಟ್ಟಕ್ಕೆ ಭೇಟಿ ಮಾಡಲು ಮನವಿ ಮಾಡಿದ್ದೇನೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ನಾಡಿದ್ದು ಮಹತ್ವದ ಸಭೆ
"ಕೃಷ್ಣರಾಜಸಾಗರ ಅಣೆಕಟ್ಟಿನ ಅಧಿಕಾರಿಗಳೊಂದಿಗೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಭೆ ನಿಗದಿಯಾಗಿತ್ತು. ಆದರೆ ಕೊರೊನಾವೈರಸ್ ಹಾಗೂ ಲಾಕ್ಡೌನ್ನಿಂದಾಗಿ ಸಭೆಯನ್ನು ಮುಂದುಡಲಾಗಿತ್ತು. ಈಗ ಸಭೆ ನಿಗದಿಯಾಗಿದ್ದು, ಬರುವ ಜುಲೈ 14ಕ್ಕೆ ನಡೆಯಲಿದೆ. ಕೆಆರ್ಎಸ್ ಅಣೆಕಟ್ಟಿನ ಸುರಕ್ಷಿತೆಗೆ ಏನು ಕ್ರಮಕೈಗೊಳ್ಳಲಾಗುತ್ತದೆ? ಎಂಬುದೂ ಸೇರಿದಂತೆ ನಿರ್ವಹಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಕಾವೇರಿ ಜಲ ನಿಗಮ ಅಲ್ಲಿ ನಿರ್ವಹಣೆ ಮಾಡುತ್ತದೆ. ಜನರಿಗಿಂತ, ರೈತರಿಗಿಂತ ಯಾರು ದೊಡ್ಡವರಲ್ಲ" ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಗಣಿಗಾರಿಕೆ ಸ್ಥಗಿತವಾಗಿದೆ
ಮಂಡ್ಯ ಸಂಸದೆ ಸುಮಲತಾ ಭೇಟಿ ಬಳಿಕ ಮಾತನಾಡಿದ ಗಣಿ ಸಚಿವ ಮುರುಗೇಶ್ ನಿರಾಣಿ ಅವರು, "ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ಬಗ್ಗೆ ವರದಿಗಳು ಬರುತ್ತಿವೆ. ನಾನು ಈ ಹಿಂದೆ ಭೇಟಿ ನೀಡಿದ್ದಾಗ ಎಲ್ಲಾ ಜನಪ್ರತಿನಿಧಿಗಳಿಗೆ ಬರುವಂತೆ ಆಹ್ವಾನ ನೀಡಿದ್ದೆ. ವರದಿ ಬರುವವರೆಗೆ ಕೆಆರ್ಎಸ್ ಸುತ್ತಲೂ 15 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸದಂತೆ ಅಂದಿನ ಸಭೆಯಲ್ಲಿ ಸೂಚನೆ ಕೊಟ್ಟಿದ್ದೆ" ಎಂದು ಹೇಳಿದ್ದಾರೆ.
"ಕೆಆರ್ಎಸ್
ವ್ಯಾಪ್ತಿಯ
15
ಕಿಲೋಮೀಟರ್
ಒಳಗಡೆ
38
ಗಣಿಗಾರಿಕೆಗಳಿವೆ.
ಅಣೆಕಟ್ಟಿಗೆ
ತೊಂದರೆಯನ್ನುಂಟು
ಮಾಡುವ
ಗಣಿಗಾರಿಕೆ
ಮುಚ್ಚಲು
ಸೂಚಿಸಿದ್ದೇವೆ.
ಹೀಗಾಗಿ
ಕಳೆದ
ಮೂರು
ತಿಂಗಳಿನಿಂದ
ಯಾವುದೇ
ಮೈನಿಂಗ್
ನಡೆಯುತ್ತಿಲ್ಲ.
ನಾಲ್ಕು
ದಿನಗಳ
ಹಿಂದೆ
ಮತ್ತೆ
ಸಮೀಕ್ಷೆ
ಮಾಡಿಸಿದ್ದೇವೆ.
ಯಾವುದೇ
ಮೈನಿಂಗ್
ನಡೆಯುತ್ತಿಲ್ಲ.
ಎಲ್ಲಾ
ಮೈನಿಂಗ್
ನಿಲ್ಲಿಸಲಾಗಿದೆ
ಎಂದು
ಅಧಿಕಾರಿಗಳು
ಹೇಳಿದ್ದಾರೆ"
ಎಂದು
ಸಚಿವ
ಮುರುಗೇಶ್
ನಿರಾಣಿ
ಹೇಳಿಕೆ
ಕೊಟ್ಟಿದ್ದಾರೆ.
Recommended Video
ಮನವಿ ಪತ್ರ ಕೊಟ್ಟ ಸುಮಲತಾ
"ಕಳೆದ ಮೂರು ತಿಂಗಳಿನಿಂದ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ಆದರೂ ಸುಮಲತಾ ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಒತ್ತಾಯಿಸಿದ್ದಾರೆ. ಆ ಭಾಗದ ಜೀವನಾಡಿ ಕೆಆರ್ಎಸ್ ಜಲಾಶಯಕ್ಕೆ ಧಕ್ಕೆ ಆಗಬಾರದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ತೇವೆ. ಪ್ರಾಯೋಗಿಕ ಸ್ಫೋಟ ಪರೀಕ್ಷೆ ನಡೆಸಲು ನಿರ್ಧಿರಿಸಲಾಗಿದೆ. ಎಷ್ಟು ದೂರದವರೆಗೆ ಸ್ಪೋಟದ ತೀವ್ರತೆ ಇರಲಿದೆ ಎಂಬುದು ಅದರಿಂದ ಗೊತ್ತಾಗಲಿದೆ. 20 ಕಿಲೋಮೀಟರ್ ಒಳಗೆ 4 ಗಣಿಗಾರಿಕೆಗಳನ್ನು ನಡೆಸಲಾಗುತ್ತಿದೆ, ಅವುಗಳನ್ನೂ ಪರಿಶೀಲನೆ ಮಾಡುತ್ತೇವೆ" ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸುವಂತೆ ಸಂಸದೆ ಸುಮಲತಾ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮನವಿ ಪತ್ರವನ್ನು ಕೊಟ್ಟಿದ್ದಾರೆ.