ಲಿಂಗಾಯತರಿಗೆ ಅನ್ಯಾಯ: 3ಬಿ ಸರ್ಟಿಫಿಕೇಟ್ ಪಡೆದವರೇ ದೌರ್ಭಾಗ್ಯವಂತರು!
ಬೆಂಗಳೂರು, ನವೆಂಬರ್.17: ರಾಜ್ಯದಲ್ಲಿ ಸುಪ್ರೀಂಕೋರ್ಟ್ ಆದೇಶಗಳು ಲೆಕ್ಕಕ್ಕೇ ಇಲ್ಲ. ಕೇಂದ್ರ ಸರ್ಕಾರದ ಸೂಚನೆಗಳ ಬಗ್ಗೆ ಮುಲಾಜೂ ಇಲ್ಲ. ಸರ್ಕಾರ ಮತ್ತು ಅಧಿಕಾರಿಗಳ ತಪ್ಪಿನಿಂದ ರಾಜ್ಯದ ಲಿಂಗಾಯತ ಸಮುದಾಯದ ಜನರು ತುಳಿತಕ್ಕೆ ಒಳಗಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ನವೋದಯ ಮತ್ತು ಮುರಾರ್ಜಿ ದೇಸಾಯಿ ಸೇರಿದಂತೆ ಹಲವು ಶಾಲೆಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರವೇಶಾತಿಗಳು ಸಿಗುತ್ತಿಲ್ಲ. ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಲಿಂಗಾಯತ ಜಾತಿ ಪ್ರಮಾಣಪತ್ರವನ್ನು ಹಿಡಿದು ಕೇಂದ್ರ ಸರ್ಕಾರದ ಹೊಸ್ತಿಲಿಗೆ ಹೋದರೆ ಉದ್ಯೋಗ ಸಿಗುವುದಿಲ್ಲ
ಕೊನೆಗೂ ಲಿಂಗಾಯತ ಸಮುದಾಯದ ಒತ್ತಡಕ್ಕೆ ಮಣಿದ ಯಡಿಯೂರಪ್ಪ!.
ರಾಜ್ಯದ ಲಿಂಗಾಯತ ಸಮುದಾಯದ ಜನರಿಗೆ ರಾಜ್ಯ ಸರ್ಕಾರ ನೀಡುವ ಜಾತಿ ಪ್ರಮಾಣಪತ್ರದಿಂದ ನಯಾಪೈಸೆ ಪ್ರಯೋಜನವಿಲ್ಲ. ಕೇಂದ್ರದ ಒಂದೇ ಒಂದು ಯೋಜನೆ ಲಿಂಗಾಯತ ಸಮುದಾಯದ ಜನರಿಗೆ ಸಿಗುವುದಿಲ್ಲ ಎಂದು ಮಾಹಿತಿಹಕ್ಕು ತಜ್ಞರಾದ ರಾಜಶೇಖರ್ ಜೆ.ಎಂ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳು, ಶಿಕ್ಷಣ, ಕೇಂದ್ರದ ಉದ್ಯೋಗಕ್ಕೆ ರಾಜ್ಯ ಸರ್ಕಾರ ನೀಡುವ ಜಾತಿ ಪ್ರಮಾಣಪತ್ರ ಕೆಲಸಕ್ಕೆ ಬರುವುದಿಲ್ಲ. ಸರ್ಕಾರವು ಈ ಪ್ರಮಾಣಪತ್ರಗಳನ್ನು ನೀಡುತ್ತಿರುವುದು ಏಕೆ. ಈ ಪ್ರಮಾಣಪತ್ರಗಳನ್ನು ಇಟ್ಟುಕೊಂಡು ಮಾಡುವುದೇನು. ಸಾಮಾನ್ಯ ಜನರಿಗೆ ಈ ಪ್ರಮಾಣಪತ್ರಗಳಿಂದ ಪ್ರಯೋಜನ ಆಗುತ್ತಿಲ್ಲವೇಕೆ ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ನೋಡಿ.
ಹಿಂದೂ ಲಿಂಗಾಯತ ಎಂಬುದು ಜಾತಿಯೇ ಅಲ್ಲ
ಕರ್ನಾಟಕದಲ್ಲಿ ಹಿಂದೂ ಲಿಂಗಾಯತರಿಗೆ ಪ್ರತ್ಯೇಕವಾದ ವಿಭಾಗದಡಿ ಜಾತಿಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಮತ್ತು ಸುಪ್ರೀಂಕೋರ್ಟ್ ಆದೇಶದ ಪ್ರಕಾರ, ಲಿಂಗಾಯತ ಎನ್ನುವುದು ಒಂದು ಜಾತಿಯೇ ಅಲ್ಲ. ಲಿಂಗಾಯತ ಪಂಥದಲ್ಲಿ 99 ಉಪ ಜಾತಿಗಳಿವೆ. ಈ ಎಲ್ಲ ಉಪ ಜಾತಿಯ ಜನರಿಗೆ ಸುಳ್ಳು ಜಾತಿ ಪ್ರಮಾಣಪತ್ರವನ್ನು ಸರ್ಕಾರವೇ ಸೃಷ್ಟಿಸಿ ವಿತರಣೆ ಮಾಡುತ್ತಿದೆ. ಈ ಜಾತಿ ಪ್ರಮಾಣದ ಬಗ್ಗೆ ಕೇಂದ್ರ ಸರ್ಕಾರದ ಯಾವುದೇ ಕಾಯ್ದೆಯಲ್ಲೂ ಉಲ್ಲೇಖವಾಗಿಲ್ಲ. ಇದು ಕೇವಲ ರಾಜ್ಯ ಸರ್ಕಾರ ಮಾಡಿಕೊಂಡಿರುವ ಪ್ರತ್ಯೇಕ ವಿಭಾಗವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
"ರಾಜ್ಯ ಸರ್ಕಾರದಿಂದ ಸುಳ್ಳು ಜಾತಿ ಪ್ರಮಾಣಪತ್ರ"
ಕೇಂದ್ರ ಸರ್ಕಾರದ ಜಾತಿಗಳ ಪಟ್ಟಿಯಲ್ಲಿ ಇಲ್ಲದ ಜಾತಿಯನ್ನು ಹುಟ್ಟು ಹಾಕುವ ಮತ್ತು ಮೀಸಲಾತಿಗಳನ್ನು ಕಲ್ಪಿಸುವ ಯಾವುದೇ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇರುವುದಿಲ್ಲ. ಇಷ್ಟಾದರೂ ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ 3ಬಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ. ಆ ಮೂಲಕ ಮೂಲಜಾತಿ ಪ್ರಮಾಣ ಪತ್ರ ನೀಡದೆ, ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಹುಟ್ಟು ಹಾಕಲಾಗುತ್ತಿದೆ. ಕೇಂದ್ರದ ಮೀಸಲಾತಿ ನಿಯಮಗಳನ್ನು ಧಿಕ್ಕರಿಸಿ ದುರುದ್ದೇಶದಿಂದ ಕಾನೂನು ಉಲ್ಲಂಘಿಸಲಾಗುತ್ತಿದೆ.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಅಚ್ಚರಿ ತಂದಿದೆ
ಕೇಂದ್ರದಲ್ಲಿ 3ಬಿ ಜಾತಿ ಪ್ರಮಾಣಪತ್ರಕ್ಕೆ ಕಿಮ್ಮತ್ತಿಲ್ಲ!
ಕೇಂದ್ರ ಸರ್ಕಾರದ ಜಾತಿಗಳ ಪಟ್ಟಿಯಲ್ಲಿ ಲಿಂಗಾಯತ ಎನ್ನುವುದು ಒಂದು ಜಾತಿ ಎನ್ನುವುದರ ಕುರಿತು ಎಲ್ಲಿಯೂ ಉಲ್ಲೇಖಿಸಿಲ್ಲ. ಈ ಬಗ್ಗೆ ತಿಳಿದಿದ್ದರೂ ಸರ್ಕಾರವು ಹಠಕ್ಕೆ ಬಿದ್ದಂತೆ ಲಿಂಗಾಯತ ಸಮುದಾಯದ ಜನರಿಗೆ 3ಬಿ ಎಂಬ ಜಾತಿ ಪ್ರಮಾಣಪತ್ರವನ್ನು ನೀಡುತ್ತಿದೆ. 3ಬಿ ಎಂಬ ವಿಭಾಗವು ಕೇಂದ್ರ ಸರ್ಕಾರದ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಇದರಿಂದ ಪ್ರತಿಬಾರಿ ಈ 3ಬಿ ಜಾತಿ ಪ್ರಮಾಣಪತ್ರವನ್ನು ಕೇಂದ್ರ ಸರ್ಕಾರದ ಉದ್ಯೋಗದ ಅರ್ಜಿ, ಶಾಲಾ ಅರ್ಜಿಗೆ ಲಗತ್ತಿಸಿದ ಸಂದರ್ಭದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.
ಸುಪ್ರೀಂಕೋರ್ಟ್ ಆದೇಶ ಪಾಲನೆ ಆಗುತ್ತಿಲ್ಲ
ಲಿಂಗಾಯತ ಎಂಬುದು ಒಂದು ಜಾತಿಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದಾಗ್ಯೂ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪುಗಳ ಬಗ್ಗೆ ಸರ್ಕಾರವು ನಿರ್ಲಕ್ಷ್ಯ ತೋರಿದೆ. ಆ ಮೂಲಕ ಅಧಿಕಾರಿಗಳು ಸಂವಿಧಾನ ಮತ್ತು ನ್ಯಾಯಾಲಯಗಳಿಗೆ ಅವಮಾನಿಸಿದ್ದಾರೆ. ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ವಂಚನೆ, ನಾಗರೀಕ ಸೇವೆ ಉಲ್ಲಂಘನೆ ಮಾಡತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರದ ಈ ಅಧಿಕಾರಿಗಳ ವಿರುದ್ಧ ದೂರು
2002 ಜನೆವರಿಯಿಂದ ಇಲ್ಲಿವರೆಗೆ ಕಾರ್ಯನಿರ್ವಹಿಸಿದ ಮತ್ತು ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಇಲಾಖೆಗಳ ಪ್ರಧಾನಕಾರ್ಯದರ್ಶಿಗಳ ವಿರುದ್ಧ ಮಾಹಿತಿ ಹಕ್ಕು ತಜ್ಞರಾದ ರಾಜಶೇಖರ್ ಜೆ.ಎಂ. ಅವರು ದೂರು ಸಲ್ಲಿಸಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ಸಿದ್ದು-ಡಿಕೆಶಿ ಒಳಗಿಂದೊಳಗೆ ಕತ್ತಿ ಮಸೆಯುತ್ತಿದ್ದಾರೆ: ಜಗದೀಶ್ ಶೆಟ್ಟರ್
3ಬಿ ಪ್ರಮಾಣಪತ್ರಗಳ ಸೃಷ್ಟಿ ಹಿಂದೆ ರಾಜಕೀಯ ಲಾಭ
ಜಾತಿಯಲ್ಲದ ಲಿಂಗಾಯತ ಮತ್ತು ವೀರಶೈವ ಜಾತಿ ಪ್ರಮಾಣ ಪತ್ರಗಳನ್ನು ರಾಜ್ಯ ಸರ್ಕಾರ ವಿತರಣೆ ಮಾಡುತ್ತಿದೆ. ಸುಳ್ಳು ಜಾತಿಗೆ ನಕಲಿ ಅಧಿಸೂಚನೆಯನ್ನು ಕಾನೂನಾತ್ಮಕವಾಗಿ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಲಿಂಗಾಯತ ಮತ್ತು ವೀರಶೈವ ಸಮುದಾಯವನ್ನು ಅವಮಾನ ಮಾಡುತ್ತಿದೆ. ಸಂವಿಧಾನ ವಿರೋಧಿ ಕ್ರಮ ಇದಾಗಿದ್ದು ಮೂಲಜಾತಿ ಪ್ರಮಾಣ ಪತ್ರ ವಂಚಿತ ಲಿಂಗಾಯತ ಮತ್ತು ವೀರಶೈವ ಸಂಪ್ರದಾಯ ಪಾಲನೆ ಮಾಡುತ್ತಿರುವ ದೊಡ್ಡ ಸಮುದಾಯಕ್ಕೆ ಆಗುತ್ತಿರುವ ವಂಚನೆ ತಡೆಯಬೇಕು ಎಂದು ಉಲ್ಲೇಖಿಸಲಾಗಿದೆ.
3ಬಿ ಸರ್ಟಿಫಿಕೇಟ್ ರದ್ದುಗೊಳಿಸಲು ಮನವಿ
ರಾಜ್ಯದಲ್ಲಿ ಈಗಾಗಲೇ ನೀಡಿರುವ 3ಬಿ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಬೇಕು. ಜನ ವಿರೋಧಿ, ಸಂವಿಧಾನ ವಿರೋಧಿ, ನ್ಯಾಯಾಂಗ ವಿರೋಧಿ ನಿರ್ಧಾರಗಳಿಂದ ಒಂದು ದೊಡ್ಡ ಸಮುದಾಯದ ನಾಗರಿಕರು ಕೇಂದ್ರ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಾಮಾಜಿಕ ಗೌರವ ಕಳೆದುಕೊಂಡು, ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಸಾಂವಿಧಾನಿಕ ಹಕ್ಕುಗಳಿಲ್ಲದೇ, ಸರ್ಕಾರದ ನೌಕರಿಗಳಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಲಿಂಗಾಯತ ಪಂಥದ ಜನರಿಗೆ 3ಬಿ ಜಾತಿಯ ಪ್ರಮಾಣಪತ್ರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನೇತೃತ್ವದ ತಂಡದಿಂದ ತನಿಖೆ ನಡೆಸಬೇಕು. ಮೂರು ತಿಂಗಳೊಳಗೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರದ ನಾಗರಿಕ ಸೇವೆಯಿಂದ ವಜಾಗೊಳಿಸಬೇಕೆಂದು ದೂರಿನಲ್ಲಿ ಮನೆ ಮಾಡಲಾಗಿದೆ.
Recommended Video
ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು ಉಲ್ಲೇಖ
ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಸರ್ಕಾರಿ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಿರುವ ಮದ್ರಾಸ್ ಹೈಕೋರ್ಟ್ ತೀರ್ಪಿನ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ರೈತರೊಬ್ಬರ ಕಂದಾಯ ದಾಖಲೆಗಳಲ್ಲಿನ ಲೋಪದೋಷ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿ ತ್ವರಿತ ವಿಲೇವಾರಿ ಮಾಡದ ಐಎಎಸ್ ಅಧಿಕಾರಿಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠದ ನ್ಯಾಯಮೂರ್ತಿ ಎಸ್. ವೈದ್ಯನಾಥನ್ ಕಿಡಿ ಕಾರಿದ್ದರು. ನ್ಯಾಯಾಲಯಗಳ ಆದೇಶಗಳನ್ನು ಉಲ್ಲಂಘಿಸುವ ಐಎಎಸ್ ಅಧಿಕಾರಿಗಳನ್ನು ಮೊದಲು ಜೈಲಿಗೆ ಕಳುಹಿಸುವುದರ ಮೂಲಕ ಶಿಕ್ಷಿಸಬೇಕು. ತದನಂತರ ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಂಡ ವಿಧಿಸುವ ಪ್ರಕ್ರಿಯೆಗಳನ್ನು ಅನುಸರಿಸಬೇಕು ನೀಡಿದ್ದರು.