ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ
ಬೆಂಗಳೂರು, ಮೇ 08: ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿರುವುದು ಅವರ ಕರ್ತವ್ಯ. ಪ್ರಧಾನಿ ಮೋದಿ ಅವರು ತಾವು ಸೇರಿದ್ದಾರೆ ತಮ್ಮ ಸಂಪುಟದ ಸಚಿವರು ಆಸ್ತಿ ವಿವರವನ್ನು ಆನ್ ಲೈನ್ ನಲ್ಲಿ ಪ್ರಕಟಿಸಲು ಕಾರಣರಾಗಿದ್ದರು.
ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್ ನೀಡುವ ಅಭ್ಯರ್ಥಿಗಳು, ವಾರ್ಷಿಕ ಆದಾಯ ಮೊತ್ತವನ್ನು ಲೋಕಾಯುಕ್ತ ಸಂಸ್ಥೆಗೆ ತಿಳಿಸುವುದರಲ್ಲಿ ಅನೇಕ ಬಾರಿ ವಿಳಂಬ ಮಾಡುತ್ತಾರೆ. ಇನ್ನು ಕೆಲವರು ವಿವರಗಳನ್ನು ನೀಡುವುದೇ ಇಲ್ಲ, ಇಂಥ ಎಂಎಲ್ಎ, ಎಂಎಲ್ಸಿಗಳ ವಿವರಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪ್ರಕಟಿಸಿದೆ.
ಲೋಕಾಯುಕ್ತ ಸಂಸ್ಥೆಗೆ 6 ಶಾಸಕರು ಮತ್ತು 7 ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂದು ಸಂಸ್ಥೆ ಪ್ರಕಟಿಸಿದೆ.
ಈ ಪಟ್ಟಿಯಲ್ಲಿ ಎಂ.ವೈ. ಪಾಟೀಲ್, ಬಿ. ನಾರಾಯಣ ರಾವ್, ಬಸವರಾಜ್ ದಡೇಸಗೂರ್, ಕೆ.ವೈ. ನಂಜೇಗೌಡ, ಎಂ. ಶ್ರೀನಿವಾಸ, ಕೆ.ಎಸ್. ಲಿಂಗೇಶ್, ಸಿ.ಎಂ. ಲಿಂಗಪ್ಪ, ಸಿ.ಎಂ. ಇಬ್ರಾಹಿಂ, ಆಯನೂರು ಮಂಜುನಾಥ್, ಆರ್. ಚೌಡರೆಡ್ಡಿ ತೂಪಲಿ ಮತ್ತು ಕಾಂತರಾಜು ಅವರ ಹೆಸರುಗಳಿವೆ ಎಂದು ಲೋಕಾಯುಕ್ತ ಸಂಸ್ಥೆ ರಿಜಿಸ್ಟ್ರಾರ್ ನಂಜುಡಸ್ವಾಮಿ ಹೇಳಿದರು.
ಪ್ರತಿವರ್ಷ ಜೂನ್ 30 ರೊಳಗಾಗಿ ಆಸ್ತಿ ಘೋಷಣೆ ವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬೇಕಾಗುತ್ತದೆ. ಆದರೆ, 2017-18ನೇ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರನ್ನು ಸಲ್ಲಿಕೆ ಮಾಡಿಲ್ಲ. ಈ ರೀತಿ ಆಸ್ತಿ ವಿವರ ನೀಡದ ಜನಪ್ರತಿನಿಧಿಗಳ ಹೆಸರುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ ಎಂದು ನಂಜುಂಡಸ್ವಾಮಿ ಹೇಳಿದರು.