ರಮ್ಯಾ ಸಭೆಯಲ್ಲಿ ಸೋನಿಯಾ ಮೇಡಂ ಲಡ್ಡು ವಿತರಣೆ
ಬೆಂಗಳೂರು, ಸೆ.28: ಯಾರೋ ಪತ್ರಕರ್ತ ಕುಚೋದ್ಯಕ್ಕಾಗಿ ಮೇಡಂ ನೀವು ಯಾವಾಗ ಲಡ್ಡು ಹಾಕಿಸೋದು ಎಂದು ಅಚ್ಚ ಮಂಡ್ಯ ಭಾಷೆಯಲ್ಲಿ ಕೇಳಿರಬೇಕು ಅದಕ್ಕೆ ಮಂಡ್ಯದ ನೂತನ ಸಂಸದೆ ರಮ್ಯಾ ಅವರು ನಾಚುತ್ತಾ ಅಯ್ಯೋ ಅದಕ್ಕೇನಂತೆ ಶುಭಸ್ಯ ಶೀಘ್ರಂ ಅಂದುಬಿಟ್ಟಿರಬೇಕು. ಅದನ್ನು ಕೇಳಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರು ಸೋನಿಯಾ ಮೇಡಂ ಕೈಯಲ್ಲೇ ಕ್ಷೇತ್ರದ ಎಲ್ಲ ಮತದಾರರಿಗೂ ಲಡ್ಡು ಹಂಚಿಸುವ ಪ್ರೋಗ್ರಾಂ ಫಿಕ್ಸ್ ಮಾಡಿದ್ದಾರೆ.
ಏನಪ್ಪಾ ಅಂದರೆ ಮಂಡ್ಯ ಮೇಡಂ ರಮ್ಯಾ ಅವರು ದಿಲ್ಲಿ ಮೇಡಂ ಆಗುತ್ತಿದ್ದಂತೆ ಕ್ಷೇತ್ರದ ಜನರ ಋಣ ಸಂದಾಯಾರ್ಥವಾಗಿ ಎಲ್ಲರ ಕೈಗೂ ಒಂದೊಂದು ಲಡ್ಡು ಹಂಚಲಿದ್ದಾರೆ. ಅದೂ ಮತ್ತೊಬ್ಬ ದಿಲ್ಲಿ ಮೇಡಂ, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಮೃತಹಸ್ತದಿಂದ.
ಮಂಡ್ಯದಲ್ಲಿ ಲಕ್ಕು ಕುದುರಿ ಉಪಚುನಾವಣೆಯಲ್ಲಿ ಕಾಂಗೈ ಪಕ್ಷ ಜಯಭೇರಿ ಬಾರಿಸಿದ್ದೇ ಕ್ಷೇತ್ರದ ಮತದಾರರಿಗೆ ಖುದ್ದು ಸೋನಿಯಾ ಮೇಡಂ ಅವರಿಂದ ಕೃತಜ್ಞತೆಗಳನ್ನು ಸಲ್ಲಿಸುವುದರ ಜತೆಜತೆಗೆ ಮುಂದಿನ ಮುಂದಿನ ಲೋಕಸಭೆ ಚುನಾವಣೆಗೂ ಇಲ್ಲಿಂದಲೆ ತಯಾರಿ ನಡೆಸಲು ತೀರ್ಮಾನಿಸಿರುವ ರಾಜ್ಯ ಕೆಪಿಸಿಸಿ ಲಡ್ಡು ಪ್ರೋಗ್ರಾಂ ಇಟ್ಟುಕೊಂಡಿದೆ.
ಆದರೆ ಇದ್ಯಾವುದೋ ಕಾಂಗ್ರೆಸ್ಸಿನ ವಿನೂತನ ಯೋಜನೆಯಾ ಎಂದು ನಿಬ್ಬೆರಗಾಗಬೇಡಿ. ಇದು ಕೆಪಿಸಿಸಿ ಅಧ್ಯಕ್ಷರ ವೈಯಕ್ತಿಕ ಕಾರ್ಯಕ್ರಮವಂತೆ. ಬರೋಬ್ಬರಿ ಒಂದು ಲಕ್ಷ ಲಡ್ಡುಗಳನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಲು ಮುಂದಾಗಿದ್ದಾರೆ. ಮಂಡ್ಯದಲ್ಲಿ ನಡೆಯುವ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಲಡ್ಡು ಕಟ್ಟುವ ಕೆಲಸ ಈಗ ಭರದಿಂದ ಸಾಗಿದೆ.
ಊಟಕ್ಕೆ ಬಡಿಸುವ ಲಡ್ಡುಗಿಂತ ತುಸು ದೊಡ್ಡ, ತಿರುಪತಿ ಲಡ್ಡುಗಿಂತ ಸ್ಲಲ್ಪ ಚಿಕ್ಕದಾದ ಲಡ್ಡು ವಿತರಣೆಯಾಗಲಿದೆ. ಹಾಗಾಗಿ, ಸೆ. 30ರಂದು ಬೆಳಗ್ಗೆ 11 ಗಂಟೆಗೆ ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಲಡ್ಡು ವಿತರಣೆಯಾಗಲಿದ್ದು ಕಾಂಗ್ರೆಸ್ ಭಕ್ತಾದಿಗಳು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಸೋನಿಯಾ ಮೇಡಂ ಅವರನ್ನು ಸಂಪ್ರೀತಗೊಳಿಸಬೇಕೆಂದು ಡಾ. ಪರಮೇಶ್ವರ್ ಅವರು ಕೋರಿದ್ದಾರೆ.