ಮಹದಾಯಿ ಅಂತಿಮ ತೀರ್ಪು: ಗೋವಾ ರಾಜ್ಯದ ವಾದ ಏನಾಗಿತ್ತು?
ಬೆಂಗಳೂರು, ಆಗಸ್ಟ್ 14: ಮಹದಾಯಿ ವಿವಾದದ ಬಗ್ಗೆ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪು ನೀಡಿದೆ. ರಾಜ್ಯದ ಅವಶ್ಯಕತೆಗಳು ನೀರಿನ ಲಭ್ಯತೆ ಗಮನದಲ್ಲಿಟ್ಟುಕೊಂಡು ತೀರ್ಪು ನೀಡಿರುವುದಾಗಿ ಹೇಳಿದೆ.
ಗೋವಾ ಮುಖ್ಯಮಂತ್ರಿ ತೀರ್ಪಿನಿಂದ ಸಂತಸವಾಗಿದೆ ಎಂದರೆ ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರು ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ. ರಾಜ್ಯದ ಹಲವರು ಇದೊಂದು ಉತ್ತಮ ತೀರ್ಪು ಎಂದೇ ಹೇಳಿದ್ದಾರೆ.
2012ರಲ್ಲಿ ಪ್ರಾರಂಭವಾದ ಮಹದಾಯಿ ನ್ಯಾಯಾಧಿಕರಣದಲ್ಲಿ ಮಹದಾಯಿ ನೀರಿಗಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರಗಳು ಹೋರಾಡುತ್ತಿದ್ದವು. ಈ ವರೆಗೆ 109 ಬಾರಿ ವಾದ ಮಂಡನೆ ನಡೆದಿದೆ.
ಗೋವಾದ ವಾದ ಏನಾಗಿತ್ತು?
ಗೋವಾ ಈ ಮುಂಚಿನಿಂದಲೂ ಕರ್ನಾಟಕಕ್ಕೆ ಕುಡಿಯುವ ನೀರಿಗೆ ಮಹದಾಯಿ ನೀರು ಬಳಸಿಕೊಳ್ಳಲು ತಕರಾರು ತೆಗೆದಿರಲಿಲ್ಲ. ಆದರೆ ಅದರ ವಾದ ಏನೆಂದರೆ, ಮಹದಾಯಿ ಕರ್ನಾಟಕದಲ್ಲಿ ಹರಿಯುವ 36 ಕಿ.ಮೀ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಖರ್ಚಾಗುವುದು ವರ್ಷಕ್ಕೆ 0.1 ಟಿಎಂಸಿ ಅಡಿ ನೀರು ಮಾತ್ರ ಆದರೆ ಕರ್ನಾಟಕ 2 ಟಿಎಂಸಿ ನೀರು ಕೇಳುತ್ತಿದೆ ಎಂದು ವಾದ ಮಂಡಿಸಿತ್ತು.
ನದಿ ಪಾತ್ರದಲ್ಲಿ ಕೃಷಿಗೂ ನೀರು ಕೊಡಲು ಸಿದ್ಧವಿತ್ತು
ಕುಡಿಯುವ ನೀರಿಗೆ ಮಾತ್ರವಲ್ಲದೆ ಮಹದಾಯಿ ನದಿಪಾತ್ರದಲ್ಲಿ ಇರುವ ಎಲ್ಲ ಜಮೀನಿಗೆ ಕೃಷಿ ಅಗತ್ಯಕ್ಕೂ ಮಹದಾಯಿ ನೀರು ಬಳಸಲು ಗೋವಾ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಮಹದಾಯಿ ನೀರನ್ನು ನದಿಪಾತ್ರದಿಂದ ಹೊರಕ್ಕೆ ತಿರುವುಗೊಳಿಸಿ ಬಳಸುವ ಬಗ್ಗೆ ಭಾರಿ ಆಕ್ಷೇಪವನ್ನು ಗೋವಾ ಎತ್ತುತ್ತಲೇ ಬಂದಿತ್ತು.
ಅಣೆಕಟ್ಟೆ ನಿರ್ಮಾಣಕ್ಕೆ ವಿರೋಧ
ರಾಜ್ಯ ಸರ್ಕಾರವು ಮಹದಾಯಿ ನದಿಪಾತ್ರದಲ್ಲಿ ಕೋಟ್ನಿ ಅಣೆಕಟ್ಟೆ ಕಟ್ಟಲು ಹೊರಟಿತ್ತು, ಅಲ್ಲದೆ, ಕಳಸಾ-ಬಂಡೂರಾ ನಾಲೆ ನಿರ್ಮಾಣ ಮಾಡಿ ಮಲಪ್ರಭಾ ಅಣೆಕಟ್ಟೆಗೆ ನೀರು ಪಂಪ್ ಮಾಡಲು ಉದ್ದೇಶಿಸಿತ್ತು. ಇದಕ್ಕೆ ಗೋವಾ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಮಹದಾಯಿ ನದಿಪಾತ್ರದಲ್ಲಿ ಅಣೆಕಟ್ಟೆ ಕಟ್ಟಿದರೆ ಗೋವಾದ ಮೂರು ಜಲಪಾತಗಳು ಬತ್ತಿ ಹೋಗುತ್ತವೆ ಎಂದು ವಾದ ಮಂಡಿಸಿದ್ದರು.
ಮಹದಾಯಿ ಕೊರತೆಯ ನದಿ
ಮಹದಾಯಿ ನದಿ ಮಿಗತೆ ನದಿಯಲ್ಲ , ಅದು ಕೊರತೆಯ ನದಿ, ಅದರಲ್ಲಿ ಸದಾ ಕಾಲ ನೀರು ಹರಿಯದು, ಮಳೆಗಾಲದಲ್ಲಿ ಮಾತ್ರವೇ ಹರಿಯುತ್ತದೆ. ಹೆಚ್ಚುವರಿ ನೀರು ಉಳಿಯುವುದಿಲ್ಲ ಎಂಬುದು ಗೋವಾ ವಾದ. ಹೆಚ್ಚುವರಿ ನೀರು ಉಳಿಯುವ ನದಿಯಾಗಿದ್ದರೆ ನೀರಾವರಿ ಯೋಜನೆಗಳು ಮಾಡಿಕೊಳ್ಳಲಿ. ಮಿಗತೆ ನದಿಯಲ್ಲಿ ನೀರಾವರಿ ಯೋಜನೆಗೆ ಅವಕಾಶ ಕೊಡಬಾರದು ಎಂದು ಗೋವಾ ವಾದ ಮಾಡಿತ್ತು.
ಮಹದಾಯಿ ನೀರನ್ನು ಮಲಪ್ರಭಾಗೆ ಪಂಪ್
ಮಹದಾಯಿ ನದಿ ಪಾತ್ರದ ನೀರನ್ನು ಮಲಪ್ರಭಾ ಅಣೆಕಟ್ಟೆಗೆ ಪಂಪ್ ಮಾಡುವ ರಾಜ್ಯ ಸರ್ಕಾರದ ಯೋಜನೆಗೆ ಗೋವಾ ವಿರೋಧ ವ್ಯಕ್ತಪಡಿಸಿತ್ತು. ಮಹದಾಯಿ ನದಿ ಪಾತ್ರದಿಂದ ನೀರು ತಿರುಗಿಸಲು ಅವಕಾಶ ಕೊಡಬಾರದು ಎಂಬುದು ಅದರ ವಾದ. ಮಲಪ್ರಭಾ ಅಣೆಕಟ್ಟೆ ತುಂಬಿಸಲು ಮಹದಾಯಿ ನೀರು ಬಳಸುವುದಕ್ಕೆ ಗೋವಾ ಆಕ್ಷೇಪ ವ್ಯಕ್ತಪಡಿಸಿತ್ತು.
ಮಹದಾಯಿ ಬದಲು ಬೆಣ್ಣಿ ಹಳ್ಳ ಬಳಸಿಕೊಳ್ಳಿ
ಉತ್ತರ ಕರ್ನಾಟಕಕ್ಕೆ ನೀರಿನ ಕೊರತೆ ಉಂಟಾಗಲು ಸರ್ಕಾರದ ವಿವೇಚನಾ ರಹಿತ ಯೋಜನೆ ಕಾರಣ ಎಂದು ವಾದಿಸಿತ್ತು. ಮಹದಾಯಿಗಿಂತಲೂ ಹೆಚ್ಚಿನ ನೀರು ಬೆಣ್ಣಿಹಳ್ಳದಲ್ಲಿದೆ ಆದರೆ ಅದನ್ನು ಉಪಯೋಗ ಮಾಡಿಕೊಳ್ಳುವತ್ತ ರಾಜ್ಯ ಸರ್ಕಾರ ಯೋಚಿಸುತ್ತಿಲ್ಲ ಬದಲಿಗೆ ಕಡಿಮೆ ನೀರಿರುವ ಮಹದಾಯಿ ಕೇಂದ್ರಿತ ಯೋಜನೆಗಳನ್ನೇ ರೂಪಿಸುತ್ತಿದೆ ಎಂದು ವಾದಿಸಿತ್ತು.
ಕಬ್ಬು ಬೆಳೆಯಿಂದ ನೀರು ಸಮಸ್ಯೆ
ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆ ಹೆಚ್ಚಾಗಿರುವ ಕಾರಣ ಅಲ್ಲಿ ನೀರಿನ ಸಮಸ್ಯೆ ಹೆಚ್ಚು ಎಂಬುದು ಗೋವಾದ ವಾದ. 47 ಟಿಎಂಸಿ ಸಾಮರ್ಥ್ಯದ ಮಲಪ್ರಭಾ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ 27-28 ಟಿಎಂಸಿ ಅಡಿ ನೀರನ್ನು ಕಬ್ಬು ಬೆಳೆಗೆ ಉಪಯೋಗಿಸುತ್ತಿದ್ದಾರೆ ಹಾಗಾಗಿ ಉತ್ತರ ಕರ್ನಾಟಕದಲ್ಲಿ ನೀರಿನ ಕೊರತೆ ಎದುರಾಗಿದೆ ಎಂದು ನ್ಯಾಯಾಧಿಕರಣದ ಮುಂದೆ ಗೋವಾ ವಾದ ಮಂಡಿಸಿತ್ತು.