'ಫಲಿತಾಂಶ ನಂತರ ಸ್ಪೀಕರ್ ಕಾಗೋಡು ಪದಚ್ಯುತಿ'
ಸಾಗರ, ಮೇ 13: ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಅಲ್ಲೋಲಕಲ್ಲೋಲಗಳು ನಡೆಯುವುದು ನಿಶ್ಚಿತವೆನ್ನುತ್ತಾರೆ ರಾಜಕೀಯ ಪಂಡಿತರು. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಸಚಿವರು ಸ್ಥಾನ ವಂಚಿತರಾಗುತ್ತಾರೆ ಎಂಬ ಮಾತುಗಳು ಹಿಂದಿನಿಂದಲೂ ಕೇಳಿಬರುತ್ತಿದೆ.
ಆದರೆ ಬಿಜೆಪಿಯ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಲೋಕಸಭಾ ಚುನಾವಣೆ ಫಲಿತಾಂಶಕ್ಕಾಗಿಯೇ ಕಾಯುತ್ತಿದ್ದು, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಪದಚ್ಯುತಿಗೆ ರಣವೀಳ್ಯ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸ್ವತಃ ಬೇಳೂರು ಗೋಪಾಲಕೃಷ್ಣ ಅವರೇ ಸೋಮವಾರ ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಸೋದರ ಮಾವನ ವಿರುದ್ಧ ಈ ಮಾಹಿತಿ ನೀಡಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಸಾಮಾಜಿಕ ಹೋರಾಟಗಾರ ಎಸ್ಆರ್ ಹಿರೇಮಠ ಅವರನ್ನು ಜತೆಗೆ ಕರೆದುಕೊಂಡು ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಕಾಗೋಡು ತಿಮ್ಮಪ್ಪರನ್ನು ಸ್ಪೀಕರ್ ಸ್ಥಾನದಿಂದ ಕೆಳಗಿಳಿಸುವಂತೆ ಮನವಿ ಮಾಡುತ್ತಾರಂತೆ.
ಯಾಕೆ ತಿಮ್ಮಪ್ಪ (ಅಂದರೆ ಬೇಳೂರು ಗೋಪಾಲಕೃಷ್ಣ ಅವರ ಮಾವ) ಅವರು ಅಂಥಾ ತಪ್ಪೇನು ಮಾಡಿದ್ದಾರೆ ಎಂದು ಕೇಳಿದ್ದಕ್ಕೆ ಅವರ ವಿರುದ್ಧ 21 ಚೆಕ್ ಬೌನ್ಸ್ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇವೆಯೆಂದು ಬೇಳೂರು ನುಡಿದಿದ್ದಾರೆ.
ಹಾಗಾಗಿ, ಅವರು ಸ್ಪೀಕರ್ ಸ್ಥಾನದಂತಹ ಮೌಲ್ಯಯುತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವುದು ತರವಲ್ಲ. ತಗೀರಿ ರಾಜ್ಯಪಾಲರೇ ಎಂದು ಮನವಿ ಮಾಡುತ್ತಾರಂತೆ. ಈ ಸಂಬಂಧ ಈಗಾಗಲೇ ಸಾಮಾಜಿಕ ಹೋರಾಟಗಾರ ಹಿರೇಮಠನ್ನು ಭೇಟಿ ಮಾಡಿದ್ದು, ಅವರ ಕೈಗೆ ದಾಖಲೆಗಳನ್ನು ಒಪ್ಪಿಸಿ, ಓಕೆ ಅನಿಸಿಕೊಮಡಿದ್ದಾರಂತೆ.