ಪ್ರಧಾನಿ ಮೋದಿ ರಾಜ್ಯಕ್ಕೆ ಬರುವ ಮುನ್ನಾ ದಿನ (ಜ 27) 'ಕರ್ನಾಟಕ ಬಂದ್'
ಬೆಂಗಳೂರು, ಜ 10: ಮಹಾದಾಯಿ ನೀರು ಹಂಚಿಕೆ ಸಂಬಂಧದ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸುವ ಕನ್ನಡಪರ ಸಂಘಟನೆಗಳು ಶನಿವಾರ, ಜನವರಿ 27ರಂದು 'ಕರ್ನಾಟಕ ಬಂದ್' ಗೆ ಕರೆನೀಡಿವೆ.
ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜನವರಿ 28ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅದಕ್ಕೆ ಒಂದು ದಿನ ಮುನ್ನ ಎಲ್ಲಾ ಕನ್ನಡಪರ ಸಂಘಟನೆಗಳು ಒಗ್ಗಟ್ಟು ಮತ್ತು ಶಕ್ತಿಪ್ರದರ್ಶನ ಮಾಡಲು ಮುಂದಾಗಿವೆ.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪ್ರಧಾನಿಗೆ ಅಂಬಿ ಕೇಳಿದ ನಾಲ್ಕು ಪ್ರಶ್ನೆಗಳು
ಜ27ರಂದು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಬಂದ್ ನಡೆಸಲು ನಿರ್ಧರಿಸಲಾಗಿದ್ದು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರೂ ಬಂದ್ ಗೆ ಬೆಂಬಲ ನೀಡಬೇಕೆಂದು ವಿವಿಧ ಸಂಘಟನೆಗಳು ಮನವಿ ಮಾಡಿವೆ.
ಬುಧವಾರ (ಜ 10) ಉತ್ತರಕರ್ನಾಟಕ ಭಾಗದ ರೈತರ ಮುಖಂಡರ ಸಭೆಯಲ್ಲಿ ಬಂದ್ ಗೆ ಕರೆನೀಡುವ ನಿರ್ಧಾರಕ್ಕೆ ಬರಲಾಗಿದ್ದು, ಕೇಂದ್ರ ಸರಕಾರ ಮಲತಾಯಿ ಧೋರಣೆ ತಾಳಿರುವುದರಿಂದ, ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುವ ಮುನ್ನಾ ದಿನ ಬಂದ್ ಮಾಡಲಿದ್ದೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿಲ್ಲ ಎಂದು ಯಾವ ಸಂಘಟನೆಗಳೂ ಹೇಳಬಾರದು. ಕರವೇ ನಾರಾಯಣ ಗೌಡರಿಗೂ ಬಂದ್ ಗೆ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ. ಪ್ರಧಾನಿ ಮೋದಿಗೆ ಕನ್ನಡಿಗರ ಒಗ್ಗಟ್ಟನ್ನು ತೋರಿಸೋಣ ಎಂದು ವಾಟಾಳ್ ಹೇಳಿದ್ದಾರೆ.
ನದಿನೀರು ಹಂಚಿಕೆ ಸಂಬಂಧದ ಹೋರಾಟಗಳಿಗೆ ತಾರ್ಕಿಕ ಅಂತ್ಯ ಕಾಣುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ, ಅದು ಮಹಾದಾಯಿ ಆಗಲಿ, ಕಾವೇರಿಯಾಗಲಿ, ಕೃಷ್ಣ ನದಿಯಾಗಲಿ ಎಂದು ವಾಟಾಳ್ ಹೇಳಿದ್ದಾರೆ.
ಜನವರಿ 27ರಂದು ಚಿತ್ರ ಪ್ರದರ್ಶನ ಮತ್ತು ಚಿತ್ರೀಕರಣ ಸ್ಥಗಿತಗೊಳಿಸಿ 'ಕರ್ನಾಟಕ ಬಂದ್' ಗೆ ನಮ್ಮ ಬೆಂಬಲ ಸೂಚಿಸುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದ್ ಹೇಳಿದರು.