'ಸಿಡಿ' ಪ್ರಕರಣ: ಬಾಲಚಂದ್ರ ಜಾರಕಿಹೊಳಿ ಪರ ಶಾಸಕ ಮಹೇಶ್ ಕುಮಟಳ್ಳಿ ಬ್ಯಾಟಿಂಗ್!
ಬೆಂಗಳೂರು, ಮಾ. 05: ಹಿಂದೆ ರಾಜ ಮಹಾರಾಜರ ಕಾಲದಲ್ಲಿ ವಿಷಕನ್ಯೆಯರು ಅಂತಾ ಇರುತ್ತಿದ್ದರಂತೆ, ಈಗ ಅದೇ ರೀತಿ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಕುರಿತು ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ಅವರು, ನಾನು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇನೆ. ಆ ದೃಶ್ಯಾವಳಿಗಳನ್ನು ನೋಡಿದರೆ ಎಲ್ಲೂ ಬಲತ್ಕಾರದ ರೀತಿ ಅನ್ನಿಸುವುದಿಲ್ಲ. ಇದು ಪೂರ್ವನಿಯೋಜಿತವಾಗಿ ವ್ಯವಸ್ಥಿತವಾಗಿ ಮಾಡಿದಂತೆ ಕಂಡು ಬರುತ್ತಿದೆ. ಸಿಡಿ ಅಸಲಿಯೋ ನಕಲಿಯೋ ಅನ್ನೋದು ಬೇರೆ, ಅವರಿಬ್ಬರೂ ಪ್ರಬುದ್ಧರಿದ್ದಾರೆ. ಹೀಗಾಗಿ ಅದು ಸ್ವಯಂ ಪ್ರೇರಣೆ ಅನ್ನೋದನ್ನು ನಾವೂ ಗಮನಿಸಿದ್ದೇವೆ. ಹೀಗಾಗಿ ಇದು ಹನಿಟ್ರ್ಯಾಪ್ ಅಲ್ಲದೆ ಬೇರೇನೂ ಅಲ್ಲ ಎಂದು ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಅವರ ಅತ್ಯಾಪ್ತ ಮಹೇಶ್ ಕುಮಟಳ್ಳಿ ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದು ಪಕ್ಕಾ ಹನಿಟ್ರ್ಯಾಪ್!
ಹಿಂದೆ ರಾಜ ಮಹಾರಾಜರ ಕಾಲದಲ್ಲಿ ವಿಷಕನ್ಯೆಯರನ್ನು ಬಿಟ್ಟು ಇಂತಹ ಕೃತ್ಯಗಳನ್ನು ಮಾಡುತ್ತಿದ್ದರು. ಈಗ ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ಅದು ಎಡಿಟ್ ಆಗಿರೋ ಅಂತಾ ವಿಡಿಯೋ ಅನ್ನಿಸುತ್ತಿದೆ. ಅದರಿಂದ ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ಆಗಿರುವ ನೋವನ್ನು ಯಾರಿಗೆ ಹೇಳೋದು? ಎಂದು ಶಾಸಕ ಮಹೇಶ್ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಕೀಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು
ನಾನು ಹಲವು ಬಾರಿ ಕರೆ ಮಾಡಿದೆ, ಆದರೆ ಅವರು ಕರೆ ಸ್ವೀಕರಿಸಿಲ್ಲ. ಇದು ವ್ಯವಸ್ಥಿತವಾದ ಪಿತೂರಿ ಅನ್ನೋದು ಇಲ್ಲಿ ಕಂಡು ಬರುತ್ತಿದೆ. ರಾಜಕೀಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಖಾಸಗಿ ಬದುಕನ್ನು ಈ ರೀತಿ ಬಳಸಿಕೊಳ್ಳಬಾರದು. ಜೊತೆಗೆ ಮಿತ್ರ ಮಂಡಳಿ ಸದಸ್ಯರು ಅವರೊಂದಿಗೆ ನಿಲ್ಲುತ್ತಾರೆ. ಜೊತೆಗೆ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಅವರಿಗೆ ನೈತಿಕ ಬೆಂಬಲ ನೀಡುತ್ತಿದ್ದಾರೆ ಎಂದು ಕುಮಟಳ್ಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ದೈವ ಭಕ್ತರು
ರಮೇಶ್ ಜಾರಕಿಹೊಳಿ ಅವರನ್ನು ಬೇಟಿ ಮಾಡೋಣ ಎಂದು ಬೆಂಗಳೂರಿಗೆ ಬಂದಿದ್ದೆ. ಆದರೆ ಅವರು ಇಲ್ಲಿಲ್ಲ. ಬೆಳಗಾವಿ ಅಥವಾ ಗೋಕಾಕ್ಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರು ದೈವ ಭಕ್ತರು, ಆದರೆ ಯಾಕೆ ಹೀಗೆ ಆಗಿದೆ ಗೊತ್ತಾಗುತ್ತಿಲ್ಲ ಎಂದು ಮಹೇಶ್ ಕುಮಟಳ್ಳಿ ತಮ್ಮ ನಾಯಕರ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ.
Recommended Video
ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಲಿ
ಇನ್ನು ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಯಿಂದ ತೆರುವಾಗಿರುವ ಸಚಿವ ಸ್ಥಾನವನ್ನು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೊಡಬೇಕು. ಆದರೆ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಅವರಿಂದ ತೆರುವಾದ ಸ್ಥಾನವನ್ನು ಅವರ ಕುಟುಂಬಸ್ಥರಿಗೆ ಕೊಡಬೇಕು. ಬೇರೆ ಯಾರು ಕೂಡ ಅದನ್ನು ಕೇಳುವುದೂ ಸೂಕ್ತವಲ್ಲ. ಉಪಚುನಾವಣೆ ಹಿನ್ನಲೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುವುದು ಸೂಕ್ತ ಎಂದು ಮಹೇಶ್ ಕುಮಟಹಳ್ಳಿ ಆಗ್ರಹಿಸಿದ್ದಾರೆ.