ಖರ್ಗೆ ಆಸೆಗೆ ತಣ್ಣೀರು ಸುರಿದ ಉಪಚುನಾವಣೆ ಫಲಿತಾಂಶ: ರಾಜಕೀಯ ನಿವೃತ್ತಿ?
ಬೆಂಗಳೂರು, ಡಿಸೆಂಬರ್ 10: ಉಪಚುನಾವಣೆ ಫಲಿತಾಂಶ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಬಹು ವರ್ಷಗಳ ಆಸೆ ಮೇಲೆ ತಣ್ಣೀರು ಸುರಿದಿದೆ.
ಹೌದು, ಕರ್ನಾಟಕ ಸಿಎಂ ಆಗಬೇಕೆನ್ನುವುದು ಖರ್ಗೆ ಅವರ ಬಹು ವರ್ಷಗಳ ಆಸೆ. ಖರ್ಗೆ ಅವರ ಓರಗೆಯವರು, ಕಿರಿಯರೂ ಸಹ ಕರ್ನಾಟಕದ ಸಿಎಂ ಆಗಿದ್ದಾರೆ. ಆದರೆ ಯೋಗ್ಯತೆ ಇದ್ದರೂ ಸಹ ಖರ್ಗೆ ಅವರಿಗೆ ಸಿಎಂ ಪಟ್ಟ ಒಲಿದಿರಲಿಲ್ಲ.
ಮೈತ್ರಿ ಸರ್ಕಾರ ಪತನದ ಬಳಿಕ ಬಂದ ಉಪಚುನಾವಣೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಣ್ಣ ಅವಕಾಶವೊಂದರ ಬಾಗಿಲು ತೆರೆಯುವ ಸೂಚನೆ ನೀಡಿತ್ತು. ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯೇನಾದರೂ ಆರಕ್ಕಿಂತ ಕಡಿಮೆ ಸ್ಥಾನ ಗೆದ್ದರೆ ತಮಗೊಂದು ಅವಕಾಶ ಸಿಗಬಹುದೆಂಬ ಸಣ್ಣ ಆಸೆ ಖರ್ಗೆ ಅವರಿಗೆ ಹುಟ್ಟಿತ್ತು.
ಬಹಿರಂಗವಾಗಿಯೇ ಮಾತನಾಡಿದ್ದ ಖರ್ಗೆ
ಈ ಬಗ್ಗೆ ಮತದಾನಕ್ಕೂ ಮುನ್ನಾ ಬಹಿರಂಗವಾಗಿಯೇ ಮಾತನಾಡಿದ್ದ ಖರ್ಗೆ, 'ಡಿಸೆಂಬರ್ 9 ರ ಫಲಿತಾಂಶದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡೋಣ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಮೈತ್ರಿ ಮಾಡಿಕೊಂಡರೆ ತಪ್ಪೇನು? ಎಂಬ ಪ್ರಶ್ನೆಯನ್ನೂ ಹಾಕಿದ್ದರು.
ಜೆಡಿಎಸ್ನೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಆಸೆ ಇತ್ತು
ಬಿಜೆಪಿಯು ಉಪಚುನಾವಣೆಯಲ್ಲಿ ಆರಕ್ಕಿಂತ ಕಡಿಮೆ ಸ್ಥಾನ ಪಡೆದರೆ, ಜೆಡಿಎಸ್ ನೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡು, ತಾವೇ ಸಿಎಂ ಆಗುವ ಹುಮ್ಮಸ್ಸಿನಲ್ಲಿ ಖರ್ಗೆ ಇದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ಖರ್ಗೆ ಅವರಿಗೆ ಈ ಉಪಚುನಾವಣೆಯು ಮತ್ತೊಂದು ರಾಜಕೀಯ ಭವಿಷ್ಯದ ಅದೃಷ್ಟದ ಬಾಗಿಲಾಗಿತ್ತು. ಆದರೆ ಆ ಬಾಗಿಲು ಈಗ ಮುಚ್ಚಿದೆ.
ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡ ಖರ್ಗೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಖರ್ಗೆ ಅವರಿಗೆ ಉಪಚುನಾವಣೆ ಒಂದು ಸದಾವಕಾಶವಾಗಿತ್ತು. ಆದರೆ ಅವಕಾಶದ ಬಾಗಿಲು ಬಂದ್ ಆಗಿದೆ. ಮೈತ್ರಿ ಸರ್ಕಾರಕ್ಕೆ ಸಿಎಂ ಆಗುವ ಕನಸು ಭಗ್ನಗೊಂಡಿದೆ. ರಾಜಕೀಯದಲ್ಲಿ ಸಕ್ರಿಯರಾಗುವ ಕೊನೆಯ ಅವಕಾಶವೊಂದು ಇಲ್ಲದಂತಾಗಿದೆ.
ರಾಜಕೀಯ ಸಂಧ್ಯಾಕಾಲದಲ್ಲಿರುವ ಖರ್ಗೆ
ರಾಜಕೀಯ ಸಂಧ್ಯಾಕಾಲದಲ್ಲಿರುವ ಖರ್ಗೆ ಅವರು ತಾವು ಎದುರಿಸಿದ ಬಹುತೇಕ ಕೊನೆಯ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕ ಸ್ಥಾನ ಅಲಂಕರಿಸಿರುವ ಅವರು ಕೇವಲ ಸಲಹಾ ಸಮಿತಿ ಗೆ ಸೀಮಿತವಾಗಿದ್ದಾರೆ.