ಆರು ಭ್ರಷ್ಟರ ಮನೆ ಬಾಗಿಲು ಬಡಿದ ಲೋಕಾಯುಕ್ತರು
ಬೆಂಗಳೂರು, ಏ. 25 : ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಬಾಗಲಕೋಟೆ, ಹಾವೇರಿ, ದಾವಣಗೆರೆ, ಕೋಲಾರ, ಶಿವಮೊಗ್ಗ, ಚಿಕ್ಕಬಳ್ಳಾಪುರದ 16 ಕಡೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಎಲ್ಲಾ ಭಾಗಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಎಷ್ಟು ಎಂಬ ಮಾಹಿತಿ ಲಭ್ಯವಾಗಲಿದೆ. ಕೋಲಾರದಲ್ಲಿ ಜಿಲ್ಲಾಸ್ಪತ್ರೆಯ ಮೇಲ್ವಿಚಾರಕ, ದಾವಣಗೆರೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಹಾವೇರಿಯಲ್ಲಿ ಉಪ ತಹಶೀಲ್ದಾರ್, ಕೊಪ್ಪಳದಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆಯ ಅಧಿಕಾರಿಯ ಮನೆಗಳ ಮೇಲ ದಾಳಿ ನಡೆಸಲಾಗಿದೆ.
ಸ್ವಂತ ಮನೆ ಕಟ್ಟುತ್ತಿದ್ದಾರೆ : ಕೋಲಾರದಲ್ಲಿ ಜಿಲ್ಲಾ ಆಸ್ಪತ್ರೆಯ ಮೇಲ್ವಿಚಾರಕ ಮನಿರಾಜು ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮುನಿರಾಜು ಅವರು ಬಾಡಿಗೆ ಮನೆಯ ಮುಂಭಾಗದಲ್ಲಿಯೇ ಮೂರು ಅಂತಸ್ತಿನ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದು, ಕೆಲವು ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ದಾಳಿಯ ವೇಳೆ ಹಲವು ನಿವೇಶಗಳ ಕಾಗದ ಪತ್ರಗಳು ದೊರಕಿದ್ದು ಪರಿಶೀಲನೆ ಮುಂದುವರೆದಿದೆ.
ಶಿವಮೊಗ್ಗದಲ್ಲಿ ಸಿಕ್ತು ಚಿನ್ನ : ಶಿವಮೊಗ್ಗ ಜಿಲ್ಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾಧಿಕಾರಿ ನಾಗರಾಜ್ ಮನೆಯ ಮೇಲೆ ದಾಳಿ ಮಾಡಲಾಗಿದೆ. ಗೋಪಾಲನಗರದಲ್ಲಿರುವ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದ್ದು, ಲೋಕಾಯುಕ್ತರು ಅವುಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. [ಅನ್ನಭಾಗ್ಯದಲ್ಲಿ ಭ್ರಷ್ಟಾಚಾರದ ವಾಸನೆ]
ಬಾಗಲಕೋಟೆ : ರಾಯಚೂರು ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹದೇಶ್ ಕನ್ನೂರು ಅವರ ಇಳಕಲ್ ಪಟ್ಟಣದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿರುವುದು, ವಿವಿಧ ಕಡೆ ವಾಣಿಜ್ಯ ಮಳಿಗೆಗಳನ್ನು ಹೊಂದಿರುವುದು ಮುಂತಾದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಕೊಪ್ಪಳದಲ್ಲಿ ದಾಳಿ : ಕೊಪ್ಪಳದಲ್ಲಿ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬಸವನಗೌಡ ಮತ್ತು ಅವರ ಸಹೋದರನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಸಹೋದರರು ಒಟ್ಟಾಗಿ ಟೈರ್ ಮಾರಾಟ ಮಾಡುವ ಮಳಿಗೆಯನ್ನು ಹೊಂದಿದ್ದು, ಅಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಕೂಗಾಡಿದ ಸಬ್ ಇನ್ಸ್ ಪೆಕ್ಟರ್ : ದಾವಣಗೆರೆಯ ಹರಪನಹಳ್ಳಿಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೋಮ್ಲಾ ನಾಯಕ ಅವರ ಮನೆ ಬಾಗಿಲು ಬಡಿದ ಲೋಕಾಯುಕ್ತ ಅಧಿಕಾರಿಗಳ ಮೇಲೆ ನಾಯಕ್ ಪೊಲೀಸ್ ದರ್ಪ ತೋರಿಸಿದ್ದಾರೆ. ನಂತರ ಲೋಕಾಯುಕ್ತರು ಎಂದು ತಿಳಿದ ಬಳಿಕ ಸಮಾಧಾನಗೊಂಡಿದ್ದಾರೆ. ಇವರ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು, ಅವುಗಳ ಲೆಕ್ಕ ಹಾಕುತ್ತಿದ್ದಾರೆ.
ಹಾವೇರಿಯಲ್ಲಿ ದಾಳಿ : ಹಾವೇರಿಯಲ್ಲಿ ಉಪ ತಹಸೀಲ್ದಾರ್ ಮತ್ತು ಅವರ ಸಂಬಂಧಿಕರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬ್ಯಾಡಗಿ ವಿಭಾಗದ ಉಪ ತಹಸೀಲ್ದಾರ್ ಬಸವರಾಜ್ ಕೂಪರ್ ಅವರ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.