ಬಿ. ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಡೀಲ್ ಪ್ರಕರಣದ ಅಸಲಿಯತ್ತು ಏನು?
ಬೆಂಗಳೂರು, ಜುಲೈ 03: ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಆಪ್ತ ಸಹಾಯಕ ಎನ್ನಲಾದ ರಾಜು 'ಡೀಲ್' ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಅಪವಾದ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರೀತಿಯ ಪುತ್ರ ಬಿ. ವೈ. ವಿಜಯೇಂದ್ರ ತಾನು ಕ್ಲೀನ್ ಎಂದು ಬಿಂಬಿಸಿಕೊಳ್ಳಲು ಹೊರಟರೇ?
ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ಎನ್ನಲಾದ ರಾಜಣ್ಣ ಅವರ ಅಡಿಯೋ ಬಳಸಿಕೊಂಡು 'ನಾನವನಲ್ಲ' ಎನಿಸಿಕೊಳ್ಳಲು ಹೊರಟರೇ? ರಾಜಣ್ಣ ಡೀಲ್ ಪ್ರಕರಣದಲ್ಲಿ ಇಂಥದ್ದೊಂದು ಚರ್ಚೆ ಶುರುವಾಗಿದೆ.
ಬಿಡುಗಡೆ ಬಳಿಕ ಶ್ರೀರಾಮುಲು ಪಿಎ ರಾಜು ಫೇಸ್ಬುಕ್ ಪೋಸ್ಟ್!
ರಾಮಲಿಂಗಂ ಡೀಲ್ ಪ್ರಕರಣ ಜಡ್ಜ್ಮೆಂಟ್
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗಿನ ಮೂಲ ಕಾರಣವೇ ಬಿ.ಎಸ್.ಯಡಿಯೂರಪ್ಪ ಕುಟುಂಬ ಸದಸ್ಯರು ಆಡಳಿತದಲ್ಲಿ ನಡೆಸುವ ಹಸ್ತಕ್ಷೇಪ ಎಂಬ ಮಾತಿದೆ. ಅದರಲ್ಲೂ ಬಿ.ವೈ. ವಿಜಯೇಂದ್ರ ಅವರ ಮೇಲೆ ಬಹುದೊಡ್ಡ ಆರೋಪಗಳು ಕೇಳಿ ಬರುತ್ತಿದ್ದವು. ಅನೇಕ ಶಾಸಕರು ಮುನಿಸಿಕೊಂಡು ಸಂಧಾನ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ರಾಮಲಿಂಗಂ ಕನ್ಸ್ಟ್ರಕ್ಷನ್ ಸಂಸ್ಥೆಗೆ ಗುತ್ತಿಗೆ ಕೊಡಿಸುವ ಸಲುವಾಗಿ ನಡೆದಿರುವ ಮಾತುಕತೆ, 12 ಕೋಟಿ ರೂ. ಡೀಲ್ ಗೆ ಸಂಬಂಧಿಸಿದ ವಾಟ್ಸಪ್ ಚಾಟ್ ಆಡಿಯೋ ತುಣುಕುಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಜನ ಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ.
ಯಡಿಯೂರಪ್ಪ ಅವರನ್ನು ಅಭಿಯೋಜನೆಗೆ ಒಳಪಡಿಸಲು ರಾಜ್ಯಪಾಲರು ನಿರಾಕರಿಸಿದರೂ ಜು. 8 ರಂದು ಪ್ರಕರಣದ ತನಿಖೆ ಕುರಿತು ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಲಿದೆ. ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿ ಜತೆಗಿನ ಗುತ್ತಿಗೆ ಅವ್ಯವಹಾರ ಕುರಿತು ಖಾಸಗಿ ದೂರು ತೀರ್ಪು ಹೊರ ಬರುವ ಸನಿಹದಲ್ಲಿ ಈ ಈ ಬೆಳವಣಿಗೆ ನಡೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.ವಿಜಯೇಂದ್ರ ಎಫ್ಐಆರ್ ಸಾರಾಂಶ
ಬಿ. ವೈ. ವಿಜಯೇಂದ್ರ ವಿರುದ್ಧದ ಖಾಸಗಿ ದೂರು ಕುರಿತ ತೀರ್ಪು ಇನ್ನೇನು ವಾರದಲ್ಲಿ ಪ್ರಕಟವಾಗಲಿದೆ. ಇಂತಹ ಸಂಧರ್ಭದಲ್ಲಿ ವಿಜಯೇಂದ್ರ ಹೆಸರು ಹೇಳಿಕೊಂಡು ಸಚಿವರ ಆಪ್ತ ಸಹಾಯಕ ಮಾತನಾಡಿರುವ ಆಡಿಯೋ ಇಟ್ಟುಕೊಂಡು ಸೈಬರ್ ಪೊಲೀಸ್ ಠಾಣೆಗೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್ಐಆರ್ ನಲ್ಲಿ ವಿಜಯೇಂದ್ರ ಎಂಬ ಹೆಸರು ಬಿಟ್ಟರೆ, ಬಿ.ವೈ. ಎಂಬುದನ್ನು ಸೇರಿಸಿಲ್ಲ. ಅವರ ವಿಳಾಸ, ಮೊಬೈಲ್ ನಂಬರ್ ಕೂಡ ನಮೂದಿಸದೇ ಎಫ್ಐಆರ್ ದಾಖಲಿಸಲಾಗಿದೆ.
ಒಬ್ಬ ಮುಖ್ಯಮಂತ್ರಿಯ ಪುತ್ರ ಎನ್ನುವ ಕಾರಣಕ್ಕೆ ಪ್ರಕರಣದಲ್ಲಿ ವಿಳಾಸವೂ ಉಲ್ಲೇಖಿಸದೇ ಎಫ್ಐಆರ್ ಮಾಡಿದ್ದಾರೆ. ರಾಜಣ್ಣ ಎಂಬುವರ ವಿರುದ್ಧ ದೂರು ನೀಡಿದ್ದು, ದೂರುದಾರರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲವರಿಗೆ ಕೆಲಸ ಮಾಡಿಕೊಡುವ ಆಮಿಷ ತೋರಿಸಿ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ. ವಂಚಕ ಆರೋಪಿ ಜತೆ ದೂರುದಾರರು ಯಾವುದೇ ಸಂಬಂಧ ಹಾಗೂ ಸಂಪರ್ಕ ಹೊಂದಿರುವುದಿಲ್ಲ. ಹೀಗಾಗಿ ಸೂಕ್ತ ಕ್ರಮ ಜರುಗಿಸಲು ಕೋರಿ ದೂರು ನೀಡಿದೆ ಎಂದಷ್ಟೇ ಪ್ರಥಮ ವರ್ತಮಾನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಥಮ ವರ್ತವಾನದಲ್ಲಿ ಎಷ್ಟು ಕೋಟಿ ಡೀಲ್, ಹೇಗೆ ನಡೆಯಿತು. ಯಾರ ಹೆಸರನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದ ಎಂಬ ಮೂಲ ಅಂಶಗಳನ್ನು ಕೂಡ ತೊರಿಸಿಲ್ಲ. ಇದು ಎಫ್ಐಆರ್ ನ ಕಥೆ.ವಿಜಯೇಂದ್ರ ನಡುವೆ ಶೀತಲ ಸಮರ: ಶ್ರೀರಾಮುಲು ಆಪ್ತ ರಾಜಣ್ಣ ಬಂಧನ ನಾಟಕ
ಸಿಸಿಬಿ ಪೊಲೀಸರ ಎಂಟ್ರಿ
ವಿಜಯೇಂದ್ರ ಸೈಬರ್ ಪೊಲೀಸ್ ಠಾಣೆಗೆ ನೀಡಿದ ದೂರು ಸದ್ದಿಲ್ಲದೇ ಸಿಸಿಬಿ ಕೈ ಸೇರಿದೆ. ಸಿಸಿಬಿ ಪೊಲೀಸರು ಜು. 1 ರಂದು ಸಂಜೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ತನ್ನ ಆಪ್ತ ಸಹಾಯಕ ಡೀಲ್ ಮಾಡಿದ ಎಂಬ ಹೆಸರಿನಲ್ಲಿ ಇಡೀ ನನ್ನ ರಾಜಕೀಯ ಭವಿಷ್ಯಕ್ಕೆ ಮಸಿ ಬಳಿಯಲಾಗುತ್ತದೆ ಎಂದು ಶ್ರೀರಾಮುಲು ಅಸಮಾಧಾನ ತೋಡಿಕೊಂಡಿದ್ದರು. ನನ್ನ ಆಪ್ತ ಸಹಾಯಕ ತಪ್ಪು ಮಾಡಿದ್ದರೆ ಒಂದು ಮಾತು ಹೇಳಬಹುದಿತ್ತು.
ಆತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲಿ ಎಂಬ ಬೇಸರದ ಮಾತು ಆಡುವ ವೇಳೆಗೆ ಸಿಸಿಬಿ ಕಷ್ಟಡಿಯಲ್ಲಿದ್ದ ರಾಜಣ್ಣ ವಿಚಾರಣೆ ಮುಗಿಸಿ ಹೊರ ಬಂದರು. ಬಂಧನ ಎಂದೇ ಬಿಂಬಿತವಾದ ಪ್ರಕರಣದಲ್ಲಿ ರಾಜಣ್ಣನ ಮೊಬೈಲ್ ವಶಫಡಿಸಿಕೊಂಡಿದ್ದು ಅದರಲ್ಲಿನ ಮೂರು ಅಡಿಯೋ ತುಣುಕುಗಳಿಗೆ ಸಂಬಂಧಿಸಿದಂತೆ ಧ್ವನಿ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಟೆಂಡರ್ ಕೊಡಿಸವ ವಿಚಾರಕ್ಕೆ ಸಂಬಂಧಿಸದಂತೆ 70 ಲಕ್ಷ ರೂ. ವಿಜಯೇಂದ್ರ ಹೆಸರಿನಲ್ಲಿ ರಾಜಣ್ಣ ಕೇಳಿದ್ದಾರೆ ಎನ್ನಲಾಗಿದೆ. ಎರಡನೇ ಆಡಿಯೋದಲ್ಲಿ ಮೂರು ಕೋಟಿ , ಮೂರನೇ ಅಡಿಯೋದಲ್ಲಿ 1 ಕೋಟಿ ರೂ. ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅತಿ ಶೀಘ್ರದಲ್ಲಿಯೇ ಈ ಆರೋಪಕ್ಕೆ ಆರೋಪಿಯ ಧ್ವನಿ ಮಾದರಿ ಪರೀಕ್ಷೆ ಉತ್ತರ ಕೊಡಲಿದೆ.ಯಾರು ಈ ರಾಜಣ್ಣ ?
ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಿಸುವ ಡೀಲ್ ಪ್ರಸ್ತಾಪವನ್ನು ರಾಜು ನಡೆಸಿದ್ದಾನೆ ಎಂಬ ಆರೋಪವಿದೆ. ಮಾಜಿ ಸಚಿವ ಜಿ. ಜನಾರ್ಧನರೆಡ್ಡಿ ಹಾಗೂ ಶ್ರೀರಾಮುಲು ಆಪ್ತ ಸಹಾಯಕ ಎಂದು ವರ್ಷಗಳಿಂದಲೂ ಬಿಂಬಿಸಿಕೊಂಡಿರುವ ರಾಜಣ್ಣ ಎಂಬಾತ ಶ್ರೀರಾಮುಲು ಬಳಿ ಆಪ್ತವಾಗಿ ತೆಗೆಸಿಕೊಂಡಿರುವ ಫೋಟೊಗಳು ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಎಲ್ಲಿಯೇ ಹೋದರೂ ಸಿನಿಮಾ ಹೀರೋ ರೀತಿ ಎಂಟ್ರಿ ಕೊಡುವ ಆಸಕ್ತಿ. ಇದನ್ನು ತಿಳಿದ ಎಷ್ಟೋ ಮಂದಿ ಶ್ರೀರಾಮುಲು ಹಿಂದೆ ಕಾರಲ್ಲಿ ಸೀಟು ಸಿಕ್ಕರು ಕೂತು ಓಡಾಡುವರ ಸಂಖ್ಯೆ ಲೆಕ್ಕವಿಲ್ಲ. ಸಮಾಜ ಕಲ್ಯಾಣ ಸಚಿವರ ಆಫ್ತ ಸಹಾಯಕ ಎಂದು ಓಡಾಡುವರು ಸುಮಾರು 20 ರಿಂದ 40 ಮಂದಿವರೆಗೂ ಇದ್ದಾರೆ. ಯಾರು ಏನು ಮಾಡುತ್ತಾರೆ.
ಸಚಿವರ ಹೆಸರನ್ನು ಯಾರು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಯಾರಿಗೂ ಗೊತ್ತಾಗಲ್ಲ. ಸಚಿವರು ಕೂಡ ಅಷ್ಟೇ, ಯಾಕೆ ಇಷ್ಟು ಮಂದಿ ಇದ್ದೀರಾ ? ಇಲ್ಲಿ ಏನು ಕೆಲಸ ಎಂದ ಯಾರನ್ನು ಫ್ರಶ್ನೆ ಮಾಡುವುದಿಲ್ಲ. ಹೀಗಾಗಿ ರಾಮುಲು ಎಂದರೆ ಅವರ ಪಕ್ಕದಲ್ಲಿರುವರೆಲ್ಲರೂ ಆಪ್ತ ಸಹಾಯಕರು ಅಂತಲೇ ಹೇಳಿಕೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲೂ ರಾಜಣ್ಣ ಬಹಳ ಸಮೀಪವರ್ತಿಯಾಗಿ ರಾಮುಲು ಅವರಿಗೆ ಗುರುತಿಸಿಕೊಂಡಿದ್ದರು ಎಂದು ರಾಜಣ್ಣ ಅವರನ್ನು ಆಪ್ತದಿಂದ ಬಲ್ಲ ವ್ಯಕ್ತಿ ತಿಳಿಸಿದರು. ಇದೀಗ ಆಪ್ತ ಸಹಾಯಕ ಸಿಸಿಬಿ ವಿಚಾರಣೆಗೆ ಎಂಟ್ರಿ ಕೊಡುತ್ತಿದ್ದಂತೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಇನ್ನೇನು ಬಂಧನವೇ ಆಗಿ ಹೋಗಿದ್ದ ಎಂದೇ ಸುದ್ದಿಯಾದ ರಾಜಣ್ಣ ವಿಚಾರಣೆ ಎದುರಿಸಿ ಹೊರ ಬಂದಿದ್ದಾರೆ.ವಿಜಯೇಂದ್ರ ಕಮೀಷನ್ ಏಜೆಂಟ್ ಎಂದ ಅಬ್ರಹಾಂ
ವಿಜಯೇಂದ್ರ ದೂರು ಕೊಟ್ಟಿರುವುದು ಡ್ರಾಮ. ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ವಿಜಯೇಂದ್ರನಿಗೂ ಏಜೆಂಟ್ ಆಗಿದ್ದ. ವಿಜಯೇಂದ್ರನ ಕೆಲಸ ಮಾಡಿಕೊಡುತ್ತಿದ್ದ. ಎಲ್ಲಾ ಕಡೆ ವಿಜಯೇಂದ್ರನಿಗೆ ಏಜೆಂಟರು ಇದ್ದಾರೆ. ವಿಜಯೇಂದ್ರ ಕಲೆಕ್ಷನ್ ಏಜೆಂಟ್, ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ. ಡೀಲ್ ಕುದುರಿಸುವಲ್ಲಿ ಎಡವಟ್ಟು ಆಗಿ ಹೊರಗೆ ಬಂದಿದೆ ಅಷ್ಟೆ. ನಾನು ವಿಜಯೇಂದ್ರ ಮೇಲೆ ದಾಖಲಿಸಿರುವ ಖಾಸಗಿ ದೂರಿನ ದಾಖಲೆಗಳು ಕೂಡ ಹಾಗೆಯೇ ಹೊರಗೆ ಬಂದಿದ್ದು. ಡೆಲಿವರಿಯಲ್ಲಿ ಎಡವಟ್ಟಾಗಿ ದೂರು ದಾಖಲಿಸಬಹುದು. ವಿಜಯೇಂದ್ರ ಭ್ರಷ್ಟಾಚಾರಿ. ಇದನ್ನು ನಾನು ಶೀಘ್ರದಲ್ಲಿಯೇ ನಿರೂಪಿಸುತ್ತೇನೆ. ಇಲ್ಲಾ, ಆತ ಪ್ರಾಮಾಣಿಕ ಅಂತ ಬಿಂಬಿಸಿಕೊಳ್ಳುವಂತಿದ್ದರೆ ನನ್ನ ಮೇಲೆ ಬೇಕಾದರೆ ಮಾನನಷ್ಟ ಮೊಕದ್ದಮೆ ಬೇಕಾದರೂ ಹೂಡಲಿ ಎಂದು ದೂರುದಾರ ಟಿ.ಜೆ. ಅಬ್ರಹಾಂ ಸವಾಲು ಹಾಕಿದ್ದಾರೆ. ಒನ್ ಇಂಡಿಯಾ ಕನ್ನಡಕ್ಕೆ ದೂರವಾಣಿ ಮೂಲಕ ಅವರು ಈ ಸವಾಲು ಎಸೆದಿದ್ದಾರೆ.
Recommended Video
ಸಂದೇಶದ ಉದ್ದೇಶವೇ?
ಕೋಟ್ಯಂತರ ರೂಪಾಯಿ ಡೀಲ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದರೂ ಆರೋಪಿತ ರಾಜಣ್ಣನನ್ನು ಸಿಸಿಬಿ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರ ಮುನಿಸು ಶಮನಗೊಳಿಸಲು ಸರ್ಕಾರ ಸಿಸಿಬಿ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಅಷ್ಟು ಗಂಭೀರವಾಗಿ ಪರಿಗಣಿಸಿ ದೂರು ನೀಡಿದ ಮೇಲೆ, ಕೋಟ್ಯಂತರ ರೂಪಾಯಿ ಅಕ್ರಮ ಎಂಬುದು ನಿಜವೇ ಆಗದ್ದಲ್ಲಿ ಆರೋಪಿತನನ್ನು ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದಿತ್ತಲ್ಲವೇ? ಇದರಲ್ಲಿ ಪ್ರಭಾವಿ ಸಚಿವ ಶ್ರೀರಾಮುಲು ಅವರ ಹೆಸರಿಗೆ ಆಗಿರುವ ಧಕ್ಕೆ ಸರಿಪಡಿಸುವ ಜತೆಗೆ " ವಿಜಯೇಂದ್ರ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಕಂಬಿ ಎಣಿಸಬೇಕಾಗುತ್ತದೆ ಎಂಬ ಸಂದೇಶವೂ ರವಾನಿಸಂದಂತೆ ಕಾಣುತ್ತದೆ.
"ನಾನು ಪ್ರಾಮಾಣಿಕ, ನನ್ನ ಹೆಸರಿನಲ್ಲಿ ಯಾರೋ ಮಾಡುವ ಅಕ್ರಮಗಳಿಂದ ನನ್ನ ಹೆಸರಿಗೆ ಧಕ್ಕೆ ತರಲಾಗುತ್ತಿದೆ' ಎಂಬ ಸಂದೇಶವನ್ನು ರವಾನಿಸಲು ಈ ಅವಕಾಶವನ್ನು ವಿಜಯೇಂದ್ರ ಬಳಿಸಿಕೊಂಡರೇ? ಹೀಗೊಂದು ಪ್ರಶ್ನೆ ಕೂಡ ಎದ್ದಿದೆ. ಇದರ ನಡುವೆ ಯಡಿಯೂರಪ್ಪ ಕುಟುಂಬವೇ ಕಮೀಷನ್ ಪಡೆದ ಆರೋಪ ಎದುರಿಸುತ್ತಿದ್ದು, ಜು. 8 ರಂದು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದರ ಹಣೆಬರಹ ಪ್ರಕಟಿಸಲಿದೆ. ಇಂತಹ ಸಂದರ್ಭದಲ್ಲಿಯೇ 'ರಾಜಣ್ಣ ಡೀಲ್' ಪ್ರಕರಣ ಹೊರ ಬಂದಿದ್ದು ರಾಜಕೀಯವಾಗಿ ಬಹು ಚರ್ಚೆಗೆ ಕಾರಣವಾಗಿದೆ.