ಸುಮಲತಾ ಜೊತೆ 'ಕೈ' ಮುಖಂಡರು ರಹಸ್ಯ ಸಭೆ ನಡೆಸಿದ ಉದ್ದೇಶವೇ ಬೇರೆ?
ಬೆಂಗಳೂರು, ಮೇ 04: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಜೊತೆ ಚೆಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಪ್ರಭಾವಿ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿರುವುದು ರಾಜ್ಯ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ ಈ ಸಭೆ ನಡೆಸಿರುವ ಉದ್ದೇಶವೇನೆಂಬುದು ಸ್ಪಷ್ಟವಾಗುತ್ತಿಲ್ಲ.
ಆದರೆ ಹೊಸದಾಗಿ ತೇಲಿ ಬರುತ್ತಿರುವ ಸುದ್ದಿಯ ಪ್ರಕಾರ ಈ ಸಭೆ ನಡೆಸಿರುವುದು ಸುಮಲತಾ ಅವರ ರಾಜಕೀಯ ಲಾಭಕ್ಕಲ್ಲ ಬದಲಾಗಿ ಕಾಂಗ್ರೆಸ್ನ ಲಾಭಕ್ಕಾಗಿ ಎನ್ನಲಾಗುತ್ತಿದೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರ ರಹಸ್ಯ ಸಭೆ
ಸುಮಲತಾ ಅವರನ್ನು ಕಾಂಗ್ರೆಸ್ ನಾಯಕರು ಭೇಟಿ ಆಗಿರುವುದು ಮೇ 23 ರ ಫಲಿತಾಂಶದ ಬಳಿಕ ಸುಮಲತಾ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು. ಈ ವಿಷಯವು ಸಭೆಯಲ್ಲಿ ಚರ್ಚೆಯಾಗಿದೆ, ಇದಕ್ಕೆ ಸುಮಲತಾ ಅವರು ನಿರ್ದಿಷ್ಟ ಉತ್ತರವನ್ನು ನೀಡಿರದಿದ್ದರೂ ಕಾದು ನೋಡುವ ತಂತ್ರ ಅನುಸರಿಸಿದ್ದಾರಂತೆ.
ಮಂಡ್ಯ ಚುನಾವಣೆ ಸಮೀಕ್ಷೆಗಳು ಸುಮಲತಾ ಅವರ ಪರವಾಲುತ್ತಿರುವ ಕಾರಣದಿಂದಲೇ ಗೆಲ್ಲುವ ಸಂಭಾವ್ಯ ಅಭ್ಯರ್ಥಿ ಎನಿಸಿಕೊಂಡಿರುವ ಸುಮಲತಾ ಅವರನ್ನು ಕಾಂಗ್ರೆಸ್ ಪಕ್ಷ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಹೀಗೊಂದು ದಾಳ ಉರುಳಿಸಿದೆ, ಇದರ ಹಿಂದೆ ಸಿದ್ದರಾಮಯ್ಯ ಅವರ ರಾಜಕೀಯ ಚಾಣಾಕ್ಷತನ ಕೆಲಸ ಮಾಡಿದೆ.
ಸುಮಲತಾ ಹಿಂದೆ ಬಿದ್ದಿದೆ ಗುಪ್ತಚರ ಇಲಾಖೆ, ಚಲನವಲನದ ಮೇಲೆ ನಿಗಾ?
ಕಾಂಗ್ರೆಸ್ಗೆ ಪೂರಕವಾಗಿಯೇ ಸುಮಲತಾ ಅವರನ್ನು ಮಂಡ್ಯದ ನಾಯಕರು ಭೇಟಿ ಮಾಡಿರುವ ಕಾರಣ ಕೆಪಿಸಿಸಿ ಸಹ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಮೃದು ಧೋರಣೆ ಪ್ರದರ್ಶಿಸುತ್ತಿದೆ.
ಸುಮಲತಾ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ
ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ಘೋಷಿಸಿದೆ. ಹಾಗಾಗಿ ಅವರು ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಸೇರಿಬಿಟ್ಟರೆ ಎಂಬ ಆತಂಕ ಕಾಂಗ್ರೆಸ್ಗೆ ಇದೆ ಹಾಗಾಗಿಯೇ ಈ ಆಪರೇಷನ್ ಗೆ ಕಾಂಗ್ರೆಸ್ನ ಹಿರಿಯ ತಲೆಗಳು ಮುಂದಾಗಿವೆ.
ಆಪರೇಷನ್ ಪಕ್ಷೇತರ ಅಭ್ಯರ್ಥಿ?
ಚೆಲುವರಾಯಸ್ವಾಮಿ, ಬಾಲಕೃಷ್ಣ, ರವಿ ಗಣಿಗ ಇನ್ನಿತರೆ ಕಾಂಗ್ರೆಸ್ ಮುಖಂಡರು ಚುನಾವಣೆ ಸಮಯದಲ್ಲಿ ತಟಸ್ಥವಾಗಿದ್ದು ಪರೋಕ್ಷವಾಗಿ ಸುಮಲತಾ ಅವರಿಗೆ ಸಹಾಯ ಮಾಡಿದ್ದಾರೆ, ಹಾಗಾಗಿ ಅವರನ್ನೇ ಮುಂದಕ್ಕೆ ಬಿಟ್ಟು ಸುಮಲತಾ ಅವರನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಳ್ಳುವ ಭಾರಿ ಯೋಜನೆಯನ್ನು ಕಾಂಗ್ರೆಸ್ ಮಾಡಿದೆ.
ಮಂಡ್ಯ ಫಲಿತಾಂಶದ ಕುರಿತು ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ವರದಿ
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲ
ಮಂಡ್ಯ ಚುನಾವಣಾ ಫಲಿತಾಂಶ ಏನೇ ಆಗಲಿ ಸುಮಲತಾ ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಇರಬೇಕು ಎಂದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಹಲವರ ಒತ್ತಾಯವಾಗಿದೆ, ಸುಮಲತಾ ಅವರು ಕಾಂಗ್ರೆಸ್ ಸೇರಿದಲ್ಲಿ ಕಾಂಗ್ರೆಸ್ ನಿರಾಳವಾಗಲಿದೆ. ಆಗ ಮಂಡ್ಯದ ಫಲಿತಾಂಶ ಏನೇ ಆದರೂ ಅದು ಕಾಂಗ್ರೆಸ್ಗೆ ಲಾಭವೇ ಆಗಲಿದೆ.
ಸುಮಲತಾ ಪರ ಸಿದ್ದರಾಮಯ್ಯ ಮೃದು ಧೋರಣೆ
ಈ ರೀತಿಯ ಒಳ ಯೋಚನೆ ಮಂಡ್ಯ ಚುನಾವಣೆ ಪ್ರಾರಂಭದಿಂದಲೂ ಇದೆ ಎನ್ನಲಾಗುತ್ತಿದೆ. ಹಾಗಾಗಿಯೇ ಕಾಂಗ್ರೆಸ್ನ ಯಾರೊಬ್ಬರು ಸುಮಲತಾ ಅವರ ಬಗ್ಗೆ ವಿರುದ್ಧ ಹೇಳಿಕೆಗಳನ್ನು ನೀಡಿರಲಿಲ್ಲ, ಸಿದ್ದರಾಮಯ್ಯ ಅವರು ಮಂಡ್ಯಕ್ಕೆ ಪ್ರಚಾರಕ್ಕೆ ಹೋದರಾದರೂ ಸುಮಲತಾ ಪರ ಮೃದು ಭಾವ ಹೊಂದಿಯೇ ನಿಖಿಲ್ ಪರ ಪ್ರಚಾರ ಮಾಡಿದ್ದರು.
ಬಿಜೆಪಿ ಸೇರುವುದಿಲ್ಲ ಎಂದಿದ್ದ ಸುಮಲತಾ
ಸುಮಲತಾ ಅವರೂ ಸಹ ಸಿದ್ದರಾಮಯ್ಯ ಅವರ ಬಗ್ಗೆ ಗೌರವ ಪೂರಕವಾಗಿಯೇ ಚುನಾವಣಾ ಪ್ರಚಾರದ ಸಮಯದಲ್ಲಿ ಮಾತನಾಡಿದ್ದರು, ಅಲ್ಲದೆ ಪ್ರಚಾರದ ಸಮಯದಲ್ಲಿ ಅವರು 'ನಾನು ಬಿಜೆಪಿ ಸೇರುವುದಿಲ್ಲ' ಎಂದು ಹಲವು ಭಾರಿ ಹೇಳಿದ್ದಾರೆ ಕೂಡ. ಸಿದ್ದರಾಮಯ್ಯ ಅವರು ಸಹ, ಸುಮಲತಾ ಅವರ ಬಗೆಗಿನ ತಮ್ಮ ಹೇಳಿಕೆಯೊಂದನ್ನು ತಿರುಚಿದ್ದಾಗ ಈ ಆ ಬಗ್ಗೆ ಟ್ವಿಟ್ಟರ್ನಲ್ಲಿ ಸ್ಪಷ್ಟೀಕರಣ ನೀಡಿ, ಸುಮಲತಾ ಅವರ ಬಗ್ಗೆ ಗೌರವ ಇರುವುದಾಗಿ ಹೇಳಿದ್ದರು.