ಮಲ್ಲೇಶ್ವರ 13ನೇ ಅಡ್ಡರಸ್ತೆಗೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಹೆಸರು
Recommended Video
ಬೆಂಗಳೂರು, ಆಗಸ್ಟ್ 10: ಮಲ್ಲೇಶ್ವರದಲ್ಲಿ ವೀಣಾ ಮಾಂತ್ರಿಕನ ಕೀರ್ತಿ ಪತಾಕೆ ಹಾರುತ್ತಿದೆ, ಮಲ್ಲೇಶ್ವರದ 13ನೇ ಅಡ್ಡರಸ್ತೆಗೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಎಂದು ನಾಮಕರಣ ಮಾಡಲಾಗಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಮಲ್ಲೇಶ್ವರ ಶಾಸಕ ಸಿ.ಎನ್ ಅಶ್ವತ್ಥನಾರಾಯಣ ಅವರು, ಭಾರತೀಯ ಶಿಕ್ಷಣದ ಪದ್ಧತಿಯಲ್ಲಿ ಸಂಗೀತವು ಪಠ್ಯೇತರ ಚಟುವಟಿಕೆಯ ಭಾಗವಾಗಿದ್ದು, ರಾಜ್ಯ ಸರ್ಕಾರ ಸಂಗೀತವನ್ನು ಪಠ್ಯವಾಗಿ ಪರಿಗಣಿಸುವ ಅಗತ್ಯವಿದೆ ಎಂದರು.
ಹೊಸ ಶಿಕ್ಷಣ ಪದ್ಧತಿ ಜಾರಿಗೆ ಬಂದ ಮೇಲೆ ವ್ಯಕ್ತಿಯ ಅಂಕಪಟ್ಟಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ. ಆದರೆ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಸಂಗೀತ, ಸಾಹಿತ್ಯ, ಅಭಿನಯ, ಕ್ರೀಡೆಯಂತಹ ಸೃಜನಾತ್ಮಕ ಲಲಿತ ಕಲೆಗಳಿಗೆ ತಿಲಾಂಜಲಿ ಇಟ್ಟಿದ್ದೇವೆ. ಆದರೆ ಈ ದಿಸೆಯಲ್ಲಿ ಪಾಲಕರು, ಶಾಲೆಗಳು ಒಟ್ಟಾರೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಲ್ಲೇಶ್ವರ 13 ನೇ ಅಡ್ಡರಸ್ತೆಗೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಹೆಸರು
ಲಲಿತಕಲೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗಗಳು. ನಮ್ಮ ಬದುಕಿಗೆ ನಿಜವಾದ ಅರ್ಥಗಳು ಬರುವುದೇ ಇಂತಹ ಕಲೆಗಳಲ್ಲಿ ನಾವು ಆಸಕ್ತಿ ಹೊಂದುವುದರಿಂದ. ಹೀಗಾಗಿ ಸಾರ್ವಜನಿಕ ಬದುಕಿನಲ್ಲಿ ಖ್ಯಾತ ವೀಣಾವಾದಕ, ಅಭಿಜಾತ ಕಲಾವಿದ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಹೆಸರು ಉಳಿಯುವಂತಾಗಲು ಅವರ ಹೆಸರು ನಾಮಕರಣ ಮಾಡಲಾಗಿದೆ ಎಂದರು.
ಕವಿ ಪು.ತಿ ನರಸಿಂಹಾಚಾರ್ ಅವರ ಆತ್ಮೀಯರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ ಅವರು ಕರ್ನಾಟಕ ಸರ್ಕಾರವು ಪು. ತಿ. ನ ಅವರ ಹೆಸರಿನಲ್ಲಿ ಸ್ಥಾಪಿಸಿದ್ದ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯುತ್ತಮ ಬರಹಗಾರರೂ ಆಗಿದ್ದು 'ವೀಣೆಯ ನೆರಳಿನಲ್ಲಿ' ಎಂಬುದು ಅವರ ಪ್ರಸಿದ್ಧ ಕೃತಿಯಾಗಿದೆ.
ದೊರೆಸ್ವಾಮಿ ಅಯ್ಯಂಗಾರರ ಲಲಿತ ಬರಹಗಳು ನಾಡಿನಾದ್ಯಂತ ಮೆಚ್ಚುಗೆ ಗಳಿಸಿದ್ದವು. ಅಂದಿನ ತಲೆಮಾರಿನ ಸಂಗೀತಜ್ಞರ ಕುರಿತು ಅವರಲ್ಲಿ ಜ್ಞಾನ ಭಂಡಾರವೇ ತುಂಬಿತ್ತು. ಅವರು 1992ರ ಅಕ್ಟೋಬರ್ನಲ್ಲಿ ನಿಧನರಾದರು.
ವೀಣೆ ದೊರೆಸ್ವಾಮಿ ಅಯ್ಯಂಗಾರ್ ಕಿರು ಪರಿಚಯ
ಹೆಸರೇ ಸೂಚಿಸುವಂತೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ವೀಣೆಯಲ್ಲಿ ಪ್ರವೀಣರು, ಅದರಲ್ಲೇ ಪಾಂಡಿತ್ಯ ಹೊಂದಿ ಪದ್ಮವಿಭೂಷಣ ಪ್ರಶಸ್ತಿಯನ್ನೂ ಪಡೆದವರು.ದೊರೆಸ್ವಾಮಿ ಅಯ್ಯಂಗಾರರು ವೀಣೆ ಮತ್ತು ಕೊಳಲುಗಳೆರಡರಲ್ಲೂ ಪರಿಣತಿ ಹೊಂದಿದ್ದು, ರಾಜ ಕುಟುಂಬದವರಿಗೆ ವೀಣೆ ಮತ್ತು ಕೊಳಲುವಾದನದ ಪಾಠ ಹೇಳುತ್ತಿದ್ದರು.ಇವರಿಗೆ ಮೈಸೂರು ವಿಶ್ವವಿದ್ಯಾಲಯವು 1975ರಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು. ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸಹಾ ದೊರೆಸ್ವಾಮಿ ಅಯ್ಯಂಗಾರ್ ಅವರು ಕಾರ್ಯ ನಿರ್ವಹಿಸಿದ್ದರು. 1984ರಲ್ಲಿ ಅಖಿಲ ಭಾರತ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಸಂಗೀತ ಕೇಂದ್ರಗಳ ಸ್ಥಾಪನೆ
ಇಂದಿನ ದಿನಗಳಲ್ಲಿ ಸಂಗೀತಾಸಕ್ತರು ಅಥವಾ ನೃತ್ಯಾಸಕ್ತರು ಹೆಚ್ಚಾಗುತ್ತಿದ್ದಾರೆ ಆದರೆ ಕಲೆ ತರಬೇತಿ ನೀಡುವ ಕೇಂದ್ರಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಮಲ್ಲೇಶ್ವರದಲ್ಲಿ ಕಲೆಯನ್ನು ಮುಂದಿನ ಮಲ್ಲೇಶ್ವರದಲ್ಲಿ ಸಂಗೀತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಸಂಗೀತವನ್ನು ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ
ಸಂಗೀತ, ಭರತನಾಟ್ಯ ಹೀಗೆ ವಿವಿಧ ಕಲೆಗಳು ಪಠ್ಯೇತರ ಚಟುವಟಿಕೆಗಳಾಗಿದೆ, ಹಾಗಾಗಿ ಶಾಲಾ ಪಠ್ಯದಲ್ಲಿ ಸಂಗೀತವನ್ನು ಅಳವಡಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ತಿಳಿಸಿದರು.
ಇತಿಹಾಸದ ಅರಿವು ವರ್ತಮಾನದಲ್ಲಿ ಆಗುವುದಿಲ್ಲ
ವರ್ತಮಾನದಲ್ಲಿ ಮಾಡಿದ ಕೆಲಸಗಳು ಭವಿಷ್ಯದಲ್ಲಿ ಅರಿವಾಗುತ್ತದೆ,ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ನಾವು ಸ್ಮರಿಸಿ ಅವರ ಹೆಸರಲ್ಲಿ ರಸ್ತೆ ನಾಮಕರಣ, ಹೆಸರಲ್ಲಿ ಟ್ರಸ್ಟ್ ಆರಂಭ ಇನ್ನಿತರೆ ಕೆಲಸಗಳನ್ನು ಮಾಡಿದರೆ ಅದು ಭವಿಷ್ಯದಲ್ಲಿ ಉತ್ತಮ ಫಲವನ್ನು ನೀಡುತ್ತದೆ. ಜತೆಗೆ ಮುಂದಿನ ಪೀಳಿಗೆಗೆ ಅಂಥವರ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ ಎಂದು ಮಲ್ಲೇಶ್ವರ ಯತಿರಾಜ ಮಠದ ನಾರಾಯಣ ಜೀಯರ್ ತಿಳಿಸಿದರು.
ವೀಣೆ ದೊರೆಸ್ವಾಮಿ ಅಯ್ಯಂಗಾರ್ ಪುತ್ರ ಬಾಲಕೃಷ್ಣ ಅಯ್ಯಂಗಾರ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.