ದುಬಾರಿ ವಾಚ್ ಪ್ರಕರಣ : ಸಿದ್ದರಾಮಯ್ಯಗೆ ಬಿಗ್ ರಿಲೀಫ್!
ಬೆಂಗಳೂರು, ಡಿಸೆಂಬರ್. 04 : ದುಬಾರಿ ಹುಬ್ಲೋಟ್ ವಾಚ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಕೋರಿದ್ದ ಅರ್ಜಿಯನ್ನು ಶನಿವಾರ ಲೋಕಾಯುಕ್ತ ಕೋರ್ಟ್ ತಿರಸ್ಕರಿಸಿದೆ. ಇದರಿಂದ ಸಿದ್ದರಾಮಯ್ಯ ಅವರು ನಿರಾಳರಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಲೋಕಾಯುಕ್ತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದರು. ಆದರೆ, ಲೋಕಾಯುಕ್ತ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಅರ್ಜಿದಾರ ಟಿ.ಜೆ.ಅಬ್ರಾಹಂ ಅವರು ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.
ಸಚಿವ ಎಚ್.ಸಿ.ಮಹದೇವಪ್ಪ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷಣ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಎಲ್.ರಘು, ಡಾ.ಗಿರೀಶ್ ಚಂದ್ರವರ್ಮಾ ಮತ್ತು ವ್ಯಾಪಾರಿ ಕರಣ್ ವಿರುದ್ಧ ದೂರು ಸಲ್ಲಿಸಲಾಗಿತ್ತು.
ಇಂಜಿನಿಯರ್ ರಘು ತಮ್ಮ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ತನಿಖೆಗೆ ಅನುಮತಿ ತಿರಸ್ಕಾರಕ್ಕಾಗಿ ಮೂರು ವಾಚುಗಳನ್ನು ಖರೀದಿಸಿ ಒಂದನ್ನು ಮುಖ್ಯಮಂತ್ರಿ ಮತ್ತೊಂದನ್ನು ಸಚಿವ ಮಹದೇವಪ್ಪ ಅವರಿಗೆ ನೀಡಿದ್ದರು. ಈ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ದೂರಿನ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ರಾಹಂ ಅವರು, 'ಹೈಕೋರ್ಟಿನಲ್ಲಿ ಹೋರಾಟ ಮುಂದುವರೆಸುತ್ತೇನೆ' ಎಂದು ಹೇಳಿದ್ದಾರೆ.