ಎಸ್ ಎಂ ಕೃಷ್ಣ ಅಂದ್ರೆ ನೆನಪಾಗುವ ಈ ಐದು ವಿಚಾರ
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಕರ್ನಾಟಕ ರಾಜ್ಯ ಕಂಡ ಡಿಗ್ನಿಫೈಡ್ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂಥ ಮಾತು.
ರಾಜಕಾರಣದ ಒಳಗಾಗಲೀ, ಹೊರಗಾಗಲಿ ಅವರೆಂದೂ ಸಮತೋಲನ ತಪ್ಪುವರಲ್ಲ. ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ ಹಿಡಿದು, ಸಚಿವ, ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಕೇಂದ್ರ ಸಚಿವ... ಹೀಗೆ ಅನೇಕ ಉನ್ನತ ಹುದ್ದೆಗಳನ್ನು ಅವರು ಹೊಂದಿದ್ದರೂ ಅವರನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಅಂತ ಕರೆಯೋದರಲ್ಲೇ ಏನೋ ಒಂದು ಖುಷಿಯಿದೆ. ಈ ಖುಷಿಗೆ ಕಾರಣ ಬೆಂಗಳೂರು ಅಭಿವೃದ್ಧಿಗೆ ಅವರು ನೀಡಿದ ಮಹತ್ತರ ಕೊಡುಗೆ.[84ರ ವಯಸ್ಸಿನಲ್ಲಿ ರಾಜಕಾರಣಕ್ಕೆ ಗುಡ್ಬೈ ಹೇಳಿದ ಎಸ್ಸೆಂ ಕೃಷ್ಣ]
ಉದ್ಯಾನ ನಗರಿಯನ್ನು ಭಾರತದ ಸಿಲಿಕಾನ್ ಸಿಟಿಯನ್ನಾಗಿಸುವುದರ ಹಿಂದೆ ಕೃಷ್ಣ ಅವರ ಪಾತ್ರ ಅಪಾರ. ಇಂದು ಬೆಂಗಳೂರಿನಲ್ಲಿ ತಲೆ ಎತ್ತಿರುವ ಫ್ಲೈ ಓವರ್ ಗಳು, ವಿಶ್ವದ ಟೆಕ್ಕಿಗಳನ್ನು ಅಯಸ್ಕಾಂತದಂತೆ ಸೆಳೆಯುತ್ತಿರುವ ಐಟಿ ಪಾರ್ಕ್ ಇವೆಲ್ಲವೂ ಕೃಷ್ಣ ಅವರ ಕೊಡುಗೆ.[1962-2017: ಎಸ್ಸೆಂ ಕೃಷ್ಣ ಏರಿದ್ದೆಲ್ಲ ಎತ್ತರ, ಪಡೆದಿದ್ದೆಲ್ಲ ಅಧಿಕಾರ]
ರಾಜಕಾರಣದಲ್ಲಿ ಎತ್ತೆರತ್ತಕ್ಕೆ ಸಾಗಿದರೂ ಕಾಮನ್ ಮ್ಯಾನ್ ನಲ್ಲಿರಬಹುದಾದ ಅಭಿರುಚಿಗಳನ್ನು ಅವರು ಮರೆತಿರಲಿಲ್ಲ. ಹಾಗಾಗಿ, ಎಸ್. ಎಂ.ಕೃಷ್ಣ ಎಂದರೆ ಥಟ್ಟಂತ ನೆನಪಾಗುತ್ತವೆ ಈ ಐದು ವಿಷಯ.
ಅನುಕರಣೀಯ ವ್ಯಕ್ತಿತ್ವ
ಓರ್ವ ಜನನಾಯಕನಾಗಿ ಎಸ್.ಎಂ.ಕೃಷ್ಣ ಅವರದ್ದು ಧೀಮಂತ ನಡೆ. ಉತ್ತಮ ಸಂಘಟನಾ ಚತುರ ಹಾಗೂ ವಾಕ್ಪಟು. ಏನೇ ಮಾತನಾಡಿದರೂ ಅಳೆದೂ ತೂಗಿ ಮಾತನಾಡುವುದು ಅವರಿಗೆ ಸಿದ್ಧಿಸಿತ್ತು. ಕನ್ನಡ, ಇಂಗ್ಲೀಷ್ ಗಳ ಮೇಲೆ ಒಳ್ಳೆ ಹಿಡಿತವಿತ್ತು. ನಡೆ, ನುಡಿಗಳೆಲ್ಲದರಲ್ಲಿ ಅವರದ್ದು ಅನುಕರಣೀಯ ವ್ಯಕ್ತಿತ್ವ.
ಖಾದಿಯಾದ್ರೂ ಸೈ, ಸೂಟ್ ಆದ್ರೂ ಸೈ
ಉತ್ತಮ ಡ್ರೆಸಿಂಗ್ ಸೆನ್ಸ್ ಇರುವ ರಾಜಕಾರಣಿಗಳು ಕಾಣಸಿಗುವುದು ಬಲು ಅಪರೂಪ. ಖಾದಿಯಾಗಲೀ, ಸೂಟ್ ಆಗಲೀ ಅಥವಾ ಪ್ಯಾಂಟು ಶರ್ಟ್ ಆಗಲೀ ತಮಗೆ ತುಂಬಾ ಒಪ್ಪುವ ಬಟ್ಟೆಗಳನ್ನೇ ಧರಿಸುತ್ತಿದ್ದರು. ಬಟ್ಟೆ ವಿಚಾರದಲ್ಲಿ ಅವರು ತುಂಬಾ ಕ್ಲೀನ್ ಆ್ಯಂಡ್ ಕ್ಲಿಯರ್ ಟೇಸ್ಟ್ ಉಳ್ಳಂಥ ವ್ಯಕ್ತಿ.
ಒತ್ತಡದ ನಡುವೆಯೂ ನಸುನಗು
ರಾಜಕೀಯ ಬದುಕಿನಲ್ಲಿ ಎಷ್ಟೇ ಒತ್ತಡವಿರಲಿ, ಎಷ್ಟೇ ಏರುಪೇರುಗಳಿರಲಿ ನಗುನಗುತ್ತಾ ಅವನ್ನು ಎದುರಿಸುತ್ತಿದ್ದರು ಕೃಷ್ಣ. ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಗ ಹಾಸ್ಯ ಗೋಷ್ಠಿಗಳು ಜನಪ್ರಿಯತೆ ಗಳಿಸಿದ್ದವು. ಅವನ್ನು ಸವಿಯಲು ಆಸೆ ಪಡುತ್ತಿದ್ದ ಕೃಷ್ಣಾ ಅವರು ತಮ್ಮ ಪತ್ನಿ ಪ್ರೇಮಾ ಅವರೊಂದಿಗೆ ಹಲವಾರು ಹಾಸ್ಯಗೋಷ್ಠಿಗಳಿಗೆ ಆಕಸ್ಮಿಕವಾಗಿ ಹಾಜರಾಗಿದ್ದುಂಟು.
ವಿದ್ಯಾರ್ಥಿ ಭವನದ ದೋಸೆ ಅಚ್ಚುಮೆಚ್ಚು
ಕೃಷ್ಣ ಅವರಿಗೆ ಊಟದ ವಿಚಾರದಲ್ಲೂ ಒಳ್ಳೆಯ ಟೇಸ್ಟ್ ಇದೆ ಎಂಬುದು ಬಲ್ಲವರ ಮಾತು. ಸಿಎಂ ಆಗಿದ್ದಾಗ ಒಂದೆರಡು ಬಾರಿ ಬೆಂಗಳೂರು ಗಾಂಧಿ ಬಜಾರಿನ ವಿದ್ಯಾರ್ಥಿ ಭವನಕ್ಕೆ ಬಂದು ದೋಸೆ ಸವಿದು ಹಳೆಯ ನೆನಪುಗಳನ್ನು ಮೆಲುಕು ಹಾಕಿ ಹೋಗುತ್ತಿದ್ದರು. ಊಟದ ಅಭಿರುಚಿ ಬಗ್ಗೆ ಕರಾರುವಾಕ್ ಆಗಿದ್ದ ಅವರು ವಿದ್ಯಾರ್ಥಿ ಭವನದಲ್ಲೊಮ್ಮೆ ದೋಸೆ ತಿಂದ ಮೇಲೆ ಎಣ್ಣೆ ಜಾಸ್ತಿ ಆಯ್ತು ಎಂದಿದ್ದರು!
ಆಸೀಸ್ ನ ಫ್ರಾಂಕ್ ಅಚ್ಚುಮೆಚ್ಚು
ಅಂದಹಾಗೆ, ಎಸ್.ಎಂ. ಕೃಷ್ಣ ಅವರು ಟೆನಿಸ್ ಪ್ರಿಯ. ಪ್ರತಿ ವರ್ಷ ಬರುವ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯನ್ನು ನೋಡಲು ಹೋಗುತ್ತಿದ್ದರು. ಆಸ್ಟ್ರೇಲಿಯಾದ ಟೆನಿಸಿಗ ಫ್ರಾಂಕ್ ಸೆಡ್ಮನ್ ಅವರ ನೆಚ್ಚಿನ ಆಟಗಾರ. ಬಿಡುವಿನ ವೇಳೆಯಲ್ಲಿ ಅವರು ಟೆನಿಸ್ ಅಂಗಳದಲ್ಲಿ ತಮ್ಮ ಪ್ರತಿಭೆ ತೋರುತ್ತಿದ್ದರು.