ಜಪ್ತಿ ವಾಹನ ನೀಡುವ ಅಧಿಕಾರ ಮ್ಯಾಜಿಸ್ಟ್ರೇಟ್ಗಿದೆ ಎಂದ ಹೈಕೋರ್ಟ್
ಬೆಂಗಳೂರು, ಮೇ 18: ಎನ್ಡಿಪಿಎಸ್ ಅಡಿ ಜಪ್ತಿ ಮಾಡಲಾದ ವಾಹನಗಳನ್ನು ಅವುಗಳ ವಾರಸುದಾರರಿಗೆ ನೀಡುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್ ಅಥವಾ ವಿಶೇಷ ಕೋರ್ಟ್ ಗಳಿಗೆ ಇದೆ ಎಂದು ಹೈಕೋರ್ಟ್ತೀರ್ಪು ನೀಡಿದೆ.
ಆ ಮೂಲಕ ಮ್ಯಾಜಿಸ್ಟ್ರೇಟ್ ಗೆ ಅಧಿಕಾರ ಇದೆಯೇ ಇಲ್ಲವೇ ಎಂಬ ಕುರಿತ ಗೊಂದಲಕ್ಕೆ ತೆರೆಎಳೆದಿದೆ. ಏಕೆಂದರೆ ಒಬ್ಬ ನ್ಯಾಯಮೂರ್ತಿ ಅಧಿಕಾರ ಇದೆ ಎಂದರೆ ಮತ್ತೊಬ್ಬರು ಇಲ್ಲ ಎಂದು ಆದೇಶ ನೀಡಿದ್ದರು. ಇದರಿಂದಾಗಿ ಉಂಟಾಗಿದ್ದ ಗೊಂದಲಕ್ಕೆ ವಿಭಾಗೀಯಪೀಠ ತೆರೆ ಎಳೆದಿದೆ.
ಬೆಂಗಳೂರಿನ ಬನಶಂಕರಿಯ ಜಿ. ಶ್ರೀಕೃಷ್ಣ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಕುರಿತು ವಿಚಾರಣೆ ನಡೆಸಿದ್ದ ವಿಭಾಗೀಯಪೀಠ ತೀರ್ಪು ಕಾಯ್ದಿರಿಸಿತ್ತು. ಇದೀಗ ತೀರ್ಪನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ವಿಭಾಗೀಯಪೀಠ ಪ್ರಕಟಿಸಿದೆ.
ಎನ್ಸಿಬಿ ಪರ ವಕೀಲರು, ಮಾದಕ ವಸ್ತುಗಳ ಸಾಗಣೆಗೆ ಬಳಸಲಾದ ಆರೋಪದಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ವಾರಸುದಾರರಿಗೆ ಮಧ್ಯಂತರ ಅವಧಿಯಲ್ಲಿ ನೀಡುವ ಬಗೆಗಿನ ಕೇಂದ್ರದ ಅಧಿಸೂಚನೆಯಲ್ಲಿ ಎಲ್ಲೂ ವಿವರ ಇಲ್ಲ. ಈಗಾಗಲೇ ದೇಶದ 18 ಹೈಕೋರ್ಟ್ಗಳು ಇಂತಹ ಅಧಿಕಾರವು ವಿಚಾರಣಾ ನ್ಯಾಯಾಲಯಗಳಿಗಿದೆ ಎಂದು ತೀರ್ಪು ನೀಡಿವೆ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದರು. ವಿಭಾಗೀಯಪೀಠ ಆ ವಾದವನ್ನು ಪುರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ:
ಒಂದು ಪ್ರಕರಣದಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯಪೀಠ, ಮಾದಕ ವಸ್ತುಗಳ ಸಾಗಣೆ ಸಂದರ್ಭದಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಅವುಗಳ ವಾರಸುದಾರರಿಗೆ ಬಿಡುಗಡೆ ಮಾಡುವ ಅಧಿಕಾರ ವಿಚಾರಣಾ ಕೋರ್ಟ್ಗಿದೆ' ಎಂದು ತೀರ್ಪು ನೀಡಿದ್ದರು.
ಆದರೆ, ಇನ್ನೊಂದು ಪ್ರಕರಣದಲ್ಲಿ ಮತ್ತೊರ್ವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ವಾಹನ ಬಿಡುಗಡೆ ಮಾಡುವ ಅಧಿಕಾರ ಪೊಲೀಸ್ ನೇತೃತ್ವದ ವಿಲೇವಾರಿ ಸಮಿತಿಗಿದೆ ಎಂದು ತೀರ್ಪು ನೀಡಿತ್ತು.
ಈ ವಿಭಿನ್ನ ನಿಲುವುಗಳ ಗೊಂದಲ ನಿವಾರಣೆಗೆ ವಿಭಾಗೀಯ ನ್ಯಾಯಪೀಠ ರಚಿಸಲಾಗಿತ್ತು. ಇದರ ಮುಂದೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಇಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ನೀಡಿರುವ ಅಧಿಕಾರ ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತದೆ' ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು.
'ಮಾದಕ ವಸ್ತುಗಳ ಜೊತೆಗೆ ಅದರ ಸಾಗಣೆಗೆ ತೊಡಗುವ ವಾಹನಗಳನ್ನು ನಾಶ ಮಾಡಬೇಕು' ಎಂದು ಕೇಂದ್ರ ಸರ್ಕಾರ 2015ರ ಜನವರಿ 16ರಂದು ಅಧಿಸೂಚನೆ ಹೊರಡಿಸಿತ್ತು. ಈ ದಿಸೆಯಲ್ಲಿ ವಾಹನಗಳನ್ನು ಶಾಶ್ವತವಾಗಿ ನಾಶ ಮಾಡಲು ಕೆಲವೊಂದು ನಿರ್ದೇಶನಗಳನ್ನೂ ನೀಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.