ಕುತೂಹಲಕ್ಕೆ ಕಾರಣವಾದ ಮಲ್ಲಿಕಾರ್ಜುನ ಖರ್ಗೆ ದೆಹಲಿ ಭೇಟಿ
ಬೆಂಗಳೂರು, ಜೂನ್ 12 : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದಾರೆ. ಎಐಸಿಸಿ ಕರೆ ಹಿನ್ನಲೆಯಲ್ಲಿ ಅವರು ತೆರಳಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭಾ ಕಾಂಗ್ರೆಸ್ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೆಹಲಿಗೆ ಬರುವಂತೆ ಎಐಸಿಸಿ ಕರೆ ಮಾಡಿತ್ತು. ಬುಧವಾರ ಅವರು ದೆಹಲಿಯಲ್ಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಖರ್ಗೆ ಅವರ ಜೊತೆ ಸಭೆ ನಡೆಸಲಿದ್ದಾರೆ.
ಕಾಂಗ್ರೆಸ್ ನಾಯಕತ್ವದ ಹೊಣೆ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ?
ಸೋಮವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಈ ಭೇಟಿಯ ಬಳಿಕ ಖರ್ಗೆ ಅವರನ್ನು ಎಐಸಿಸಿ ದೆಹಲಿಗೆ ಆಹ್ವಾನಿಸಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಖರ್ಗೆ ಆಶೀರ್ವಾದ ಪಡೆದು ರಾಜಕಾರಣ ಚರ್ಚಿಸಿದ ನಿಖಿಲ್ ಕುಮಾರಸ್ವಾಮಿ
2019ರ ಲೋಕಸಭಾ ಚುನಾವಣೆಯಲ್ಲಿ ಗುಲ್ಬರ್ಗ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯ ಡಾ.ಉಮೇಶ್ ಜಾಧವ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಖರ್ಗೆ ಅವರು ರಾಹುಲ್ ಗಾಂಧಿ ಭೇಟಿಯಾಗುತ್ತಿದ್ದು, ಯಾವ ವಿಚಾರ ಚರ್ಚೆಯಾಗಲಿದೆ? ಎಂದು ಕಾದು ನೋಡಬೇಕು.
ಮುಂದಿನ ಬಾರಿ ಖರ್ಗೆ ಸಂಸತ್ತಿಗೆ ಬರಲ್ಲ ಅಂತ ಮೋದಿ ಹೇಳಿದ್ದರು!
ಕಾರ್ಯಾಧ್ಯಕ್ಷರ ನೇಮಕ
ಲೋಕಸಭಾ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಸಂಘಟನೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ರಾಷ್ಟ್ರಮಟ್ಟದಲ್ಲಿ 3 ಅಥವ 4 ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಚಿಂತನೆ ನಡೆದಿದೆ. ಈ ಕುರಿತು ಚರ್ಚಿಸಲು ಖರ್ಗೆ ಅವರನ್ನು ಆಹ್ವಾನಿಸಿರುವ ಸಾಧ್ಯತೆ ಇದೆ.
ಪಕ್ಷದಲ್ಲಿ ಹೊಣೆಗಾರಿಗೆ
ಲೋಕಸಭಾ ಚುನಾವಣೆಯಲ್ಲಿ ಸೋತರೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಜವಾಬ್ದಾರಿ ನೀಡಲು ಕಾಂಗ್ರೆಸ್ ಮುಂದಾಗಿದೆ. ಅದಕ್ಕಾಗಿ ರಾಹುಲ್ ಗಾಂಧಿ ಅವರು ಖರ್ಗೆ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ
ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಕರ್ನಾಟಕದ ರಾಜಕೀಯದ ಕುರಿತು ರಾಹುಲ್ ಗಾಂಧಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಎಚ್.ಡಿ.ದೇವೇಗೌಡರು ಸೋಮವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯದ ಕುರಿತು ಮಾಹಿತಿ ನೀಡಿದ್ದರು. ಈ ಬಗ್ಗೆ ಖರ್ಗೆ ಅವರ ಜೊತೆ ರಾಹುಲ್ ಚರ್ಚಿಸುವ ಸಾಧ್ಯತೆ ಇದೆ.
ಬೇರೆ ರಾಜ್ಯಗಳ ಉಸ್ತುವಾರಿ
ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ. ಈಗಾಗಲೇ ಅವರು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿದ್ದಾರೆ. ಬೇರೆ ರಾಜ್ಯದ ಉಸ್ತುವಾರಿ ನೀಡುವ ಬಗ್ಗೆಯೂ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ.