Breaking: ನಟಿ ರಚಿತಾ ರಾಮ್ ಬಂಧನಕ್ಕೆ ಒತ್ತಾಯ, ದೂರು ದಾಖಲು- ಕಾರಣ ತಿಳಿಯಿರಿ
ಬೆಂಗಳೂರು, ಜನವರಿ 21: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಜನವರಿ 26ರಂದು ಬಿಡುಗಡೆಗೆ ಸಿದ್ದವಾಗಿದೆ. ಗಣರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರದ ಪ್ರಚಾರವು ಅಬ್ಬರದಿಂದ ಸಾಗಿದೆ. ಸಾಮಾಜಿಕ ಮಾಧ್ಯಮ ಹಾಗೂ ಯುಟ್ಯೂಬ್ಗಳಲ್ಲಿ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ನಾಯಕಿ ರಚಿತಾ ರಾಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಚಿತಾ ರಾಮ್ ವಿರುದ್ಧ ದೂರು: ಕಾರಣವೇನು?
ರಚಿತಾ ರಾಮ್ ಅವರು ನೀಡಿದ್ದ ಹೇಳಿಕೆಯೊಂದು ತೀವ್ರ ವಿವಾದ ಸೃಷ್ಟಿಸಿದೆ. ಕಳೆದ ವಾರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದ ಅವರು, ಗಣರಾಜ್ಯೋತ್ಸವದ ಬಗ್ಗೆ ವಿವಾದಿತ ಮಾತೊಂದನ್ನು ಆಡಿದ್ದರು.
'ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ, ಈ ವರ್ಷ ಗಣರಾಜ್ಯೋತ್ಸವ ಮರೆತುಬಿಡಿ. ಕ್ರಾಂತಿಯ ಉತ್ಸವ ಆಚರಿಸಿ ಅಷ್ಟೇ' ಎಂದು ನಟಿ ರಚಿತಾ ರಾಮ್ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ರಚಿತಾ ರಾಮ್ ವಿರುದ್ಧ ಹರಿಹಾಯ್ದಿದ್ದರು. ಟ್ರೋಲ್ ಸಹ ಮಾಡಿದ್ದರು.
ಈ ದೇಶಕ್ಕಿಂತ ನಿಮ್ಮ ಚಿತ್ರ ದೊಡ್ಡದಲ್ಲ. ಅನಕ್ಷರಸ್ತೆ ತರ ಮಾತನಾಡಿ, ಗೌರವ ಕಳೆದುಕೊಳ್ಳಬೇಡಿ ಎಂದಿದ್ದರು. ನಿಮಗೆ ಈ ದೇಶದ ಮೇಲೆ ಗೌರವ ಇಲ್ಲದಿದ್ದರೆ, ಪಾಕಿಸ್ತಾನಕ್ಕೆ ಹೋಗಿ ಎಂದೂ ಅವರು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದೇ ಹೇಳಿಕೆಗೆ ಸಂಬಂಧಿಸಿದಂತೆ ರಚಿತಾ ರಾಮ್ ವಿರುದ್ಧ ದೂರು ದಾಖಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ದೂರು ನೀಡಲಾಗಿದೆ.
ಭಾರತದ ಸಂವಿಧಾನಕ್ಕೆ ಹಾಗೂ ಗಣರಾಜ್ಯೋತ್ಸವಕ್ಕೆ ನಟಿ ರಚಿತಾ ರಾಮ್ ಅವರು ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇ ಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.
ನಟಿ ರಚಿತಾ ರಾಮ್ ಅವರ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ. ಅವರನ್ನು ಈ ದೇಶದಿಂದ ಗಡಿಪಾರು ಮಾಡಬೇಕು. ಅವರ ವಿವಾದಿತ ಹೇಳಿಕೆ ಹಿನ್ನೆಲೆಯಲ್ಲಿ ರಚಿತಾ ರಾಮ್ ವಿರುದ್ಧ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಶಿವಲಿಂಗಯ್ಯ ಹೇಳಿದ್ದಾರೆ.
ಕ್ರಾಂತಿ ಚಿತ್ರ ಕುರಿತು
ನಟ ದರ್ಶನ್ ತೂಗುದೀಪ ಹಾಗೂ ರಚಿತಾ ರಾಮ್ ಅಭಿನಯದ ಕ್ರಾಂತಿ ಚಿತ್ರವನ್ನು ವಿ. ಹರಿಕೃಷ್ಣ ನಿರ್ದೇಶಿಸಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ಅಡಿಯಲ್ಲಿ ಶೈಲಜಾ ನಾಗ್ ಜೊತೆ ಬಿ.ಸುರೇಶ ನಿರ್ಮಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆಯೂ ಇದೆ.
ಅನಿವಾಸಿ ಭಾರತೀಯ ಉದ್ಯಮಿ ಕ್ರಾಂತಿ ರಾಯಣ್ಣ ತನ್ನ ಸರ್ಕಾರಿ ಶಾಲೆಯನ್ನು ಸಮಾಜ ವಿರೋಧಿ ಶಕ್ತಿಗಳಿಂದ ರಕ್ಷಿಸಲು ತನ್ನ ಊರಿಗೆ ಆಗಮಿಸುತ್ತಾನೆ ಮತ್ತು ತಾನು ಕಲಿತ ಸರ್ಕಾರಿ ಶಾಲೆಯನ್ನು ರಕ್ಷಸುವಲ್ಲಿ ಯಶಸ್ವಿಯಾಗುತ್ತಾನೆ. ಇದು ಕ್ರಾಂತಿ ಚಿತ್ರದ ಕಥೆಯಾಗಿದೆ.