ಮಂಗಳೂರಲ್ಲಿ ಸೂಲಿಬೆಲೆ, ಮೈಸೂರಲ್ಲಿ ಮಾಳವಿಕಾ! ಬಿಜೆಪಿ ಹೊಸ ತಂತ್ರ?
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಮತ್ತೋರ್ವ ಮುಖಂಡ ಎಚ್.ವಿ.ರಾಜೀವ್ ಅವರುಗಳು ಸಹ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳೇ ಎಂಬುದು ಸುಳ್ಳೇನಲ್ಲ. ಆದರೂ, ಮಾಳವಿಕ ಹೆಸರು ಪ್ರಸ್ತಾವನೆ ಕುತೂಹಲ ಮೂಡಿಸಿದೆ.
ಮೈಸೂರು, ಮೇ 4 : ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗಳು ಈಗಾಗಲೇ ತಯಾರಿ ಆರಂಭಿಸಿವೆ.
ರಾಜ್ಯದ ಕೆಲವು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಿಗೆ ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಯಾ ಪಕ್ಷಗಳು ನಿರತವಾಗಿದ್ದು, ಇದಕ್ಕಾಗಿ ಕಸರತ್ತು ನಡೆಸಿವೆ. ಬಿಜೆಪಿಯೂ ಇದರಿಂದ ಹೊರತಾಗಿಲ್ಲ.
ಅಂತೆಯೇ, ಮುಂಬರುವ ಚುನಾವಣೆಯಲ್ಲಿ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಳವಿಕ ಅವಿನಾಶ್ ಅವರನ್ನು ಕಣಕಿಳಿಸಲಾಗುತ್ತದೆ ಎಂಬ ವರದಿ ಕಳೆದ ಕೆಲ ದಿನಗಳಿಂದ ಪ್ರಸ್ತಾಪವಾಗುತ್ತಿದೆ. ಇದು ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ.
ಆದರೆ, ಈ ಕ್ಷೇತ್ರದ ಮಾಜಿ ಸಚಿವ ಎಸ್.ಎ.ರಾಮದಾಸ್ ಹಾಗೂ ಮತ್ತೋರ್ವ ಮುಖಂಡ ಎಚ್.ವಿ.ರಾಜೀವ್ ಅವರುಗಳು ಸಹ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳೇ ಎಂಬುದು ಸುಳ್ಳೇನಲ್ಲ. ಆದರೂ, ಇಲ್ಲಿ ನಟಿ ಮಾಳವಿಕ ಹೆಸರು ಪ್ರಸ್ತಾವನೆಯಾಗಿರುವುದು ಕುತೂಹಲ ಮೂಡಿಸಿದೆ.
ಉತ್ತರ ಭಾರತವೇ ಮಾದರಿ
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸಾಧ್ಯವಾದಷ್ಟುಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಗಂಭೀರ ಚಿಂತನೆ ನಡೆಯುತ್ತಿದೆ. ಇತ್ತೀಚಿನ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಅನುಸರಿಸಿದ ತಂತ್ರ ಅನುಷ್ಠಾನ ಗೊಳಿಸುವ ಬಗ್ಗೆ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಅದಕ್ಕಾಗಿ ಪ್ರಯತ್ನಗಳೂ ಆರಂಭವಾಗಿವೆ.
ಮಾಳವಿಕಾ ಜನಪ್ರಿಯತೆ ವರವಾಗುವ ಲೆಕ್ಕಾಚಾರ
ಕೃಷ್ಣರಾಜ ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರೂ ನಿರ್ಣಾಯಕರೇ ಹೆಚ್ಚು. ಇನ್ನು ರಾಮದಾಸ್ ಕೂಡ ಅದೇ ಸಮುದಾಯದವರು. ಈಗ ಅವರ ಬದಲು ಅದೇ ಸಮುದಾಯದ ಜನಪ್ರಿಯ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯರಿದ್ದಾರೆ. ಆ ಜನಪ್ರಿಯ ವ್ಯಕ್ತಿ ಮಾಳವಿಕ ಅವಿನಾಶ್ ಆಗಬಹುದು. ಈಗಾಗಲೇ ಪಕ್ಷದ ನಾಯಕರು ಈ ಬಗ್ಗೆ ಮಾಳವಿಕ ಅವರಿಗೆ ಸುಳಿವು ನೀಡಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.
ಆಪಾದನೆಯೂ ಕಾರಣವೇ?
ಮಾಳವಿಕಾ ಅವಿನಾಶ್ ಅವರಿಗೆ ಕೃಷ್ಣರಾಜ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂಬ ಪ್ರಯತ್ನದ ಹಿಂದೆ ಒಂದು ಲೆಕ್ಕಾಚಾರವೂ ಅಡಗಿದೆ. ಆ ಕ್ಷೇತ್ರದಲ್ಲಿ ಹಿಂದೆ ಮಾಜಿ ಸಚಿವ ಎಸ್.ಎ.ರಾಮದಾಸ್ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲನ್ನಪ್ಪಿದರು. ರಾಮದಾಸ್ ಅವರಿಗೆ ಅಂಟಿಕೊಂಡಿರುವ ಮಹಿಳೆಯೊಬ್ಬರ ಜತೆಗಿನ ಒಡನಾಟದ ಆಪಾದನೆ ಕಾರಣದಿಂದ ಮುಂದಿನ ಚುನಾವಣೆಯಲ್ಲೂ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಕಷ್ಟವಾಗಬಹುದು ಎಂಬ ಆತಂಕ ಪಕ್ಷದ ನಾಯಕರಲ್ಲಿದೆ. ಹೀಗಾಗಿ ಅವರ ಬದಲು ಬೇರೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಒಲವು ವ್ಯಕ್ತವಾಗಿದೆ.
ಉತ್ತರ ಕನ್ನಡದಿಂದ ಅಂಕಣಕಾರ ಸ್ಪರ್ಧೆ?
ಚಕ್ರವರ್ತಿ ಸೂಲಿಬೆಲೆ ಸಂಘ ಪರಿವಾರದ ಅಚ್ಚುಮೆಚ್ಚಿನ ವ್ಯಕ್ತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೂಲಿಬೆಲೆ ಅಚ್ಚರಿಯ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಆಗ ಚಕ್ರವರ್ತಿ ಅವರು ಅದನ್ನು ನಿರಾಕರಿಸಿದ್ದರು. ಇದೀಗ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಉತ್ತರ ಕನ್ನಡದ ಕರಾವಳಿ ಕ್ಷೇತ್ರವೊಂದರಿಂದ ಸ್ಪರ್ಧೆಗಿಳಿಸುವ ಪ್ರಯತ್ನಒಂದು ವಲಯದಿಂದ ನಡೆದಿದೆ.
ಬಿಜೆಪಿ ಕಾರ್ಯಕಾರಿಣಿಯಲ್ಲಿ ಸೂಕ್ತ ಉತ್ತರ
ಇಲ್ಲಿಯ ತನಕ ಕೆ.ಆರ್ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಎಸ್.ಎ ರಾಮದಾಸ್ ಮತ್ತು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷ ಎಚ್.ವಿ ರಾಜೀವ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿರುವುದರಿಂದ ಈ ಇಬ್ಬರನ್ನೂ ಬಿಟ್ಟು ಮತ್ತೊಬ್ಬರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿರುವುದೂ ಮಾಳವಿಕಾ ಅವಿನಾಶ್ ಅವರನ್ನು ಕಣಕ್ಕಿಳಿಸುವ ಮಾತು ಕೇಳಿಬರಲು ಮತ್ತೊಂದು ಕಾರಣ. ಇನ್ನು ಇದೇ ಮೇ 6 ಮತ್ತು 7 ರಂದು ಮೈಸೂರಿನಲ್ಲಿ ಬಿಜೆಪಿ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ.