ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಬಿಟ್ಟು ಉಳಿದ ರಾಜ್ಯಗಳಲ್ಲಿದೆ ನೀರು!
ನವದೆಹಲಿ, ಜೂನ್ 17:ದೇಶದಲ್ಲಿ ಎಲ್ಲೆಡೆ ಮುಂಗಾರು ಪೂರ್ವ ಮಳೆಯೂ ಇಲ್ಲದೆ ಮುಂಗಾರು ಕೂಡ ಸಕಾಲಕ್ಕೆ ಆಗಮಿಸದೆ ಬರ ಪರಿಸ್ಥಿತಿ ಎದುರಿಸುವಂತಾಗಿದೆ.
ರೈತರು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ, ಅಡಿಕೆ ಮರಗಳು ಕೆಂಪಾಗಿ ಸೊರಗಿದೆ, ಉಳಿದ ಬೆಳಗಳೂ ಬಿಸಿಲಿಗೆ ಬಾಡಿವೆ.
ಸಾಕಷ್ಟು ಜಲಾಶಯಗಳು ಸೊರಗಿ ಹೋಗಿವೆ. ಕಿಲೋಮೀಟರ್ಗಳಷ್ಟು ನಡೆದರೂ ಎಲ್ಲಿಯೂ ನೀರು ಸಿಗದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಕೇಂದ್ರ ಜಲ ಆಯೋಗ ನೀಡಿರುವ ಮಾಹಿತಿ ಪ್ರಕಾರ ಕಳೆದ ವರ್ಷಕ್ಕಿಂತಲೂ ಜಲಾಶಯಗಳಲ್ಲಿ ಈ ಬಾರಿ ಹೆಚ್ಚು ನೀರಿದೆ ಎಂದು ಹೇಳಿರುವುದು ಆಶ್ಚರ್ಯಚಕಿತರನ್ನಾಗಿಸಿದೆ.
ಕೇಂದ್ರ ಜಲ ಆಯೋಗವು 91 ಪ್ರಮುಖ ಜಲಾಶಯಗಳ ಮಟ್ಟವನ್ನು ಗುರುತಿಸಿದೆ. ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳಲ್ಲಿ ನೀರಿದೆ ಎಂದು ಹೇಳಿದೆ.
ಆದರೆ ಮಹಾರಾಷ್ಟ್ರ, ಗುಜರಾತ್, ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆ ಇದೆ ಎಂದೂ ಕೂಡ ಹೇಳಿದೆ. ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಜಲಾಶಯಗಳ ನೀರಿನ ಮಟ್ಟ ಕಡಿಮೆ ಇದ್ದರೂ ಕೂಡ ಸಾಮಾನ್ಯ ಮಟ್ಟದಲ್ಲಿದೆ.
ಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರು
ನೈಋತ್ಯ ಜೂನ್ 1ಕ್ಕೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಒಂದು ವಾರ ತಡವಾಗಿ ಅಂದರೆ ಜೂನ್ 8ಕ್ಕೆ ಆಗಮಿಸಿದೆ. ಪ್ರತಿ ವರ್ಷವೂ ಜೂನ್ ನಿಂದ ಮುಂಗಾರು ಆರಂಭಗೊಂಡು ಸೆಪ್ಟೆಂಬರ್ ವರೆಗೆ ಮಳೆ ಸುರಿಯುತ್ತಲೇ ಇರುತ್ತಿತ್ತು. ಆದರೆ ಈಗಾಘಲೇ ಜೂನ್ ಕಳೆಯುತ್ತಾ ಬಂದಿದೆ. ಇನ್ನೂ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದೆ. ಹಾಗಾಗಿ ಈ ಬಾರಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೇರಳಕ್ಕೆ ಒಂದು ವಾರ ತಡವಾಗಿ ಮುಂಗಾರು ಪ್ರವೇಶಿಸಿದೆ ಎಂದರೆ ಇಡೀ ದೇಶದೆಲ್ಲಡೆ ಅದೇ ರೀತಿಯಾಗುತ್ತದೆ ಎಂದು ಅರ್ಥವಲ್ಲ. ಒಡಿಶಾ ಸೇರಿದಂತೆ ಹಲವೆಡೆ ಮಳೆ ಚೆನ್ನಾಗಿ ಸುರಿಯುತ್ತಿದೆ.ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಶೇ.8ರಷ್ಟು ಕಡಿಮೆ ಇದೆ. ಲಿಂಗನಮಕ್ಕಿ ಅಣೆಕಟ್ಟಿನಲ್ಲಿ 151.75 ಟಿಎಂಸಿಯಷ್ಟು ನೀರು ಶೇಖರಿಸುವ ಸಾಮರ್ಥ್ಯವಿದೆ, ಪ್ರಸ್ತುತ 16.06ನಷ್ಟು ಮಾತ್ರ ನೀರಿದೆ.