ಸುಮಲತಾರನ್ನು ಕೆಣಕಲು ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ಕರೆತಂದ ಜೆಡಿಎಸ್!
Recommended Video
ಮಂಡ್ಯ, ಫೆಬ್ರವರಿ 5: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದ ಮತ್ತಷ್ಟು ತೀವ್ರವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಸುಮಲತಾ ಅವರನ್ನು ಸ್ಪರ್ಧಿಯನ್ನಾಗಿ ಜೆಡಿಎಸ್ ಒಪ್ಪುವುದಿಲ್ಲ ಎಂಬುದಕ್ಕೆ ಪುಷ್ಠಿ ನೀಡುವಂತೆ ಜೆಡಿಎಸ್ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಪ್ರಕಟಿಸಲಾಗಿದೆ.
ಸುಮಲತಾ ಮಂಡ್ಯದ ಗೌಡ್ತಿ ಮತ್ತು ಎಚ್ಡಿಕೆ ಪತ್ನಿಯ ಮೂಲ ನೆಟ್ಟಿಗರು ಕೆದಕಿದಾಗ!
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುತ್ತಾರೆ ಎನ್ನಲಾಗಿರುವ ಸುಮಲತಾ ಅಂಬರೀಷ್ ಅವರ ಕುರಿತು ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನೀಡಿರುವ ಹೇಳಿಕೆ ಅಂಬರೀಷ್ ಅಭಿಮಾನಿಗಳನ್ನು ಕೆರಳಿಸಿತ್ತು.
ಜಿಲ್ಲೆಯ ಮದ್ದೂರಿನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಅಂಬರೀಷ್ ಅಭಿಮಾನಿಗಳು, ಶ್ರೀಕಂಠೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸುಮಲತಾ ಅವರು ಮಂಡ್ಯಕ್ಕೆ ನೀಡಿದ ಕೊಡುಗೆ ಏನು ಎಂದು ಸ್ವತಃ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಿಜವಾದ ಮಗಳು ಯಾರು?
ಸುಮಲತಾ ಮಂಡ್ಯದ ಗೌಡ್ತಿ ಅಲ್ಲ. ಅವರು ತೆಲುಗಿನ ಗೌಡ್ತಿ ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹೇಳಿದ್ದರು. ಅದೇ ರೀತಿ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ನಿಜವಾದ ಮಣ್ಣಿನ ಮಗಳು ಯಾರು..? ಎಂದು ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಸುಮಲತಾ ಅವರ ಚಿತ್ರಗಳನ್ನು ಹಾಕಿ ಪ್ರಶ್ನಿಸಿದೆ.
ಲಕ್ಷ್ಮಿಗೆ ಟಿಕೆಟ್ ನೀಡ್ತಾರಾ?
ಕಳೆದ ಲೋಕಸಭೆಯ ಉಪ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಿರಲಿಲ್ಲ. ಟಿಕೆಟ್ಗಾಗಿ ಲಕ್ಷ್ಮಿ ಸತತ ಪ್ರಯತ್ನ ನಡೆಸಿದ್ದರು. ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ಕ್ಷೇತ್ರ ತೆರವಾಗಿತ್ತು. ಲಕ್ಷ್ಮಿ ಅವರನ್ನು ಪರಿಗಣಿಸದ ಪಕ್ಷ ಎಲ್. ಆರ್, ಶಿವರಾಮೇಗೌಡ ಅವರಿಗೆ ಮಣೆ ಹಾಕಿತ್ತು. ಟಿಕೆಟ್ ವಂಚಿತರಾಗಿದ್ದ ಲಕ್ಷ್ಮಿ ಬೇಸತ್ತು ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದರು. ಈಗ ಸುಮಲತಾ ಅವರನ್ನು ಪ್ರಶ್ನಿಸಲು ಲಕ್ಷ್ಮಿ ಅವರ ಹೆಸರನ್ನು ಜೆಡಿಎಸ್ ಎಳೆದು ತಂದಿದೆ. ಹಾಗಾದರೆ ಸುಮಲತಾ ಅವರು ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದರೆ ಅವರಿಗೆ ಪೈಪೋಟಿ ನೀಡಲು ಲಕ್ಷ್ಮಿ ಅವರನ್ನು ಜೆಡಿಎಸ್ ಮುಂಚೂಣಿಗೆ ತರಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮಂಡ್ಯ ಜೆಡಿಎಸ್ ಅಭ್ಯರ್ಥಿ: ಇರೋ ಗೊಂದಲ ಸಾಲದ್ದಕ್ಕೆ ಇನ್ನೊಬ್ಬರ ಎಂಟ್ರಿ
ಸುಮಲತಾ ಕೊಡುಗೆ ಏನು?
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಚ್ ಡಿ ಕುಮಾರಸ್ವಾಮಿ, ಮಂಡ್ಯಕ್ಕೆ ಸುಮಲತಾ ಅವರ ಕೊಡುಗೆ ಏನು? ಅವರ ಪತಿ ಮಂಡ್ಯವನ್ನು ಪ್ರತಿನಿಧಿಸುವಾಗಲೂ (ಲೋಕಸಭೆ ಮತ್ತು ವಿಧಾನಸಭೆಗೆ) ಜಿಲ್ಲೆಗೆ ಅವರು ಯಾವ ರೀತಿ ಕೊಡುಗೆ ನೀಡಿದ್ದರು? ಕುಮಾರಸ್ವಾಮಿ ಪ್ರಶ್ನಿಸಿದ್ದರು. ಅಂಬರೀಶ್ ಅವರ ನಿಧನದ ದುರಂತವು ಸುಮಲತಾ ಅವರನ್ನು ಮಾಧ್ಯಮಗಳು ಇದ್ದಕ್ಕಿದ್ದಂತೆ ಬೆಳಕಿಗೆ ತರಲು ಮತ್ತು ರಾಜಕೀಯ ವಲಯದಲ್ಲಿ ಹೆಸರು ಕೇಳುವಂತೆ ಮಾಡಿದವು ಎಂದು ಕುಮಾರಸ್ವಾಮಿ ಹೇಳಿದ್ದರು.
ಮಂಡ್ಯ ಗೌಡ್ತಿ ಅಲ್ಲ ಎಂದಿದ್ದ ಶಿವರಾಮೇಗೌಡ
ಸುಮಲತಾ ಅವರು ಮಂಡ್ಯ ಗೌಡ್ತಿ ಅಲ್ಲ. ಅವರು ಆಂಧ್ರಪ್ರದೇಶದ ಗೌಡ್ತಿ. ಅಂಬರೀಷ್ ಅವರು ಬದುಕಿದ್ದಾಗ ರಾಜಕಾರಣ ನನ್ನ ತಲೆಮಾರಿಗೇ ಕೊನೆಯಾಗಲಿ ಎಂದು ಹೇಳಿದ್ದರು. ನಾವು ಈಗಾಗಲೇ ರಮ್ಯಾ ಅವರನ್ನು ರಾಜಕೀಯದಲ್ಲಿ ನೋಡಿಯಾಗಿದೆ. ಅವರು ಎಷ್ಟರಮಟ್ಟಿಗೆ ಕೆಲಸ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ಅಂಬರೀಷ್ ಏಕೆ ಸ್ಪರ್ಧಿಸಿರಲಿಲ್ಲ? ಜನರು ಸೋಲಿಸುತ್ತಾರೆ ಎನ್ನುವುದು ಅವರಿಗೆ ತಿಳಿದಿತ್ತು. ರಾಜಕಾರಣ ಹುಡುಗಾಟಿಕೆ ಅಲ್ಲ. ರಮ್ಯಾ ಅವರಿಂದಲೇ ನಾವು ಪಾಠ ಕಲಿತಿದ್ದೇವೆ ಎಂದು ಶಿವರಾಮೇಗೌಡ ಹೇಳಿದ್ದರು.