ಹಳ್ಳಿಹಕ್ಕಿ ವಿಶ್ವನಾಥ್ಗೆ ಎಲ್.ಆರ್.ಶಿವರಾಮೇಗೌಡರ ಪತ್ರ!
ಬೆಂಗಳೂರು, ಜೂನ್ 20 : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹುಣಸೂರು ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ ಅವರ ಮನವೊಲಿಕೆ ಕಾರ್ಯ ಮುಂದುವರೆದಿದೆ. ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪತ್ರವೊಂದನ್ನು ವಿಶ್ವನಾಥ್ ಅವರಿಗೆ ಬರೆದಿದ್ದಾರೆ.
'ಹಳ್ಳಿ ಹಕ್ಕಿ ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿಯೇ ಮುಂದುವರೆಯಲಿ' ಎಂಬ ತಲೆಬರಹವಿರುವ ಪತ್ರವನ್ನು ಎಲ್.ಆರ್.ಶಿವರಾಮೇಗೌಡ ಅವರು ಗುರುವಾರ ಬರೆದಿದ್ದಾರೆ. ರಾಜ್ಯಾಧ್ಯಕ್ಷರಾಗಿ ಮುಂದುವರೆಯುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದು ಕಾರ್ಯಕರ್ತರ ಒಕ್ಕೊರಲ ಒತ್ತಾಯ ಎಂದು ಹೇಳಿದ್ದಾರೆ.
ರಾಜೀನಾಮೆ ಅಂಗೀಕರಿಸದಿದ್ದರೆ ಶಾಸಕ ಸ್ಥಾನವೂ ಬೇಡ : ವಿಶ್ವನಾಥ್
ಜೂನ್ 4ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಎಚ್.ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇದುವರೆಗೂ ರಾಜೀನಾಮೆಯನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಅಂಗೀಕಾರ ಮಾಡಿಲ್ಲ.
ಎಚ್.ವಿಶ್ವನಾಥ್ ಮನವೊಲಿಸುವ ದೇವೇಗೌಡರ ಪ್ರಯತ್ನಕ್ಕೆ ಫಲವಿಲ್ಲ?
ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕೇವಲ 1 ಸ್ಥಾನದಲ್ಲಿ ಜಯಗಳಿಸಿತ್ತು. ಚುನಾವಣೆ ಫಲಿತಾಂಶದ ಬಳಿಕ ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ವಿಶ್ವನಾಥ್ ಅವರ ಮನವೊಲಿಸಲು ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ನಾಯಕರು ಪ್ರಯತ್ನ ನಡೆಸುತ್ತಲೇ ಇದ್ದಾರೆ...
ತೀರ್ಮಾನ ಮರು ಪರಿಶೀಲಿಸಲು ಎಚ್.ವಿಶ್ವನಾಥ್ಗೆ ದೇವೇಗೌಡರ ಸಲಹೆ
ಕಾರ್ಯಕರ್ತರ ಒಕ್ಕೊರಲಿನ ಮನವಿ
ರಾಜಕಾರಣದಲ್ಲಿ ಅಪರೂಪದ ವ್ಯಕ್ತಿತ್ವ, ಮೌಲ್ಯಗಳನ್ನು ಒಡಗೂಡಿಸಿಕೊಂಡು ಬಂದಿರುವ ನಮ್ಮೆಲ್ಲರ ಹೆಮ್ಮೆಯ ಸಹೃದಯ ರಾಜಕಾರಣಿ ಎಚ್.ವಿಶ್ವನಾಥ್ ಅವರು ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸುವುದು ಬೇಡ ಎಂಬುದು ನನ್ನಂತಹಾ ನೂರಾರು ಜೆಡಿಎಸ್ ಕಾರ್ಯಕರ್ತರ ಒಕ್ಕೊರಲಿನ ಮನವಿ ಎಂದು ಪತ್ರದಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ
2019ರ ಲೋಕಸಭಾ ಚುನಾವಣಾ ಫಲಿತಾಂಶ ಒಂದು ಪಕ್ಷವನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪಕ್ಷಗಳು ಪುನರ್ ಮನನ, ಆತ್ಮಾವಲೋಕನದ ಜೊತೆಗೆ ಅಖಂಡ ಭಾರತದ ಆ ಪಕ್ಷಗಳು ಪಾಲಿಸಿಕೊಂಡು ಬಂದಿದ್ದ ಸೈದ್ಧಾಂತಿಕ ನಿಲುವುಗಳ ಬಗೆಗಿನ ಚರ್ಚೆ-ವಿಮರ್ಶೆಯ ಆಘಾತದಲ್ಲಿ ಮಿಂದೇಳುತ್ತಿರುವ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ನ ನೊಗ ಕಳಚಿ ಬಿಡುಗಡೆಯ ಹಾದಿಯತ್ತ ಹಳ್ಳಿ ಹಕ್ಕಿ ಮುಖ ಮಾಡಿರುವುದು ಸರಿಯಲ್ಲವೆಂಬುದು ನಮ್ಮ ಭಾವನೆ.
ಕನಸುಗಾರ ಕುಮಾರಸ್ವಾಮಿ
ಪ್ರತಿ ಸೋಲು ಗೆಲುವಿನ ಮೆಟ್ಟಿಲು ಎಂಬ ಆತ್ಮಸ್ಥೈರ್ಯವನ್ನು ತುಂಬಿಕೊಂಡು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮಾನ್ ಎಚ್.ಡಿ.ದೇವೇಗೌಡರಿಗೆ ಮತ್ತು ರಾಜ್ಯದ ರೈತಾಪಿ ವರ್ಗದ ಏಳ್ಗೆಗೆ ಸದಾಕಾಲ ಅಹರ್ನಿಷಿ ದುಡಿಯುತ್ತಿರುವ ನಮ್ಮೆಲ್ಲರ ಹೆಮ್ಮೆಯ ಸುವರ್ಣ ಕರ್ನಾಟಕದ ಕನಸುಗಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಒಂದಷ್ಟು ಚೈತನ್ಯವನ್ನು ತುಂಬಿ ರಾಜ್ಯದ ಸಮಸ್ತ ಜೆಡಿಎಸ್ ಕಾರ್ಯಕರ್ತರು ಹಾಗೂ ಮಹಾ ಜನತೆಯನ್ನು ಒಟ್ಟುಗೂಡಿಸಿ ಸರ್ಕಾರದ ಜನಪರ ಕಾರ್ಯಕ್ರಮಗಳ ಬಗ್ಗೆ ಹಳ್ಳಿ-ಹಳ್ಳಿಗಳಲ್ಲಿ ಜನರ ವಿಶ್ವಾಸಗಳಿಸುವ ಅನಿವಾರ್ಯ ಸ್ಥಿತಿ ಹಿಂದೆಂದಿಗಿಂತಲೂ ತುರ್ತಾಗಿ ಅವಶ್ಯಕವೆನಿಸಿದೆ.
ಚುನಾವಣೆಗೆ ಸನ್ನದ್ಧರಾಗಿಸುವ ಕೆಲಸ
ಮುಂದಿನ ಚುನಾವಣೆಗಳಿಗೆ ಸನ್ನದ್ಧರಾಗಿಸುವ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗಬೇಕೆಂಬುದು ನಮ್ಮೆಲ್ಲಾ ಜ್ಯಾತ್ಯಾತೀತ ಜನತಾದಳದ ಕಾರ್ಯಕರ್ತರ ಪ್ರೀತಿಯ ಆಗ್ರಹವೂ ಆಗಿದೆ. ಈ ಕಾರ್ಯ ನಿಮ್ಮಿಂದ ಮಾತ್ರ ಸಾಧ್ಯವೆಂಬ ಅಚಲ ವಿಶ್ವಾಸದೊಂದಿಗೆ ಎಂದು ಪತ್ರವನ್ನು ಶಿವರಾಮೇಗೌಡರು ಮುಗಿಸಿದ್ದಾರೆ.