ಚಾಮರಾಜನಗರದ ಮೇಲೆ ಕಣ್ಣಿಟ್ಟ ಬಿ. ವೈ. ವಿಜಯೇಂದ್ರ ಆಪ್ತ!
ಬೆಂಗಳೂರು, ಸೆಪ್ಟೆಂಬರ್ 29; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ನಾಯಕರು ಕಸರತ್ತು ಆರಂಭಿಸಿದ್ದಾರೆ. ಯಾವ ಕ್ಷೇತ್ರದಿಂದ ಕಣಕ್ಕಿಳಿದರೆ ಸೂಕ್ತ? ಎಂಬ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು (ಕೆಆರ್ಐಡಿಸಿಎಲ್) ಅಧ್ಯಕ್ಷ, ಬಿಜೆಪಿ ನಾಯಕ ಎಂ. ರುದ್ರೇಶ್ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಪಕ್ಷ ಅವಕಾಶ ನೀಡಿದರೆ ಖಂಡಿತ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ತೆರೆ ಮೇಲೆ ಬರಲಿದೆ ಚಾಮರಾಜನಗರ ಆಮ್ಲಜನಕ ದುರಂತ: ಲಾಭಾಂಶದ ಹಣ ಸಂತ್ರಸ್ತರಿಗೆ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಪ್ತರಾಗಿರುವ ಎಂ. ರುದ್ರೇಶ್ ರಾಮನಗರ ಮೂಲದವರು. ಆದರೆ ಅವರು ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದಾರೆ. ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಾ ಮುಖಂಡರು, ಬೆಂಬಲಿಗರ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದಾರೆ.
ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಮಾರ್ಗ ಪರಿಶೀಲನೆ
ಎಂ. ರುದ್ರೇಶ್ ಚಾಮರಾಜನಗರ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ಹಂಚಿಕೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿಯೇ ಮನೆ ಮಾಡಲು ಅವರು ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಪಕ್ಷ ಸಂಘಟನೆಗೆ ಆದ್ಯತೆ ನೀಡಲು ಮುಂದಾಗಿದ್ದಾರೆ. ಇದು ಚುನಾವಣೆಯ ತಯಾರಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಭಾರತ್ ಜೋಡೋ; ರಾಹುಲ್ ಸ್ವಾಗತಿಸುವೆ ಎಂದ ಜೆಡಿಎಸ್ ಶಾಸಕ!
ಮಾಧ್ಯಮಗಳ ಜೊತೆ ಮಾತನಾಡಿದ ಎಂ. ರುದ್ರೇಶ್, "ಚಾಮರಾಜನಗರಕ್ಕೆ ಹಲವು ಬಾರಿ ಬಂದಿದ್ದೇನೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ ಕೆಆರ್ಐಡಿಸಿಎಲ್ ಮೂಲಕ ಕೊಳ್ಳೇಗಾಲಕ್ಕೆ ಆಕ್ಸಿಜನ್ ಪ್ಲಾಂಟ್ ನೀಡಿದ್ದೇವೆ" ಎಂದರು.
"ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಮತ್ತು ನಮ್ಮ ನಾಯಕರಾದ ಬಿ. ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಶಾಲೆಗಳಿಗೆ ಬ್ಯಾಗ್ ವಿತರಣೆ ಮಾಡಲಾಗುತ್ತಿದೆ. ಕಳೆದ ಬಾರಿ ಹನೂರು ಕ್ಷೇತ್ರದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಟ್ಯಾಬ್ ವಿತರಣೆ ಮಾಡಲಾಗಿತ್ತು. ಈ ಬಾರಿಯೂ ವಿತರಣೆ ಮಾಡಲಾಗುತ್ತಿದೆ" ಎಂದು ಎಂ. ರುದ್ರೇಶ್ ಹೇಳಿದರು.
"ಚಾಮರಾಜನಗರದ ಮೇಲೆ ರುದ್ರೇಶ್ ಕಣ್ಣಿಟ್ಟಿರುವುದಲ್ಲ. ರುದ್ರೇಶ್ ಅವರು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಚಾಮರಾಜನಗರ ಕ್ಷೇತ್ರದ ನಮ್ಮ ಸಮುದಾಯದ ಮುಖಂಡರು ರುದ್ರೇಶ್ ಬರಲಿ ಎಂದು ಆಪೇಕ್ಷೆ ಪಡುತ್ತಿದ್ದಾರೆ" ಎಂದರು.
"ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂಬುದು ನಮ್ಮ ನಿರೀಕ್ಷೆಯಾಗಿದೆ. ಅದಕ್ಕಾಗಿ ನಾನು ಸಹ ಕೆಲಸ ಮಾಡುತ್ತಿದ್ದೇವೆ. ಪಕ್ಷ ಅವಕಾಶ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ" ಎಂದು ಎಂ. ರುದ್ರೇಶ್ ಸ್ಪಷ್ಟಪಡಿಸಿದರು.
ಬಿಜೆಪಿಗೆ ಸೋಲು; ಚಾಮರಾಜನಗರ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಸಿ. ಪುಟ್ಟರಂಗ ಶೆಟ್ಟಿ. 2018ರ ವಿಧಾನಸಭೆ ಚುನಾವಣೆಯಲ್ಲಿ 75,963 ಮತಗಳನ್ನು ಪಡೆದು ಪುಟ್ಟರಂಗ ಶೆಟ್ಟಿ ಬಿಜೆಪಿಯ ಕೆ. ಆರ್. ಮಲ್ಲಿಕಾರ್ಜುನಪ್ಪರನ್ನು 4,913 ಮತಗಳಿಂದ ಸೋಲಿಸಿದ್ದಾರೆ.
ಕಳೆದ ಚುನಾವಣೆಯ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಅಥವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ವಿ. ಸೋಮಣ್ಣ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿತ್ತು. ಆದರೆ ಕೊನೆ ಕ್ಷಣದಲ್ಲಿ ಸೋಮಣ್ಣ ಬೆಂಗಳೂರಿನಲ್ಲಿಯೇ ಉಳಿದರು.
ಮೈಸೂರು-ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಈ ಬಾರಿ ಗೆಲ್ಲಬೇಕು ಎಂದು ಬಿಜೆಪಿ ಈಗಾಗಲೇ ತಂತ್ರ ರೂಪಿಸಿದೆ. ಅದಕ್ಕಾಗಿ ಹಳೆ ಮೈಸೂರು ಭಾಗದ ಕ್ಷೇತ್ರಗಳತ್ತ ಹೆಚ್ಚಿನ ಗಮನ ನೀಡುತ್ತಿದೆ. ಇಂತಹ ಸಂದರ್ಭದಲ್ಲಿಯೇ ರುದ್ರೇಶ್ ಚಾಮರಾಜನಗರದಿಂದ ಕಣಕ್ಕಿಳಿಯಲು ಬಯಸಿದ್ದಾರೆ.
ಚಾಮರಾಜನಗರ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ತವರು ಕ್ಷೇತ್ರ. ಅಲ್ಲದೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚಾಮರಾಜನಗರದ ಮೂಲಕವೇ ಕರ್ನಾಟಕಕ್ಕೆ ಆಗಮಿಸಲಿದೆ. ಈ ಹಿನ್ನಲೆಯಲ್ಲಿ ಬೃಹತ್ ಸಮಾವೇಶ ನಡೆಸಲು ಪಕ್ಷದ ನಾಯಕರು ತಯಾರಿ ಕೈಗೊಂಡಿದ್ದಾರೆ.