ಯುವ ಕಾಂಗ್ರೆಸ್ ಬಲಗೊಳಿಸಲು ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್!
ಬೆಂಗಳೂರು, ಸೆ. 19: ಪ್ರಜಾಪ್ರಭುತ್ವ ನಮ್ಮ ದೇಶದ ಜೀವಾಳ. ಆದರೆ ಆಂತರಿಕ ಪ್ರಜಾಪ್ರಭುತ್ವ ರಾಷ್ಟ್ರೀಯ ಪಕ್ಷಗಳಲ್ಲಿ ಇರುವುದಿಲ್ಲ ಎಂಬ ಆರೋಪಗಳಿವೆ. ಈ ಆರೋಪಗಳಿಂದ ಹೊರಗೆ ಬರಲು ಇದೀದ ಯುವ ಕಾಂಗ್ರೆಸ್ ಘಟಕಕ್ಕೆ ಚುನಾವಣೆ ಮೂಲಕ ಪದಾಧಿಕಾರಿಗಳ ನೇಮಕಕ್ಕೆ ಎಐಸಿಸಿ ಮುಂದಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ.
'ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿ. ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನೀವು ನಾಯಕರಾಗಿ ಬೆಳೆಯಿರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯೂತ್ ಕಾಂಗ್ರೆಸ್ ಸದಸ್ಯರಿಗೆ ಸಂದೇಶ ರವಾನಿಸಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಸಂದೇಶ ರವಾನಿಸಿರುವ ಶಿವಕುಮಾರ್ ಅವರು ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯುವ ನಾಯಕರಿಗೆ ಅವಕಾಶ ಕೊಡಲು ಮುಂದಾಗಿದ್ದಾರೆ. ಆ ಬಗ್ಗೆ ಗಮನ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಡಿಕೆಶಿ ವಿಡಿಯೋ ಮನವಿ!
'ಯೂತ್ ಕಾಂಗ್ರೆಸ್ ನ ಎಲ್ಲ ಕಾರ್ಯಕರ್ತರಿಗೆ ನಮಸ್ಕಾರ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಈ ಪಕ್ಷದ ನೆರಳಿನಲ್ಲಿ ನಾವೆಲ್ಲ ಬೆಳೆಯುತ್ತಿದ್ದೇವೆ. ಇವತ್ತು ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ದೊಡ್ಡ ಯುವಕರ ಪಡೆಯನ್ನೇ ನಿರ್ಮಾಣ ಮಾಡಿದೆ.
ಕೊರೊನಾ ಸಂಕಷ್ಟದ ಮಧ್ಯೆ ಬಿಜೆಪಿಗೆ ಮತ್ತೊಂದು ಏಟು ಕೊಟ್ಟ ಡಿಕೆಶಿ!
ಇಂದು ನಾವು ನೀವೆಲ್ಲ ಸೇರಿ ಈ ದೇಶದಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ಈ ದೇಶಕ್ಕೆ ಶಕ್ತಿ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ನಾವೆಲ್ಲರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಹೊಸ ಚೈತನ್ಯ ತುಂಬುವುದು, ಯುವಕರನ್ನು ಸೇರಿಸುವುದು ನಮ್ಮ ನಿಮ್ಮ ಜವಾಬ್ದಾರಿಯಾಗಿದೆ.
ಯೂತ್ ಕಾಂಗ್ರೆಸ್ನಲ್ಲಿ ಚುನಾವಣೆ
ರಾಹುಲ್ ಗಾಂಧಿ ಅವರು ಯುವ ನಾಯಕತ್ವ ಬೆಳೆಸಬೇಕು ಎಂಬ ದೃಷ್ಟಿಯಿಂದ ಯೂತ್ ಕಾಂಗ್ರೆಸ್ನಲ್ಲಿ ಚುನಾವಣೆ ಪ್ರಾರಂಭಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಸಂಸತ್ತಿನವರೆಗೆ ಚುನಾವಣೆ ಮೂಲಕ ನಾಯಕರ ಆಯ್ಕೆ ಮಾಡಬೇಕಿರುವುದು ನಮ್ಮ ಕರ್ತವ್ಯ. ಈ ನಾಯಕರಾಗಿ ನೀವು ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಈ ದೃಷ್ಟಿಯಿಂದ ಯುವಕರಿಗೆ ಚುನಾವಣೆಯಿಂದ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಿದೆ.
ಹೀಗಾಗಿ ನೀವೆಲ್ಲರೂ ಅತಿ ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ. ನಮ್ಮ ನಾಯಕರಾಗಿ ಬೆಳೆಯಬೇಕು, ಈ ದೇಶಕ್ಕೆ ಆಸ್ತಿಯಾಗಬೇಕು. ನಾನು ಕೂಡ ಯುವ ಕಾಂಗ್ರೆಸ್, ತಾಲೂಕು ಮಟ್ಟದಿಂದ ಬೆಳೆದು, ಇಂದು ಕೆಪಿಸಿಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತೇದ್ದೇನೆ ಎಂದು ತಾವು ಬೆಳೆದು ಬಂದ ಹಾದಿಯನ್ನು ಯುವ ಕಾರ್ಯಕರ್ತರಿಗೆ ವಿವರಿಸಿದ್ದಾರೆ.
ಸದಸ್ಯತ್ವ ನೋಂದಣಿ ಮಾಡಿಸಿ
ನೀವೆಲ್ಲ ರಾಜ್ಯದ ಮುಂದಿನ ನಾಯಕರಾಗಿ ಬೆಳೆಯಲು ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಬೇಕು. ಈ ಜವಾಬ್ದಾರಿ ನಿಮ್ಮ ಮೇಲಿದೆ. ಬ್ಲಾಕ್ ಕಾಂಗ್ರೆಸ್, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಯಕರು ಎಲ್ಲರೂ ಸೇರಿ ಯೂತ್ ಕಾಂಗ್ರೆಸ್ ಹಾಗೂ ಯುವ ಪೀಳಿಗೆಯನ್ನು ಬಲಪಡಿಸಬೇಕಿದೆ. ನೀವು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ ಎಂದು ಯುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ.
ನಾಳೆಯಿಂದ ಮಳೆಗಾಲದ ಅಧಿವೇಶನ ಕಾಂಗ್ರೆಸ್ ಪಕ್ಷದ ರಣತಂತ್ರ ಏನು ಗೊತ್ತಾ?
ಹೈಕಮಾಂಡ್ ಕೊಟ್ಟ ಅವಕಾಶ
ಸದಸ್ಯತ್ವ ನೋಂದಣಿ ಮಾಡಿಸಲು ಮುಕ್ತ ಅವಕಾಶ ಇದ್ದು, ನಿಮ್ಮ ಮೇಲೆ ಯಾರ ಒತ್ತಡವೂ ಇರುವುದಿಲ್ಲ. ಹೆಚ್ಚು ಸದಸ್ಯರನ್ನು ಮಾಡಿದಷ್ಟು ನಿಮ್ಮಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಇದು ದೊಡ್ಡ ಅವಕಾಶ. ನಿಮ್ಮೆಲ್ಲರಿಗೂ ಶುಭವಾಗಲಿ. ನಿಮಗೆ ನಮ್ಮ ಸಂಪೂರ್ಣ ಸಹಕಾರ ಸಿಗುತ್ತದೆ.
ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಅವರು, ಪ್ರಿಯಾಂಕಾ ಗಾಂಧಿ ಅವರು ಅತಿ ಹೆಚ್ಚು ನಾಯಕರನ್ನು ಬೆಳೆಸಲು ಈ ಅವಕಾಶ ಮಾಡಿಕೊಟ್ಟಿದ್ದಾರೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
'ಪ್ರತಿ ತಾಲೂಕಿನಲ್ಲೂ ಕನಿಷ್ಠ 5 ಸಾವಿರ ಯುವಕರನ್ನು ಪಕ್ಷದ ಸದಸ್ಯತ್ವಕ್ಕೆ ನೋಂದಣಿ ಮಾಡಿಸಿ. ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನೀವು ನಾಯಕರಾಗಿ ಬೆಳೆಯಿರಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯೂತ್ ಕಾಂಗ್ರೆಸ್ ಸದಸ್ಯರಿಗೆ ವಿಡಿಯೋ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
Recommended Video