ನೇಪಾಳದ ಸಂತ್ರಸ್ತರಿಗೆ ಮಾಗಡಿ ರೈತ ತೋರಿದ ಮಾನವೀಯತೆ
ನಮ್ಮ ಸಹೋದರ ರಾಷ್ಟ್ರ ನೇಪಾಳದಲ್ಲಿ ಭೂತಾಯಿ ಬಾಯಿ ತೆರೆದಿದ್ದರಿಂದ ಅಲ್ಲಿನ ದೇಶದ ಜನ ಅನ್ನ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಪರಿಹಾರದ ರೂಪದಲ್ಲಿ ಪಾಪಿ ಪಾಕಿಸ್ತಾನ ಗೋಮಾಂಸವನ್ನು ಪೂರೈಸುವ ಮೂಲಕ ನೇಪಾಳಿ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. (ನೇಪಾಳದಲ್ಲಿ ಉಳಿದಿರುವುದು ಬರೀ ಅವಶೇಷಗಳೇ)
ಆದರೆ ಮಾಗಡಿಯ ರೈತರೊಬ್ಬರು ಮೂರೂವರೆ ಎಕರೆ ಪ್ರದೇಶದಲ್ಲಿ ಬೆಳೆದ ಬಾಳೆಬೆಳೆಯನ್ನು ಮಾರುಕಟ್ಟೆಯಲ್ಲಿ ಮಾರಿ ಬಂದ ಹಣವನ್ನೆಲ್ಲಾ ನೇಪಾಳ ದೇಶದ ಸಂತ್ರಸ್ತ ನಿಧಿಗೆ ನೀಡುವ ಮೂಲಕ ಭಾರತೀಯ ನೇಗಿಲಯೋಗಿಗಳ ಮಾನವೀಯ ಮೌಲ್ಯವನ್ನ ಎತ್ತಿ ಹಿಡಿದಿದ್ದಾರೆ.
ಕೃಷಿಯೇ ಬದುಕು: ಮಾಗಡಿ ತಾಲ್ಲೂಕಿನ ಗಡಿಭಾಗದಲ್ಲಿರುವ ತಾವರೆಕೆರೆಯ ನರಸಿಂಹಮೂರ್ತಿಯವರು ತಾತ ಮುತ್ತಾತರ ಕಾಲದಿಂದಲೂ ಕೃಷಿಯನ್ನೇ ನಂಬಿ ಬದುಕನ್ನ ಸಾಗಿಸುತ್ತಿದ್ದಾರೆ.
ಇವರ ತಂದೆತಾಯಿ ಇಬ್ಬರು ನೇಪಾಳ ಪ್ರವಾಸಕ್ಕೆ ತೆರಳಿ ಪಶುಪತಿದೇವರ ದರ್ಶನ ಮಾಡಿ ವಾಪಸ್ ಆಗಿದ್ದರು. ವಾಪಸಾದ ಕೆಲವೇ ದಿನಗಳಲ್ಲಿ ಭೂತಾಯಿ ಮುನಿಸಿನಿಂದ ನೇಪಾಳಿಗರ ಬದುಕೇ ದುಸ್ತರವಾಗಿಬಿಟ್ಟಿದೆ.
ನೇಪಾಳದಲ್ಲಾದ ಭೂಕಂಪದಿಂದ ಮನೆಬದುಕು ಕಳೆದುಕೊಂಡವರ ಪರಿಸ್ಥಿತಿ ನೋಡಿ ನರಸಿಂಹಮೂರ್ತಿಯವರ ತಂದೆತಾಯಿ ಕಣ್ಣೀರಿಟ್ಟಿದ್ದಾರೆ. ತಂದೆತಾಯಿ ಅಂತಃಕರಣವನ್ನ ಅರಿತ ಮಗ ನರಸಿಂಹಮೂರ್ತಿ ತಾವು ಸುಮಾರು ಮೂರುವರೆ ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯ ಹಣವನ್ನ ನೇಪಾಳ ಸಂತ್ರಸ್ತ ನಿಧಿಗೆ ನೀಡುವ ತೀರ್ಮಾನ ಮಾಡಿದ್ದಾರೆ.
ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಬೆಳೆದಿರುವ ನರಸಿಂಹಮೂರ್ತಿಯವರಿಗೆ ಇದರಿಂದ ನಾಲ್ಕು ಟನ್ನಿಗೂ ಹೆಚ್ಚು ಬಾಳೆ ಫಸಲು ಬಂದಿದೆ.
ಈಗ ಬಾಳೆಹಣ್ಣನ್ನ ಮಾರಿ ಬಂದ ಹಣದಿಂದ ಬಂದಿರುವ ಸುಮಾರು 75 ಸಾವಿರಕ್ಕೂ ಹೆಚ್ಚು ಹಣವನ್ನ ಮೊದಲ ಕಂತಿನಲ್ಲಿ ಪರಿಹಾರದ ರೂಪದಲ್ಲಿ ನೀಡುತ್ತಿದ್ದಾರೆ.
ಸಂತೆಯಲ್ಲಿ ಮಾರಾಟ : ತಾನೇ ಖುದ್ದಾಗಿ ನಿಂತು ಬಾಳೆಗೊನೆಗಳನ್ನ ಕಟಾವು ಮಾಡಿಸಿದ ನರಸಿಂಹಮೂರ್ತಿ ಟ್ರಾಕ್ಟರುಗಳ ಮೂಲಕ ಗೊನೆಗಳನ್ನು ತುಂಬಿಕೊಂಡು ಸಂತೆಯಲ್ಲಿ ಮಾರಾಟ ಮಾಡಿದ್ದಾರೆ.
ಪರಿಹಾರ ನಿಧಿಯ ಬಾಕ್ಸನ್ನು ಹಿಡಿದು ಬಾಳೆಹಣ್ಣು ಖರೀದಿ ಮಾಡಿ ನೇಪಾಳಿ ಮಂದಿಗೆ ಸಹಾಯ ಮಾಡಿ ಎಂದು ಹೇಳುತ್ತಿದ್ದರು. ಸಾರ್ವಜನಿಕರೆಲ್ಲರೂ ಬಂದು ಬಾಳೆಹಣ್ಣನ್ನ ಖರೀದಿ ಮಾಡಿ ನೇಪಾಳಿ ಪರಿಹಾರ ನಿಧಿಗೆ ಹಣ ತಲುಪಿಸಲು ನೆರವಾಗಿದ್ದಾರೆ. (ನೇಪಾಳ ಭೂಕಂಪ: ಕೋಡಿಶ್ರೀಗಳು ಭವಿಷ್ಯ ನುಡಿದಿದ್ರಾ)
ಉಳ್ಳವರೆಲ್ಲರೂ ಸಹಾಯ ಮಾಡುವ ಮನಃಸ್ಥಿತಿಯನ್ನ ಹೊಂದಿರುವುದಿಲ್ಲ. ಆದರೆ ನಾವುಗಳು ಇಲ್ಲಿ ಚೆನ್ನಾಗಿದ್ದೇವೆ ಯಾರಿಗೂ ಬಾರದ ಕಷ್ಟ ನೆರೆಯ ನೇಪಾಳ ದೇಶದ ಸಹೋದರಿಗೆ ಬಂದಿದೆ.
ಆದ್ದರಿಂದ ಅವರಿಗೂ ಸಹಾಯ ಹಸ್ತ ಚಾಚಬೇಕೆಂಬ ನಿಟ್ಟಿನಲ್ಲಿ ಬದುಕಿಗೆ ಆಧಾರವಾಗಿದ್ದ ಕೃಷಿಯಿಂದ ಬರುವ ಹಣವನ್ನೇ ಪರಿಹಾರದ ರೂಪದಲ್ಲಿ ನೀಡುತ್ತಿರುವುದರಿಂದ ನನಗೆ ಮನಃತೃಪ್ತಿ ಸಿಕ್ಕಿದೆ ಎನ್ನುವುದು ರೈತ ನರಸಿಂಹಮೂರ್ತಿಯವರ ಅಂತಃಕರಣದ ಮಾತು.
ಪರಿಹಾರದ ರೂಪದಲ್ಲಿ ಪಾಕಿಸ್ತಾನ ಗೋಮಾಂಸ ಪೂರೈಸುವ ಮೂಲಕ ಪಾಪಿ ಬುದ್ದಿಯನ್ನ ತೋರಿಸಿದೆ. ಆದರೆ ನಮ್ಮ ಹೆಮ್ಮೆಯ ಭಾರತದ ನೇಗಿಲಯೋಗಿ ಭೂತಾಯಿ ಮಡಿಲಲ್ಲಿ ಬೆಳೆದ ಬೆಳೆಯಿಂದ ಬಂದ ಹಣವನ್ನ ನೀಡುವ ಮೂಲಕ ರೈತರ ಉದಾರತನವನ್ನ ನರಸಿಂಹಮೂರ್ತಿ ಮೆರೆದಿದ್ದಾರೆಂದು ಸ್ಥಳೀಯ ಶಿಕ್ಷಕ ಚಿಕ್ಕವೀರಯ್ಯ ಮೆಚ್ಚುಗೆ ಸೂಚಿಸಿದ್ದಾರೆ.
ಒಟ್ಟಾರೆ ರೈತ ನರಸಿಂಹಮೂರ್ತಿಯವರಂತೆ ಕೋಟಿ ಕೋಟಿ ಉಳ್ಳವರೂ ಅಲ್ಪ ಪ್ರಮಾಣದಲ್ಲಾದರೂ ಪರಿಹಾರದ ರೂಪದಲ್ಲಿ ನೇಪಾಳಿ ಮಂದಿಗೆ ನೆರವು ನೀಡಿದರೆ ಅವರೂ ಬದುಕನ್ನ ಕಟ್ಟಿಕೊಳ್ಳಬಹುದಾಗಿದೆ.
ರೈತ ನರಸಿಂಹಮೂರ್ತಿಯಂತೆ ಉಳ್ಳವರೆಲ್ಲರೂ ಉದಾರ ಮನೋಭಾವವನ್ನ ಹೊಂದಿದರೆ ನೇಪಾಳದ ಮಂದಿ ಭಾರತೀಯರ ಉದಾರತೆಯನ್ನ ಸ್ಮರಿಸುತ್ತಾರೆ.