ಮಲ್ಲಿಕಾರ್ಜುನ ಖರ್ಗೆ ಅವರಿಗೆ 3 ಬಾರಿ ಸಿಎಂ ಸ್ಥಾನ ತಪ್ಪಿದ್ಯಾಕೆ?
ಬೆಂಗಳೂರು, ಜ. 23: ''ಕೆಪಿಸಿಸಿ ಅಧ್ಯಕ್ಷ ಸಾರಥ್ಯ ವಹಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಈಗಿನ ಸಂದರ್ಭದಲ್ಲಿ ನಾನು ರಾಜ್ಯ ರಾಜಕಾರಣಕ್ಕೆ ಮರಳುವ ಮಾತೇ ಬೇಡ'' ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂಬ ಸುದ್ದಿ ಬಂದಿದೆ. ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಕುರಿತಂತೆ ಹಗ್ಗಜಗ್ಗಾಟ ನಡೆದಿರುವಾಗಲೇ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರೋಧಿ ಹಾಗೂ ಮೂಲ ಕಾಂಗ್ರೆಸ್ಸಿಗರ ಬಣ ಸಭೆ ನಡೆಸಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಮರಳಬೇಕು ಎಂದು ಒತ್ತಡ ಹಾಕಿದೆ ಎಂಬ ಮಾಹಿತಿ ಬಂದಿದೆ. ಆದರೆ ಅದನ್ನು ತಳ್ಳಿಹಾಕಿರುವ ಖರ್ಗೆ ಅವರು ಅದಕ್ಕೆ ಹಲವು ಕಾರಣಗಳನ್ನೂ ಸಂದರ್ಭ ಸಹಿತ ವಿವರಿಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಮತ್ತೆ ನನೆಗುದಿಗೆ ಬಿದ್ದಿದ್ಯಾಕೆ ಗೊತ್ತಾ?
ರಾಜ್ಯ ಕಾಂಗ್ರೆಸ್ನಲ್ಲಿ ಹೆಚ್ಚುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿಡಿತವನ್ನು ತಪ್ಪಿಸಲು ಮೂಲ ಕಾಂಗ್ರೆಸ್ಸಿಗರು ದೊಡ್ಡಮಟ್ಟದ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ನಿನ್ನೆ ರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ಮಹತ್ವದ ಸಭೆ ನಡೆದಿದೆ. ಅಹಿಂದ ನಾಯಕ ಮಲ್ಲಿಕಾರ್ಜುಜ ಖರ್ಗೆ ಅವರಿಗೆ ಕೆಪಿಸಿಸಿ ಪಟ್ಟಕಟ್ಟಲು ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ ಮೂಲ ಕಾಂಗ್ರೆಸ್ ನಾಯಕರ ಬೇಡಿಕೆಗೆ ಖರ್ಗೆ ಅವರು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳುವಂತೆ ಖರ್ಗೆ ಮೇಲೆ ಒತ್ತಡ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಖರ್ಗೆ ಅಸ್ತ್ರ ಬಳಸಲು ರಾಜ್ಯ ಕಾಂಗ್ರೆಸ್ ನಾಯಕರು ಮುಂದಾಗಿದ್ದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ, ಮಾಜಿ ಸಚಿವೆ ಮೊಟಮ್ಮ ಸೇರಿದಂತೆ ಹಲವು ಕಾಂಗ್ರೆಸ್ ಪಕ್ಷದ ಬಹುತೇಕ ಎಲ್ಲ ಅಹಿಂದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ.
ನೀವು ಒಪ್ಪುವುದಾದರೆ ಎಲ್ಲ ಅಹಿಂದ ನಾಯಕರನ್ನು ಕರೆದುಕೊಂಡು ಬರುತ್ತೇವೆ. ಎಡ ಮತ್ತು ಬಲ ಸಮುದಾಯಗಳು ಕಾಂಗ್ರೆಸ್ ಪಕ್ಷದಿಂದ ದೂರ ಆಗುತ್ತಿವೆ. ಮಲ್ಲಿಕರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದರೆ ಎರಡೂ ಸಮುದಾಯಗಳು ಕಾಂಗ್ರೆಸ್ 'ಕೈ'ಹಿಡಿಯುತ್ತವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಹಿಸಲು ನಮಗೆ ಆಗಲ್ಲ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಮಗೆ ಸರಿ ಹೋಗಲ್ಲ. ಕೆಪಿಸಿಸಿಗೆ ನೀವು ಅಧ್ಯಕ್ಷರಾದ್ರೆ ನಾವು ಉಳಿಯಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಅವರ ಮನವೊಲಿಕೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ.
ಹೊಸ ಕಥೆ ಕೇಳಿ ಹಳೆಯ ಕಥೆ ಹೇಳಿದ ಖರ್ಗೆ?
ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅನುಭವವನ್ನು ಬಿಚ್ಚಿ ಇಟ್ಟಿದ್ದಾರೆ ಎನ್ನಲಾಗಿದೆ. ಹಿಂದೆ ಹೈಕಮಾಂಡ್ ಕೈಗೊಂಡಿದ್ದ ಹಲವು ನಿರ್ಣಯಗಳ ಬಗ್ಗೆ ನಿನ್ನೆಯ ಸಭೆಯಲ್ಲಿ ಮಾಹಿತಿ ಕೊಟ್ಟಿದ್ದಾರೆ. ಹಿಂದೆ ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗುವಾಗ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಖರ್ಗೆ ಅವರ ಪರವಾಗಿ 89 ಜನ ಶಾಸಕರು ಸಹಿ ಹಾಕಿ ಹೈಕಮಾಂಡ್ಗೆ ಕೊಟ್ಟಿದ್ದರಂತೆ. ಶಾಸಕಾಂಗ ಪಕ್ಷದ ಸಭೆಗೆ ಬಂದಿದ್ದ ಗುಲಾಂನಬಿ ಆಜಾದ್ ಅವರು ಎಸ್ಎಂ ಕೃಷ್ಣ ಅವರು ಹಿರಿಯರಿದ್ದಾರೆ. ಅವರೇ ಸಿಎಂ ಆಗಲಿ ಎಂದು ಸೂಚನೆ ಕೊಟ್ಟಿದ್ದರಿಂದ ಆಗ ಖರ್ಗೆ ಅವರು ಸಿಎಂ ಆಗಲಿಲ್ಲ. ನಂತರ 2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಮಲ್ಲಿಕಾರ್ಜುನ ಖರ್ಗೆ ಅವರೆ ಸಿಎಂ ಆಗಬೇಕು ಎಂದು ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಸಹಿ ಹಾಕಿದ್ದರಂತೆ. ಆದರೆ ಜೆಡಿಎಸ್ ಪಕ್ಷ ಧರಂಸಿಂಗ್ ಅವರನ್ನು ಸಿಎಂ ಮಾಡಬೇಕು ಎಂದಾಗ ಹೈಕಮಾಂಡ್ ಒಪ್ಪಿಕೊಂಡಿತು, ಹಾಗಾಗಿ ಆಗಲೂ ಸಿಎಂ ಆಗಲಿಲ್ಲ.
ನನ್ನ ಏನೂ ಕೇಳ್ಬೇಡಿ, ನಾನು ಯಾವ ಗುಂಪಿಗೂ ಸೇರಿದವನಲ್ಲ: ಡಿಕೆಶಿ
2008ರಲ್ಲಿ ಕಾಂಗ್ರೆಸ್ -ಜೆಡಿಎಸ್ ಜೊತೆಗೂಡಬೇಕಿತ್ತು
2008ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಗಳು ಜೊತೆಗೂಡಿ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡುವಂತೆ ಶಾಸಕರ ಒತ್ತಡ ಕೇಳಿಬಂದಿತ್ತು. ಆದರೆ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಬಿಜೆಪಿ 110 ಸ್ಥಾನ ಪಡೆದಿದೆ. ನಾವು ಸರ್ಕಸ್ ಮಾಡೋದು ಬೇಡ ಎಂದಿದ್ದರಂತೆ. ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ಕೂಡ ಸಹ ಸಾಥ್ ಕೊಡಲಿಲ್ಲವಂತೆ. ಆಗ ವಿರೋಧ ಪಕ್ಷದ ನಾಯಕರಾಗಿದ್ದಾಗ ಕೇಂದ್ರಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕರೆಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮತ್ತೆ ರಾಜ್ಯ ರಾಜಕಾರಣ ಜಪ ಬೇಡ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶವಿದ್ದರೂ ಹೈಕಮಾಂಡ್ ಸಹಕಾರ ಕೊಟ್ಟಿರಲಿಲ್ಲ ಎಂದು ಅವರೆ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಹಾಗಾಗಿ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಖರ್ಗೆ ಅವರು ಹಿರಿಯ ಅಹಿಂದ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅವಕಾಶ ಮಾಡಿಕೊಟ್ಟರೆ ರಾಜ್ಯಸಭಾ ಸದಸ್ಯ ಆಗುತ್ತೇನೆ. ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯವರೆಗೂ ಕಾಯುತ್ತೇನೆ. ಅಹಿಂದ ಎಂದು ಬಿಂಬಿಸಿಕೊಳ್ಳುವುದು ಇಷ್ಟವಿಲ್ಲ. ರಾಜ್ಯ ರಾಜಕಾರಣ ಮಾಡುವವರಿಗೆ ಸಹಕಾರ ಕೊಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಕಪಿಸಿಸಿ ಅಧ್ಯಕ್ಷಸ್ಥಾನ ಬೇಡ ಎಂದಾಗ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಬಲ ಕೊಡಲು ಕಾಂಗ್ರೆಸ್ ಪಕ್ಷದಲ್ಲಿನ ಮೂಲ ಕಾಂಗ್ರೆಸ್ಸಿಗರು ಹಾಗು ಅಹಿಂದ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ದೊಡ್ಡದಾದ ಮೂಲ-ವಲಸೆ ಕಾಂಗ್ರೆಸ್ ಅಂತರ
ಹೆಚ್ಚಾಗುತ್ತಿರುವ ಮೂಲ-ವಲಸೆ ಕಾಂಗ್ರೆಸ್ಸಿಗರ ಮಧ್ಯದ ಅಂತರ
ಕೆಪಿಸಿಸಿ ಅಧ್ಯಕ್ಷಸ್ಥಾನದ ನೆಪದಲ್ಲಿ ಮೂಲ ಹಾಗೂ ವಲಸೆ ಕಾಂಗ್ರೆಸ್ಸಿಗರ ಮಧ್ಯದ ಅಂತರ ಮತ್ತಷ್ಟು ಹೆಚ್ಚಾಗಿದೆ. ಪಕ್ಷದಲ್ಲಿನ ಹಿಡಿತ ಹೆಚ್ಚಿಸಿಕೊಳ್ಳಲು ವಿಪಕ್ಷ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕಸ್ಥಾನಗಳನ್ನು ಪ್ರತ್ಯೇಕ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಜೊತೆಗೆ 4 ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಇದಕ್ಕೆ ತದ್ವಿರುದ್ದವಾಗಿ ಮೂಲ ಕಾಂಗ್ರೆಸ್ ನಾಯಕರು ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನಗಳನ್ನು ಮಹಾರಾಷ್ಟ್ರ ಕಾಂಗ್ರೆಸ್ ಮಾದರಿಯಲ್ಲಿ ಪ್ರತ್ಯೇಕಿಸಬೇಕು. ಹೆಚ್ಚಿನ ಕಾರ್ಯಾಧ್ಯಕ್ಷ ಹುದ್ದೆಗಳ ರಚನೆ ಬೇಡ, ಈಗಿರುವ ಒಬ್ಬರೇ ಕಾರ್ಯಾಧ್ಯಕ್ಷರನ್ನು ಮುಂದುವರೆಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಒಟ್ಟಾರೆ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜ್ಯರಾಜಕಾರಣಕ್ಕೆ ಕರೆತರುವ ಮೂಲಕ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಅಹಿಂದ ನಾಯಕರ ಪ್ರತಿಷ್ಠಾಪನೆ ಮಾಡಲು ಮುಂದಾಗಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ನಿರಾಸೆಯಾಗಿದೆ.