ಸಿದ್ದರಾಮಯ್ಯ ಮನೆಯಲ್ಲಿ ಸೊರಬದ ಸಹೋದರರು; ಕುಮಾರ್ ಬಂಗಾರಪ್ಪ ಸ್ಪಷ್ಟನೆ
ಬೆಂಗಳೂರು, ಅಕ್ಟೋಬರ್ 15; ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸೊರಬದ ಸಹೋದರರು ವಿಜಯದಶಮಿಯಂದು ಒಟ್ಟಿಗೆ ಕಾಣಿಸಿಕೊಂಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಂಗಳೂರಿನ ಸಿದ್ದರಾಮಯ್ಯ ನಿವಾಸದಲ್ಲಿ ಸೊರಬದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಮತ್ತು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಒಟ್ಟಿಗೆ ಕಾಣಿಸಿಕೊಂಡರು. ಸಹೋದರರ ಸಮಾಗಮ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಯಿತು.
ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ
ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಪುತ್ರಿಯ ವಿವಾಹಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಹ್ವಾನಿಸಿಸಲು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಅಲ್ಲಿಯೇ ಇದ್ದರು. ಆಕಸ್ಮಿಕವಾಗಿ ಸಹೋದರರು ಮುಖಾಮುಖಿಯಾಗಿದ್ದಾರೆ.
ವಿಶೇಷ ವರದಿ: ಕುತೂಹಲ ಮೂಡಿಸಿದ ಮಧು ಬಂಗಾರಪ್ಪ, ಆನಂದ್ ಅಸ್ನೋಟಿಕರ್ ಭೇಟಿ!
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಕುಮಾರ್ ಬಂಗಾರಪ್ಪ, "ಆಕಸ್ಮಾತ್ ಆಗಿ ನಾನು ನನ್ನ ತಮ್ಮ ಒಟ್ಟಿಗೆ ಸಿಕ್ಕೆವು, ಸಂತೋಷ. ನಾನು ನನ್ನ ಮಗಳ ಮದುವೆ ಆಮಂತ್ರಣವನ್ನು ಕೊಡುವುದಕ್ಕೆ ಬಂದಿದ್ದೆ" ಎಂದು ಹೇಳಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಧು ಬಂಗಾರಪ್ಪ ಹೇಳಿದ್ದೇನು?
"ಸಿದ್ದರಾಮಯ್ಯ ನಮ್ಮ ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳಾಗಿದ್ದವರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ನಮ್ಮ ನಾಯಕರಾಗಿದ್ದವರು. ಮದುವೆ ಆಮಂತ್ರಣ ಕೊಡುವುದಕ್ಕೆ ಬಂದಿದ್ದೆ. ನಮ್ಮ ತಮ್ಮ ಇಲ್ಲಿ ಸಿಕ್ಕರು ಸಂತೋಷವಾಯಿತು" ಎಂದರು.
ಎಲ್ಲವೂ ಸುಳ್ಳು ಸುದ್ದಿ; ಕುಮಾರ್ ಬಂಗಾರಪ್ಪ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳಿ ಇವೆ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, "ಅದೆಲ್ಲ ಸುಳ್ಳು ಸುದ್ದಿ, ಸಂಪೂರ್ಣ ಸುಳ್ಳು ಸುದ್ದಿ. ನಾನು ಬಿಜೆಪಿಯಲ್ಲೇ ಇರುತ್ತೇನೆ. ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರ್ ಬಂಗಾರಪ್ಪ, "ನಮ್ಮ ಜಿಲ್ಲೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ ಸಚಿವರಾಗಿದ್ದಾರೆ. ನಮ್ಮ ಸಮಾಜದಿಂದಲೂ ಸುನೀಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾರೆ. ಆದ್ದರಿಂದ ನನಗೆ ಯಾವುದೇ ನಿರೀಕ್ಷೆ ಇಲ್ಲ. ಪಕ್ಷ ಮತ್ತು ನನ್ನ ಕ್ಷೇತ್ರಗಳ ಕೆಲಸದತ್ತ ಗಮನ ಕೊಟ್ಟಿದ್ದೇನೆ" ಎಂದರು.
"ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ನನಗೆ ಆಹ್ವಾನ ನೀಡಿಲ್ಲ. ಅವರು ಅನುಭವಿ ರಾಜಕಾರಣಿ ಅವರಿಗೆ ನಾವು ಏನು, ಯಾವಾಗ ಯಾವ ವಿಚಾರ ಮಾತನಾಡಬೇಕು ಎಂಬುದು ತಿಳಿದಿದೆ. ಸಿದ್ದರಾಮಯ್ಯ ಅವರಾಗಲಿ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಾಗಲಿ ಪಕ್ಷ ಸೇರಲು ನನಗೆ ಆಹ್ವಾನ ಕೊಟ್ಟಿಲ್ಲ" ಎಂದು ಕುಮಾರ್ ಬಂಗಾರಪ್ಪ ಸ್ಪಷ್ಟನೆ ನೀಡಿದರು.
"ನವೆಂಬರ್ 10ರಂದು ಪುತ್ರಿಯ ವಿವಾಹವಿದೆ. ಮಾಧ್ಯಮಗಳನ್ನು ಆಹ್ವಾನಿಸಲು ಪ್ರೆಸ್ ಕ್ಲಬ್ನಲ್ಲಿ ಮತ್ತೊಮ್ಮೆ ಎಲ್ಲರನ್ನೂ ಭೇಟಿಯಾಗುತ್ತೇನೆ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು" ಎಂದು ಹೇಳಿ ಕುಮಾರ್ ಬಂಗಾರಪ್ಪ ಸಿದ್ದರಾಮಯ್ಯ ನಿವಾಸದಿಂದ ನಿರ್ಗಮಿಸಿದರು.
ಸೊರಬದ ಸಹೋದರರು; ಕಾಂಗ್ರೆಸ್ ಪಕ್ಷದಲ್ಲಿದ್ದ ಕುಮಾರ್ ಬಂಗಾರಪ್ಪ 2018ರ ವಿಧಾನಸಭೆ ಚುನಾವಣೆ ವೇಳೆಗೆ ಬಿಜೆಪಿ ಸೇರಿದ್ದರು. 2018ರ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಹೋದರ ಮಧು ಬಂಗಾರಪ್ಪ ವಿರುದ್ಧ ಗೆಲುವು ಸಾಧಿಸಿದ್ದಾರೆ.
2013ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೊರಬದಲ್ಲಿ ಗೆದ್ದಿದ್ದರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ ಬಂಗಾರಪ್ಪ ಸೋಲಿಸಿದ್ದರು. ರಾಜಕೀಯವಾಗಿ ಮಾತ್ರವಲ್ಲ ವೈಯಕ್ತಿವಾಗಿ ಸಹ ಸಹೋದರರ ನಡುವೆ ಅಸಮಾಧಾನವಿದೆ.
ಸೊರಬದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಮಧು ಬಂಗಾರಪ್ಪ 2019ರ ಲೋಕಸಭೆ ಚುನಾಣೆಯಲ್ಲಿ ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿದ್ದರು. ಆದರೆ ಬಿಜೆಪಿಯ ಬಿ. ವೈ. ರಾಘವೇಂದ್ರ ವಿರುದ್ಧ ಸೋಲು ಕಂಡರು.
Recommended Video
ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್ ಪಕ್ಷದಿಂದ ದೂರವಾಗಿದ್ದ ಮಧು ಬಂಗಾರಪ್ಪ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿದ್ದರು. ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು. ಜುಲೈ 30ರಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.