ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಖರ್ಗೆ ಹೆಸರು ಚಾಲ್ತಿಯಲ್ಲಿ: ಸಿದ್ದರಾಮಯ್ಯ ಹೀಗ್ಯಾಕೆ ಟ್ವೀಟ್ ಮಾಡಿದ್ರು?
ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರು ಆ ಸ್ಥಾನವನ್ನು ತ್ಯಜಿಸುವುದು ಬಹುತೇಕ ಖಚಿತವಾಗಿದೆ. ನಾಳೆ (ಆ 24) ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಬಹುದು.
Recommended Video
ಮುಖಂಡರು ಮತ್ತು ಕಾರ್ಯಕರ್ತರು ಕಾತುರದಿಂದ ಕಾಯುತ್ತಿರುವ ಈ ಹುದ್ದೆಗೆ ಮತ್ತೆ ನೆಹರೂ/ಗಾಂಧಿ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಜೋತು ಬೀಳಲಿದೆಯೇ ಅಥವಾ ಈ ಕುಟುಂಬದಿಂದ ಹೊರತಾಗಿ ಬೇರೆಯವರು ಆಗಲಿದ್ದಾರೆಯೇ ಎನ್ನುವುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.
ಮಲ್ಲಿಕಾರ್ಜುನ ಖರ್ಗೆರಿಗೆ ಒಳಿಯುತ್ತಾ ಎಐಸಿಸಿ ಅಧ್ಯಕ್ಷೀಯ ಪಟ್ಟ?
ಎಐಸಿಸಿ ಅಧ್ಯಕ್ಷ ಹುದ್ದೆಗೆ ನೆಹರೂ ಕುಟುಂಬದಿಂದ ಹೊರತಾಗಿ ಇಬ್ಬರ ಹೆಸರು ಕೇಳಿಬರುತ್ತಿದೆ. ಅದರಲ್ಲಿ, ಒಂದು ರಾಜ್ಯಸಭಾ ಸದಸ್ಯ, ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಹೆಸರು. ಈ ವಿಚಾರದಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಆಶ್ಚರ್ಯ ಮತ್ತು ಕುತೂಹಲವನ್ನು ಮೂಡಿಸಿದೆ.
ಖರ್ಗೆಯವರು ಪಕ್ಷದ ಹಿರಿಯ ಮುಖಂಡರು, ಅನುಭವಿಗಳು ಎನ್ನುವುದಕ್ಕಿಂತಲೂ ಹೆಚ್ಚಾಗಿ ತೂಕಕ್ಕೆ ಬರುವುದು ಅವರ ಪಕ್ಷ ಮತ್ತು ಕುಟುಂಬ ನಿಷ್ಠೆ. ಆದರೆ ಅದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎನ್ನುವುದಕ್ಕೆ ಹೆಚ್ಚಿನ ಕಾಯುವಿಕೆಯ ಅಗತ್ಯವಿಲ್ಲ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಟಾಪ್ ಮೋಸ್ಟ್ ಹುದ್ದೆಯಾಗಿರುವ ಅಧ್ಯಕ್ಷ ಗಾದಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಅತ್ಯಂತ ಸ್ಪಷ್ಟವಾಗಿ ಸಾರಿದ್ದಾರೆ. ನಾಯಕತ್ವ ಬದಲಾವಣೆಗೆ ಪಕ್ಷದ ಒಂದು ವರ್ಗ ನಿರಂತರವಾಗಿ ಒತ್ತಡ ಹೇರುತ್ತಿರುವುದು ಇದಕ್ಕೆ ಒಂದು ಕಾರಣವಿದ್ದರೂ ಇರಬಹುದು.
ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್
ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಎಐಸಿಸಿ ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿರುವ ಇನ್ನೊಂದು ಹೆಸರು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಅವರದ್ದು. ಹಿರಿತನ ಮತ್ತು ಇತ್ತೀಚಿನ ರಾಜಸ್ಥಾನ ಬಿಕ್ಕಟ್ಟನ್ನು ಮೆಟ್ಟಿ, ಸರಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಗೆಹ್ಲೋಟ್ ಗೆ ಉತ್ತರ ಭಾರತದ ಮುಖಂಡರ ಬೆಂಬಲವಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಸಿನ ಮುಖಂಡರು ಖರ್ಗೆಯವರ ಪರವಾಗಿ ನಿಲ್ಲಬೇಕಾಗಿತ್ತು
ಕರ್ನಾಟಕದವರೊಬ್ಬರು, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಚಾಲ್ತಿಯಲ್ಲಿದೆ. ಕುಟುಂಬ ರಾಜಕಾರಣಕ್ಕೆ ಜೋತು ಬೀಳದೇ, ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡುವುದು ಹೌದು ಎನ್ನುವುದಾದರೆ, ರಾಜ್ಯ ಕಾಂಗ್ರೆಸ್ಸಿನ ಮುಖಂಡರು ಖರ್ಗೆಯವರ ಪರವಾಗಿ ನಿಲ್ಲಬೇಕಾಗಿತ್ತು. ಆದರೆ, ಸಿದ್ದರಾಮಯ್ಯನವರ ಟ್ವೀಟ್ ಆಶ್ಚರ್ಯವನ್ನು ಮೂಡಿಸಿದೆ.
ರಾಹುಲ್ ಗಾಂಧಿ ಅವರ ನಾಯಕತ್ವ
ದೇಶದ ಹಿತದೃಷ್ಟಿಯಿಂದ @RahulGandhi ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ.
ಸಿದ್ದರಾಮಯ್ಯ ಹೀಗ್ಯಾಕೆ ಟ್ವೀಟ್ ಮಾಡಿದ್ರು?
ಶ್ರೀಮತಿ ಸೋನಿಯಾಗಾಂಧಿ ಮತ್ತು ಹಿರಿಯ ನಾಯಕರ ಅನುಭವಪೂರ್ಣ ಮಾರ್ಗದರ್ಶನದಲ್ಲಿ @RahulGandhi ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಆಶಯವೂ ಹೌದು.