ಎಂ ಕೃಷ್ಣಪ್ಪ, ಪ್ರಿಯಾಕೃಷ್ಣ ಬಿಜೆಪಿ ಸೇರ್ಪಡೆ ಸಾಧ್ಯತೆ; ಆರ್. ಅಶೋಕ್ ಅಸಮಾಧಾನ
Recommended Video
ಬೆಂಗಳೂರು, ಜನವರಿ 22: ವಸತಿ ಸಚಿವ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ, ಶ್ರೀಮಂತ ಶಾಸಕ ಪ್ರಿಯಾಕೃಷ್ಣ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಈ ಬಗ್ಗೆ ಮಾತುಕತೆಗಳು ಚಾಲ್ತಿಯಲ್ಲಿವೆ.
ಇಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಂಡು ಎರಡು ಕ್ಷೇತ್ರಗಳನ್ನು ಗೆಲ್ಲುವುದು ಜತೆಗೆ ಒಕ್ಕಲಿಗ ಸಮುದಾಯದ ಒಂದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ತಂತ್ರವಾಗಿದೆ.
ಬಿಜೆಪಿ ಸೇರಿದ ಇಬ್ಬರು ಜೆಡಿಎಸ್ ಶಾಸಕರು!
ಆದರೆ, ಒಕ್ಕಲಿಗ ನಾಯಕರಾದ ತಂದೆ-ಮಗನನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಬಗ್ಗೆ ಪಕ್ಷದಲ್ಲೇ ಅಸಮಾಧಾನ ಹೊಗೆಯಾಡುತ್ತಿದೆ. ಮುಖ್ಯವಾಗಿ ಬಿಜೆಪಿಯ ಪ್ರಬಲ ಒಕ್ಕಲಿಗ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಈ ನಿರ್ಧಾರದ ಬಗ್ಗೆ ಬೇಸರಗೊಂಡಿದ್ದಾರೆ.
ಒಂದು ಕಲ್ಲು, ಎರಡು ಹಕ್ಕಿ
ಪ್ರಿಯಾಕೃಷ್ಣ ಮತ್ತು ಎಂ.ಕೃಷ್ಣಪ್ಪರನ್ನು ಬಿಜೆಪಿಗೆ ಸೇರಿಸುವುದರಿಂದ ಎರಡು ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಬಹುದು ಎಂಬುದು ಬಿಜೆಪಿ ಸರಳ ಲೆಕ್ಕಾಚಾರ. ಕೃಷ್ಣಪ್ಪ ಪ್ರತಿನಿಧಿಸುವ ವಿಜಯನಗರ ಹಾಗೂ ಪ್ರಿಯಾಕೃಷ್ಣಪ್ರತಿನಿಧಿಸುವ ಗೋವಿಂದರಾಜನಗರದಲ್ಲಿ ಇಬ್ಬರೂ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿರುವುದೇ ಇದಕ್ಕೆ ಕಾರಣ.
ಒಕ್ಕಲಿಗ ಮತಗಳ ಮೇಲೆ ಕಣ್ಣು
ಇಬ್ಬರೂ ತಮ್ಮ ತಮ್ಮ ಕ್ಷೇತ್ರವನ್ನು ಗೆಲ್ಲುವುದಲ್ಲದೆ ಒಕ್ಕಲಿಗ ಮತಗಳನ್ನೂ ಸೆಳೆಯುವ ಶಕ್ತಿ ಹೊಂದಿದ್ದಾರೆ. ಮುಖ್ಯವಾಗಿ ಎಂ.ಕೃಷ್ಣಪ್ಪ ಮಂಡ್ಯ ಮತ್ತು ರಾಮನಗರ ಭಾಗದಲ್ಲಿ ಪ್ರಭಾವಿಯಾಗಿದ್ದಾರೆ. ಹೀಗೆ ಇವರನ್ನು ಬಳಸಿಕೊಂಡು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮತಗಳನ್ನು ಛಿದ್ರಗೊಳಿಸುವುದು ಬಿಜೆಪಿಯ ಇನ್ನೊಂದು ಉಪಯೋಜನೆ.
ಡಿಕೆಶಿ ಜತೆ ವೈಮನಸ್ಸು
ಕಾಂಗ್ರೆಸ್ ಪಕ್ಷದಲ್ಲಿ ಡಿಕೆ ಶಿವಕುಮಾರ್ ಜತೆ ಉಭಯ ನಾಯಕರಿಗೆ ಅಸಮಾಧಾನವಿದೆ ಎನ್ನಲಾಗಿದ್ದು ಈ ಕಾರಣಕ್ಕೆ ಕಾಂಗ್ರೆಸ್ ಬಿಡಲು ತೀರ್ಮಾನಿಸಿದ್ದಾರಂತೆ. ಎಂ. ಕೃಷ್ಣಪ್ಪರನ್ನು ಹಿಂದಕ್ಕೆ ಬಿಟ್ಟು ಪಕ್ಷದಲ್ಲಿ ಡಿಕೆಶಿ ನಾಗಾಲೋಟ ಮುಂದುವರಿದಿದ್ದು ತಂದೆ-ಮಗನ ವೈಮನಸ್ಸಿಗೆ ಕಾರಣವಾಗಿದೆ.
ಆದರೆ ಇಬ್ಬರೂ ಬಿಜೆಪಿ ಸೇರುವುದನ್ನು ಇನ್ನೂ ಖಚಿತಪಡಿಸಿಲ್ಲ. ಬಿಜೆಪಿ ಮೂಲಗಳ ಪ್ರಕಾರ 2018-19ರ ಬಜೆಟ್ ನಂತರ ಬಿಜೆಪಿ ಸೇರುವ ಬಗ್ಗೆ ಇಬ್ಬರೂ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಯಡಿಯೂರಪ್ಪ ಆಪ್ತ ಅಶೋಕ್ ಅಸಮಾಧಾನ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಜತೆ ಗಟ್ಟಿಯಾಗಿ ಗುರುತಿಸಿಕೊಂಡಿದ್ದ ಪದ್ಮನಾಭನಗರ ಶಾಸಕ ಆರ್.ಅಶೋಕ್ ಸದ್ಯಕ್ಕೆ ಬಿಜೆಪಿಯಲ್ಲಿರುವ ಪ್ರಬಲ ಒಕ್ಕಲಿಗ ನಾಯಕ. ಅದರಲ್ಲೂ ಬೆಂಗಳೂರು ಭಾಗದಲ್ಲಿ ಮತಗಳನ್ನು ಹಿಡಿದಿಡುವ ರಾಜಕಾರಣಿ.
ಸದ್ಯ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣರನ್ನು ಬಿಜೆಪಿಗೆ ಕರೆತರುವ ಬಿಎಸ್ ವೈ ನಿರ್ಧಾರ ಅಶೋಕ್ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಅಶೋಕ್ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ಬೆಂಬಲಿಸುತ್ತಿದ್ದು ಯಡಿಯೂರಪ್ಪನವರಿಂದ ದೂರವಾಗಿದ್ದಾರೆ ಎನ್ನಲಾಗುತ್ತಿದೆ.