'ಇಡೀ ರಾಷ್ಟ್ರವನ್ನು ತಲ್ಲಣಗೊಳಿಸುವ ಸುಪ್ರೀಂಕೋರ್ಟ್ ತೀರ್ಪು'
ಬೆಂಗಳೂರು, ಫೆ. 10: ಇಡೀ ರಾಷ್ಟ್ರದಲ್ಲಿ ತಲ್ಲಣಗೊಳಿಸುವ ತೀರ್ಪು ಸುಪ್ರೀಂಕೋರ್ಟ್ನಿಂದ ಬಂದಿದೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಬಡ್ತಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠದ ಕೊಟ್ಟಿರುವ ತೀರ್ಪು ವಿಚಾರಕ್ಕೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಟ್ಟಿರುವ ತೀರ್ಪನ್ನು ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ಲೇಷಣೆ ಮಾಡಿದ್ದಾರೆ.
ಈ ರೀತಿಯ ತೀರ್ಪಗಳು ಬರಲು ಏನೂ ಕಾರಣ? ಸಧ್ಯಕ್ಕೆ ಕೇಂದ್ರ ಸರ್ಕಾರ ಏನೂ ಮಾಡಬೇಕು ಎಂಬುದನ್ನು ಕೂಡ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಸ್ವಾತಂತ್ರ್ಯಾನಂತರದ 70 ವರ್ಷಗಳ ಬಳಿಕ ಮೀಸಲಾತಿ ಕುರಿತು ಏನೆಲ್ಲ ಚರ್ಚೆಗಳು, ಪ್ರಯತ್ನಗಳು ಆಗುತ್ತಿವೆ ಎಂಬುದನ್ನೂ ವಿವರಿಸಿದ್ದಾರೆ. ಸಂವಿಧಾನದ 16ನೇ ವಿಧಿಯನ್ನು ಉಲ್ಲೇಖಿಸಿ ಖರ್ಗೆ ಅವರು ತೀರ್ಪು ವಿಶ್ಲೇಷಣೆ ಮಾಡಿದ್ದಾರೆ.
ಪರಿಶಿಷ್ಟರಿಗೆ ಮೀಸಲಾತಿ ಮೂಲಭೂತ ಹಕ್ಕೇ ಅಲ್ಲವಾ?
ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ಮೂಲಭೂತ ಹಕ್ಕೇ ಇಲ್ಲ ಅಂದ್ರೆ ಹೇಗೆ? ನಿಮಗೆ ಮೀಸಲಾತಿ ಮೂಲಭೂತ ಹಕ್ಕೇ ಅಲ್ಲ ಅಂದರೆ ಪರಿಶಿಷ್ಟ ಜಾತಿಯವರು ಎಲ್ಲಿಗೆ ಹೋಗಬೇಕು? ಎಂದು ಕಾಂಗ್ರೆಸ್ ಮಾಜಿ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕಳೆದ 70 ವರ್ಷಗಳಿಂದ ನಡೆದು ಬಂದಿದ್ದಕ್ಕೆ ಈಗ ಕೊಡಲಿ ಪೆಟ್ಟು ಕೊಡುವುದು ಸರಿಯಲ್ಲ. ಸುಪ್ರೀಂಕೋರ್ಟ್ನ ಈ ತೀರ್ಪು ಆಘಾತ ತಂದಿದೆ. ಮೀಸಲಾತಿ ಕೊಡುವ ವಿಚಾರ ರಾಜ್ಯಗಳಿಗೆ ಬಿಟ್ಟ ವಿಚಾರ. ಆದರೆ ಮೀಸಲಾತಿ ಮೂಲಭೂತ ಹಕ್ಕಲ್ಲ ಎನ್ನುವ ತೀರ್ಪನ್ನು ನಾನು ವೈಯಕ್ತಿಕವಾಗಿ ಖಂಡಿಸುತ್ತೇನೆ. ಈ ತೀರ್ಪಿನ ಹಿನ್ನೆಲೆಯಲ್ಲಿ ದೇಶದಲ್ಲಿ ತಪ್ಪು ದಾರಿಗೆ ಕೆಲವರು ಇಳಿಯುವ ಆತಂಕವಿದೆ ಎಂದಿದ್ದಾರೆ.
ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟುಗಳಿಗೆ ಸಂವಿಧಾನದ 16 ನೇ ಪರಿಚ್ಚೇದದ ಪ್ರಕಾರ ಮೀಸಲಾತಿ ಕೊಡುವ ವಿವೇಚನೆ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರವಾಗಿದೆ. ಆದರೆ ಪರಿಶಿಷ್ಟ ಜಾತಿ, ಬುಡಕಟ್ಟುಗಳ ಹಿತ ಕಾಪಾಡಲು ಅದೇ ಪರಿಚ್ಚೇದದ ಕಲಂ 16(4), 16(4)ಬಿ ಅವಕಾಶವಿದೆ. ಆದರೂ ಇಡೀ ರಾಷ್ಟ್ರದಲ್ಲಿ ತಲ್ಲಣಗೊಳಿಸುವ ತೀರ್ಪು ಸುಪ್ರೀಂಕೋರ್ಟ್ ನಿಂದ ಬಂದಿದೆ ಎಂದು ಖರ್ಗೆ ಹೇಳಿದ್ದಾರೆ.
ಇಂಥ ತೀರ್ಪುಗಳು ಯಾಕೆ ಬರಲು ಸರ್ಕಾರಗಳ ಕುಮ್ಮಕ್ಕು ಕಾರಣ
ಇಂಥ ತೀರ್ಪುಗಳು ಯಾಕೆ ಬರಲು ಸರ್ಕಾರಗಳ ಕುಮ್ಮಕ್ಕು ಕಾರಣ ಎಂದು ಮಲ್ಲಿಕಾರ್ಜು ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ. ಸಧ್ಯ ಮೀಸಲಾತಿ ವಿರೋಧಿ ತೀರ್ಪು ಬರಲು ಉತ್ತರಾಖಂಡ ರಾಜ್ಯ ಸರ್ಕಾರವೇ ಕಾರಣ. ಈಗ ಈಗ ಉತ್ತರಪ್ರದೇಶ ಸರ್ಕಾರ ಕೂಡಾ ಇದನ್ನು ಹಿಂಬಾಲಿಸುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ಕೊಟ್ಟಿರುವ ಈ ತೀರ್ಪು ಸರಿಯಿಲ್ಲ. ಇದರಲ್ಲಿ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶ ಮಾಡುವ ಅಗತ್ಯ ಇದೆ. ತೀರ್ಪು ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯಿಂದ ಪರಿಶಿಷ್ಟರ ಹಕ್ಕು ಮೊಟಕುಗೊಳಿಸುವ ಪ್ರಯತ್ನ!
ಮೀಸಲಾತಿ ರದ್ದು, ಸಂವಿಧಾನ ಬದಲು ಮಾಡುವ ಪ್ರಯತ್ನಕ್ಕೆ ಬಿಜೆಪಿ ಮೊದಲಿಂದಲೂ ಕೈ ಹಾಕಿ, ಪ್ರಯತ್ನಗಳನ್ನು ಮಾಡುತ್ತಿದೆ. ಪರಿಶಿಷ್ಟರ ಹಕ್ಕುಗಳನ್ನು ಮೊಟಕು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರಗಳು ಇರುವಲ್ಲಿ ಅಂತಹ ಪ್ರಯತ್ನಗಳು ನಡೆಯುತ್ತಿವೆ. ಮೀಸಲಾತಿ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಎಲ್ಲೆಲ್ಲಿ ಬಿಜೆಪಿ ಸರ್ಕಾರಳು ಇವೆಯೊ ಅಲ್ಲಿ ದಲಿತರ ಮೇಲೆ ಶೋಷಣೆ ಹೆಚ್ಚಳವಾಗಿವೆ.
ದಲಿತರ ಮೇಲಿನ ಶೋಷಣೆ, ದೌರ್ಜನ್ಯ ಪ್ರಮಾಣ ಶೇಕಡಾ 6 ರಷ್ಟು ಹೆಚ್ಚಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಕೊಟ್ಟಿರುವ ತೀರ್ಪು ಏನು?
ರಾಜ್ಯ ಸರ್ಕಾರಗಳು ಕೂಡ ಕಡ್ಡಾಯವಾಗಿ ಮೀಸಲಾತಿ ಕೊಡಬೇಕು ಎಂದೇನೂ ಇಲ್ಲ. ಮೀಸಲು ಕೊಡಬೇಕೇ, ಬೇಡವೇ ಎಂಬ ವಿಚಾರ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ ಮೀಸಲು ನೀಡಿಕೆ ಸಂದರ್ಭದಲ್ಲಿ ಸರ್ಕಾರಿ ನೌಕರಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೂಕ್ತ ಪ್ರಾತಿನಿಧ್ಯ ಇದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರಗಳು ಅಂಕಿ ಅಂಶ ಸಂಗ್ರಹಿಸಬೇಕು. ಮೀಸಲಾತಿ ಕೊಡುವುದು ಅಗತ್ಯವಿಲ್ಲ ಎಂದು ಕಂಡುಬಂದಲ್ಲಿ ಮೀಸಲಾತಿ ಕೊಡಬೇಕಿಲ್ಲ ಎಂದು ನ್ಯಾ. ಎಲ್. ನಾಗೇಶ್ವರರಾವ್ ಹಾಗೂ ನ್ಯಾ. ಹೇಮಂತ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ಕೊಟ್ಟಿದೆ.
ಉತ್ತರಾಖಂಡ್ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಸಿಸ್ಟಂಟ್ ಸಿವಿಲ್ ಎಂಜನಿಯರ್ ಹುದ್ದೆಗೆ ಬಡ್ತಿ ಮೀಸಲು ಕೊಡುವ ವಿಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಈ ತೀರ್ಪು ಕೊಟ್ಟಿದೆ. ಉತ್ತರಾಖಂಡ್ ಸರ್ಕಾರ ಬಡ್ತಿ ಮೀಸಲು ಕೊಡಲು ನಿರಾಕರಿಸಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದಾಗ ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಪ್ರಾತಿನಿದ್ಯ ಕುರಿತು ಮಾಹಿತಿ ಸಂಗ್ರಹಿಸಿ ಬಳಿಕ ತೀರ್ಮಾನ ಕೈಗೊಳ್ಳುವಂತೆ ಉತ್ತರಾಖಂಡ್ ಸರ್ಕಾರಕ್ಕೆ ಆದೇಶ ಕೊಟ್ಟಿತ್ತು.