ಸಚಿವರಾಗದ ಪಾಟೀಲ್, ರಾಮಸ್ವಾಮಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆ
ಬೆಂಗಳೂರು, ಆಗಸ್ಟ್ 7: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಎಂಬಿ ಪಾಟೀಲ್ ಹಾಗೂ ಜೆಡಿಎಸ್ನ ಹಿರಿಯ ಶಾಸಕ ಎಟಿ ರಾಮಸ್ವಾಮಿ ಅವರನ್ನು ಸಮಾಧಾನ ಪಡಿಸಲು ಎಂಬಂತೆ ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಹುದ್ದೆಯನ್ನು ನೀಡಲಾಗಿದೆ.
ಅಲ್ಲದೆ ಸಚವ ಸ್ಥಾನದ ಆಕಾಂಕ್ಷಿಗಳಾಗಿದ್ದ ಎನ್ಎ ಹ್ಯಾರಿಸ್, ಹಾಗೂ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ್ ಅವರಿಗೂ ಸ್ಥಾಯಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ ಈ ಮೂಲಕ ಸಂಪುಟದಲ್ಲಿ ಸ್ಥಾನ ಸಿಗದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸಮಾಧಾನ ಪಡಿಸಲು ಸರ್ಕಾರ ಮುಂದಾದಂತಾಗಿದೆ.
ಎಂಬಿ.ಪಾಟೀಲ್ ಮನೆಗೆ ಮುಖಂಡರ ಪರೇಡ್, ಸಿಎಂ ಕೂಡ ಬಂದು ಹೋದರು
ಆದರೆ ಸ್ಥಾಯಿಸಮಿತಿಯ ಅಧ್ಯಕ್ಷ ಹುದ್ದೆಗೆ ಈ ಶಾಸಕರು ತೃಪ್ತಿಯಾಗುತ್ತಾರಾ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಯಾವ ಸಮಿತಿಗೆ ಯಾರ್ನನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ. ಆರ್ ಅಶೋಕ್ ನೇತೃತ್ವದಲ್ಲಿ ಲೆಕ್ಕಪತ್ರ ಸಮಿತಿ ರಚಿಸಲಾಗಿದೆ.
ಎಂಬಿ ಪಾಟೀಲ್ ನೇತೃತ್ವದಲ್ಲಿ ಸಾರ್ವಜನಿಕರ ಉದ್ಯಮಗಳ ಸಮಿತಿ, ಎಚ್ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಎಸ್ಸಿಎಸ್ಟಿ ಕಲ್ಯಾಣ ಸಮಿತಿ, ಎನ್ಎ ಹ್ಯಾರಿಸ್ ನೇತೃತ್ವದಲ್ಲಿ ಹಿಂದುಳಿದ ಅಲ್ಪಸಂಖ್ಯಾತ ಕಲ್ಯಾಣ ಸಮಿತಿ, ವಿ.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಅಧೀನ ಶಾಸಕ ಸಮಿತಿ ರಚನೆ ಮಾಡಲಾಗಿದೆ.
ಕೆಜಿ ಬೋಪಯ್ಯ ಅಧ್ಯಕ್ಷತೆಯಲ್ಲಿ ಕಾಗದ ಪತ್ರಗಳ ಸಮಿತಿ ರಚನೆ, ಎಸ್ಟಿ ಸೋಮಶೇಖರ್ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಸಮಿತಿ, ವಿಧಾನ ಪರಿಷತ್ ಸಭಾಪತಿ ಅಧ್ಯಕ್ಷತೆಯಲ್ಲಿ ಗ್ರಂಥಾಲಯ ಸಮಿತಿ, ಬಿಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆಗಳು, ಶ್ರೀನಿವಾಸ ಗೌಡ ಅಧ್ಯಕ್ಷತೆಯಲ್ಲಿ ಸಂದಾಜುಗಳ ಸಮಿತಿ, ಎಟಿ ರಾಮಸ್ವಾಮಿ ನೇತೃತ್ವದಲ್ಲಿ ಸರ್ಕಾರಿ ಭರವಸೆಗಳ ಸಮಿತಿ ರಚಿಸಲಾಗಿದೆ.