ಮಡೆಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಏನು? ಹೀಗೂ ಮಾಡಬಹುದು
ಗೌಡ ಸಾರಸ್ವತ ಸಮುದಾಯದ ದೇವಾಲಯಗಳಲ್ಲಿ 'ಮಡೆಸ್ನಾನ', 'ಉರುಳುಸೇವೆ', 'ಶ್ರವಣ ಪ್ರದಕ್ಷಿಣಾ ಸೇವೆ' ಮತ್ತು 'ಆಂಗವಣ' ಹರಕೆಯ ಬಗ್ಗೆ ಒಂದು ಸ್ಪಷ್ಟನೆ.
ಇತ್ತೀಚಿನ ಒಂದೆರಡು ವರ್ಷಗಳಿಂದ 'ಮಡೆಸ್ನಾನ' ಮತ್ತು 'ಎಡೆಸ್ನಾನ' ಗಳ ವಿಷಯದಲ್ಲಿ ಹೇಳಿಕೆ - ಪ್ರತಿ ಹೇಳಿಕೆಗಳು ತಾರಕಕ್ಕೇರಿ, ಕೋರ್ಟು ಮೆಟ್ಟಲುಗಳನ್ನು ಏರಿಬಂದಾಗಿದೆ. ಅಲ್ಲದೇ, ಹಿಂದೂ ಸಮಾಜದ ಹಲವಾರು ಸ್ವಾಮೀಜಿಗಳನ್ನು ಈ ವಿಷಯದಲ್ಲಿ ಎಳೆದು ತಂದಾಗಿದೆ.
ಈ ಸಂದರ್ಭದಲ್ಲಿ ಗೌಡ ಸಾರಸ್ವತರ ದೇವಾಲಯಗಳಲ್ಲಿ ಶತಮಾನಗಳಿಂದ ನಡೆದುಕೊಂಡುಬಂದಿರುವ "ಮಡೆಸ್ನಾನ -ಉರುಳುಸೇವೆ ' ಬಗ್ಗೆ ಒಂದು ಸ್ಪಷ್ಟನೆ.
ಇದು ಮಡೆ, ಎಡೆ ಮಡೆಸ್ನಾನಗಳನ್ನು ಅಲ್ಲಗಳೆಯುವರಿಗಾಗಲೀ ಇಂತಹ ವಿಚಾರಗಳಲ್ಲಿ ನಂಬಿಕೆ ಇಲ್ಲದವರಿಗಾಗಲೀ ಬರೆದದಲ್ಲ, ಎಂದು ಒತ್ತಿ ಹೇಳಲು ಬಯಸುತ್ತೇವೆ. (ಹೈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ)
ಕೊಂಕಣಿ ಭಾಷಿಗರ ಸಾರಸ್ವತ ಹಿರಿಯರು ತಮ್ಮ 'ಕುಳಾರ' (ತವರು ಮನೆ) ಗೋವಾದಲ್ಲಿ ವಿದೇಶಿ ಪೋರ್ಚುಗೀಸರ ದುರಾಡಳಿತ, ದುರಾಕ್ರಮಣಗಳಿಂದಾಗಿ ತಮ್ಮ ಮೂಲ ಸ್ಥಾನವನ್ನು ಬಿಟ್ಟು ಭಾರತದ ಪಶ್ಚಿಮ ಕರಾವಳಿಯ ಕೇರಳ - ಕೊಚ್ಚಿ, ಮಲಬಾರ, ಕರ್ನಾಟಕ ರಾಜ್ಯದ ಕೆನರಾ ಎಂದು ಕರೆಯಲ್ಪಡುತ್ತಿದ್ದ ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ವಲಸಿಗರಾಗಿ ಬಂದು ನೆಲೆಸಿದ್ದರು.
ತುಳುನಾಡಿನಲ್ಲಿ ಪ್ರಚಲಿತವಿದ್ದ ಒಂದೆರಡು ಧಾರ್ಮಿಕ ಸಾಂಸ್ಕೃತಿಕ ಆಚರಣೆಗಳನ್ನು ಸಾರಸ್ವತ ದೇವಳಗಳಲ್ಲಿಯೂ ಆಚರಿಸಲಾಗುತ್ತದೆ. ಅದರಲ್ಲಿ ಕೊಂಕಣಿಯಲ್ಲಿ "ಆಂಗವಣ' ಹರಕೆ ಹೊತ್ತವರು ಮಾಡುವ "ಮಡೆಸ್ನಾನ' ಎಂಬ ಉರುಳು ಸೇವೆಯೂ ಒಂದು.
ಕೇರಳದಲ್ಲಿ ಗೌಡ ಸಾರಸ್ವತರ ದೇವಳಗಳಲ್ಲಿಯೂ ತಮ್ಮ ದೈಹಿಕ, ಸಾಂಸಾರಿಕ, ರೋಗರುಜಿನಗಳ ನಿವಾರಣೆಗಾಗಿ ಅಥವಾ ವ್ಯಾಪಾರ ಉದ್ಯಮಗಳಿಂದ ಆಗುವ ಕಷ್ಟನಷ್ಟಗಳಲ್ಲಿ ನರಳುತ್ತಿರುವರು, ಶ್ರವಣ ಪ್ರದಕ್ಷಿಣಾ ಸೇವೆ', ಮಡೆಸ್ನಾನ ಆಂಗವಣ ಸೇವೆಯನ್ನು ಸಲ್ಲಿಸುವ ಹರಕೆಯನ್ನು ಹೊರುತ್ತಾರೆ.
ಗೌಡ ಸಾರಸ್ವತರ ದೇವಾಲಯಗಳಲ್ಲಿ ಜರಗುವ ವಾರ್ಷಿಕ ರಥೋತ್ಸವದ ಕೊನೆಯ ದಿನ ಓಕುಳಿ ಉತ್ಸವ ನಡೆಯುತ್ತದೆ. ಅಂದು ನದಿ ಅಥವಾ ಕೆರೆಗಳಲ್ಲಿ ಸ್ನಾನ ಮಾಡಿ ದೇವಳದ ಹೊರ ಅಂಗಣದಲ್ಲಿ ಮಡೆಸ್ನಾನದಿಂದ (ಉರುಳುಸೇವೆ) ಸುತ್ತಿ ಬಂದು ದೇವರ ಎದುರಿಗೆ ನಿಂತು ತಮ್ಮ ಪುರೋಹಿತರಿಂದ ಅಥವಾ ಅರ್ಚಕರಿಂದ ದೇವರಲ್ಲಿ ಪ್ರಾರ್ಥಿಸುತ್ತಾರೆ. (ನಿಡುಮಾಮಿಡಿ ಸಂದರ್ಶನ)
ನಂತರ, ಕಾಣಿಕೆ ಹಾಕಿ ತೀರ್ಥ ತೆಗೆದುಕೊಂಡು ಬಳಿಕ ಪುನಃ ಸ್ನಾನ ಮಾಡಿ ದೇವಾಲಯದ ಒಳಗೆ ಬಂದು ದೇವರ ಆಶೀರ್ವಾದವನ್ನು ಬೇಡುವುದು ಪದ್ಧತಿ ಮತ್ತು ನಡೆದುಕೊಂಡು ಬರುತ್ತಿರುವ ಸಂಪ್ರದಾಯ.
ಆದರೆ, ಈ ಮಡೆಸ್ನಾನ ಎಂಜಲೆಲೆಗಳ ಮೇಲಾಗಲಿ ಅಥವಾ ಪ್ರಸಾದದ ಎಲೆಗಳ ಮೇಲಾಗಲಿ ನಡೆಯುವುದಿಲ್ಲ. ಮಣ್ಣಿನ ಬರೀ ನೆಲದ ಮೇಲೆ ನಡೆಯುತ್ತದೆ ಮತ್ತು ಸೇವೆಗೈಯುವವರು ಸಂಕಷ್ಟ ನಿವಾರಣೆ ಬಗ್ಗೆ ಪ್ರಾರ್ಥಿಸುತ್ತಲಿರುತ್ತಾರೆ.
ಮಡೆಸ್ನಾನ ಅಥವಾ ಎಡೆಸ್ನಾನಗಳ ಬದಲಿಗೆ ಈ ರೀತಿಯ ಮಡೆಸ್ನಾನ ಪದ್ದತಿಯನ್ನು ಮಠಾಧಿಪತಿಗಳು, ಹಿಂದೂ ಧಾರ್ಮಿಕ ಮುಖಂಡರು, ದೇವಾಲಯಗಳ ಧರ್ಮದರ್ಶಿಗಳು ಕಾರ್ಯರೂಪಕ್ಕೆ ತರುವುದರಲ್ಲಿ ಆಸಕ್ತಿವಹಿಸಿದ ಪಕ್ಷದಲ್ಲಿ, ನಮ್ಮ ಹಿಂದೂ ಪದ್ಧತಿಗಳಲ್ಲಿ ಒಂದಾದ ಉರುಳು ಸೇವೆಯ ಬಗ್ಗೆ ಈಗ ನಡೆಯುತ್ತಿರುವ ಸಾರ್ವಜನಿಕ ವಾದವಿವಾದಗಳ ನಿವಾರಣೆಗೆ ದಾರಿಯಾದೀತು.