ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸದಂತೆ ಮಲ್ಲಿಕಾರ್ಜುನ ಖರ್ಗೆರಿಗೆ ಜೀವ ಬೆದರಿಕೆ ಕರೆ!
ಬೆಂಗಳೂರು, ಜೂ. 09: ಮಾಜಿ ಸಂಸದೀಯ ನಾಯಕ, ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಜೀವ ಬೆದರಿಕೆ ಕರೆ ಬಂದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ರಾಜ್ಯ ಪೊಲೀಸ್ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಖರ್ಗೆ ಪುತ್ರ ಮಾಜಿ ಸಚಿವ ಪ್ರಿಮಾಂಕ್ ಖರ್ಗೆ ದೂರು ಕೊಟ್ಟಿದ್ದಾರೆ.
Recommended Video
ನಿನ್ನೆಯಷ್ಟೇ(ಜೂ.8) ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆಯದೇ ಅಭ್ಯರ್ಥಿ ಆಯ್ಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಘೊಷಣೆ ಮಾಡಿತ್ತು. ಆದರೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ರಾಜ್ಯ ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದರು. ಎಲ್ಲರೂ ಒಟ್ಟಾಗಿಯೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸುವ ಹಿಂದಿನ ದಿನ (ಜೂ.07) ರಾತ್ರಿ ಬೆದರಿಕೆ ಕರೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಹಿರಿಯ ನಾಯಕರಿಗೆ ಬಂದಿದ್ದ ಬೆದರಿಕೆ ಕರೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಲ್ಯಾಂಡ್ಲೈನ್ಗೆ ಕರೆ
ಚುನಾವಣೆ ಅಂದರೆ ಜಿದ್ದಾಜಿದ್ದಿ ಇದ್ದೆ ಇರುತ್ತದೆ. ಆದರೆ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಯಕರಿಗೆ ಬೆದರಿಕೆ ಕರೆ ಬಂದಿರುವುದು ನಿಜಕ್ಕೂ ಆತಂಕ ತಂದಿದೆ. ಜೂನ್ 7 ರಂದು ಮಧ್ಯರಾತ್ರಿ 01.30ರ ಸುಮಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದ ಸ್ಥಿರ ದೂರವಾಣಿಗೆ ಕರೆ ಬಂದಿದೆ. ಅದನ್ನು ಖರ್ಗೆ ಅವರೆ ಸ್ವೀಕರಿಸಿದ್ದಾರೆ.
ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲು ಒತ್ತಡವಿತ್ತು: ಡಿ.ಕೆ. ಶಿವಕುಮಾರ್
ಕರೆ ಸ್ವೀಕರಿಸಿದ ತಕ್ಷಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂಗ್ಲೀಷ್ ಮಿಶ್ರಿತ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾನೆ. ಜೊತೆಗೆ ರಾಜ್ಯಸಭಾ ಚುನಾವಣೆ ಬಗ್ಗೆಯೂ ಆಗುಂತಕ ಮಾತನಾಡಿದ್ದಾನೆ.
ಚುನಾವಣೆ ಪ್ರಸ್ತಾಪ
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಾಗಿದೆ. ಇದೇ ಸಂದರ್ಭದಲ್ಲಿ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ಇದೇ ವಿಚಾರವನ್ನು ಪ್ರಸ್ತಾಪ ಮಾಡಿರುವ ಬಗ್ಗೆ ದೂರಿನಲ್ಲಿ ದಾಖಲಿಸಲಾಗಿದೆ.
ರಾಜ್ಯಸಭಾ ಚುನಾವಣೆ ಬಗ್ಗೆಯೂ ಆಗುಂತಕ ಮಾತನಾಡಿದ್ದಾನೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ವಿಚಾರ ಪ್ರಸ್ತಾಪಿಸಿದ್ದಾನೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರಿಯಾಂಕ್ ಖರ್ಗೆ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಿಯಾಂಕ್ ಖರ್ಗೆಗು ಬೆದರಿಕೆ
ಮಾಜಿ ಸಚಿವ, ಶಾಸಕ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೂ ಅದೇ ದಿನ ಬೆದರಿಕೆ ಕರೆ ಬಂದಿದೆ. ಜೂನ್ 7 ರಂದು ಮಧ್ಯರಾತ್ರಿ 12.36 ರಿಂದ 12.53ರ ವರೆಗೆ ಅಪರಚಿತ ಮೊಬೈಲ್ ಸಂಖ್ಯೆಯಿಂದ ನನ್ನ ದೂರವಾಣಿ ಸಂಖ್ಯೆಗೆ ಸುಮಾರು 10ಕ್ಕೂ ಹೆಚ್ಚುಬಾರಿ ಕರೆ ಬಂದಿದೆ. ನಾನು ಕರೆ ಸ್ವೀಕರಿಸಿರುವುದಿಲ್ಲ.
ರಾಜ್ಯಸಭೆ ಅಭ್ಯರ್ಥಿ ಖರ್ಗೆಗಿಂತ ಅವರ ಪತ್ನಿಯೇ ಸಿರಿವಂತೆ
ನಂತರ ಸುಮಾರು 1 ಗಂಟೆಗೆ ನನ್ನ ಅದೇ ಮೊಬೈಲ್ ಸಂಖ್ಯೆಗೆ ಖಾಸಗಿ (Private Number) ಸಂಖ್ಯೆಯಿಂದ ಕರೆ ಬಂದಿದ್ದು, ನಾನು ಕರೆ ಸ್ವೀಕರಿಸಿದಾಗ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದ್ದಾನೆಂದು ಪ್ರಿಯಾಂಕ್ ಖರ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಿಯಾಂಕ್ ಖರ್ಗೆಗೂ ಜೀವ ಬೆದರಿಕೆ
ಪ್ರೈವೆಟ್ ನಂಬರಿನಿಂದ ಬಂದಿದ್ದ ಕರೆಯಲ್ಲಿ ವ್ಯಕ್ತಿಯೊಬ್ಬರು ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ಮಾತನಾಡುತ್ತ, ನನ್ನೊಂದಿಗೂ ಕೂಡ ನನ್ನ ತಂದೆಯರೊಂದಿಗೆ ಮಾತನಾಡಿದ ರೀತಿಯಲ್ಲಿಯೇ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನನಗೂ ಜೀವ ಬೆದರಿಕೆಯನ್ನು ಹಾಕಿರುತ್ತಾನೆ. ಕರೆ ಮಾಡಿರುವ ಮೊಬೈಲ್ ಸಂಖ್ಯೆಯ ಸ್ಕ್ರೀನ್ ಶಾಟ್ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.
ಆದುದರಿಂದ ಈ ಎರಡು ಬೆದರಿಕೆ ಕರೆ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.