ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ
ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ
ಬೆಂಗಳೂರು, ಸೆ 15: ರಾಜ್ಯ ಗೃಹಸಚಿವಾಲಯ ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿದ್ದು, ಇಪ್ಪತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದ, ರೌಡಿಗಳ ಪಾಲಿನ ಸಿಂಹಸ್ವಪ್ನ ಅಲೋಕ್ ಕುಮಾರ್ ಅವರನ್ನು ಸಿಸಿಬಿಯ (ಸಿಟಿ ಕ್ರೈಂ ಬ್ರಾಂಚ್) ಐಜಿಪಿ, ಜಂಟಿ ಕಮಿಷನರ್ ಆಗಿ ವರ್ಗಾಯಿಸಲಾಗಿದೆ. ಆ ಮೂಲಕ, ಸೋಮವಾರದಿಂದ ನನ್ನ ವರ್ಕಿಂಗ್ ಸ್ಟೈಲೇ ಬೇರೆ ಎನ್ನುವ ಮಾತನ್ನು ಎರಡು ದಿನದ ಮುನ್ನವೇ ಮುಖ್ಯಮಂತ್ರಿಗಳು ಮಾಡಿ ತೋರಿಸಿದ್ದಾರೆ. ಅಲೋಕ್ ಕುಮಾರ್ ಅವರ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬಂದಿದೆ. (ಗುಪ್ತಚರ ಇಲಾಖೆ ನೀಡಿದ ಸ್ಪೋಟಕ ವರದಿ)
ಮಟ್ಕಾ, ಬೆಟ್ಟಿಂಗ್, ರಿಯಲ್ ಎಸ್ಟೇಟ್, ಮೀಟರ್ ಬಡ್ಡಿ ದಂಧೆಯ ಮೂಲಕ ಕೋಟ್ಯಾಂತರ ರೂಪಾಯಿ ಕೈಕೈಬದಲಾಗುತ್ತದೆ. ಇದೆಲ್ಲವೂ, ಪೊಲೀಸರ ರಕ್ಷೆಯಿಂದಲೇ ನಡೆಯುತ್ತಿದೆ. ಒಂದೆಡೆ ಇದು ಕ್ರಿಮಿನಲ್ ಕೇಸ್, ಇನ್ನೊಂದು ಈ ಅಕ್ರಮ ಹಣವನ್ನು ಕ್ರೋಡೀಕರಿಸಿ, ಸರಕಾರ ಉರುಳಿಸಲು ಸಂಚು ರೂಪಿಸಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು.
ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಗುಪ್ತಚರ ಇಲಾಖೆಯ ಡಿಐಜಿಯಾಗಿದ್ದ ಸಂದೀಪ್ ಪಾಟೀಲ್ ಅವರನ್ನು ಆ ಇಲಾಖೆಯಿಂದ ವರ್ಗಾಯಿಸಲಾಗಿದ್ದು, ಸಿಎಆರ್ ಇಲಾಖೆಗೆ ಟ್ರಾನ್ಸ್ ಫರ್ ಮಾಡಲಾಗಿದೆ. ಇನ್ನು ಅಲೋಕ್ ಮೋಹನ್ ಅವರನ್ನು ರೈಲ್ವೇಸ್ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಅಲೋಕ್ ಮೋಹನ್, ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿಯಾಗಿದ್ದರು.
ಪಿ ಎಸ್ ಸಂಧು ಅವರನ್ನು ಬೆಂಗಳೂರು ನಗರ ಟ್ರಾಫಿಕ್ ಮತ್ತು ಸುರಕ್ಷತೆಯ ಎಡಿಜಿಪಿಯಾಗಿ, ಎನ್ ಸತೀಶ್ ಕುಮಾರ್ ಅವರನ್ನು ಕರ್ನಾಟಕ ರಿಸರ್ವ್ ಪೊಲೀಸ್ ಡಿಐಜಿಯಾಗಿ ವರ್ಗಾಯಿಸಲಾಗಿದೆ.