ಕಸಾಪ ಆಜೀವ ಸದಸ್ಯತ್ವ ಪಡೆದ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್
ಬೆಂಗಳೂರು, ಜೂನ್ 21: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ ಸೇರಿದಂತೆ ಈ ನೆಲದ ಅಸ್ಮಿತೆಗಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶದಿಂದ 'ಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು' ಎಂಬ ಅಭಿಯಾನ ಪ್ರಾರಂಭಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ರಾಜ್ಯಾದ್ಯಂತ ಜನಸಾಮಾನ್ಯರಿಂದ ಹಿಡಿದು ಗಣ್ಯರ ಮನೆಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಮನೆಗೆ, ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಪರಿಷತ್ತಿನ ಸದಸ್ಯತ್ವ, ಕನ್ನಡ ಸೇವೆ ಕುರಿತು ಅರಿವು ಮೂಡಿಸುತ್ತಿದ್ದಾರೆ.
ಅದೇ ರೀತಿ ಡಾ. ಮಹೇಶ ಜೋಶಿ ರಾಜ್ಯ ಲೋಕಾಯುಕ್ತರ ಕಚೇರಿಗೆ ಸೋಮವಾರ ಭೇಟಿ ನೀಡಿದರು. ಈ ವೇಳೆ ಲೋಕಾಯುಕ್ತರಾದ ನ್ಯಾ. ಬಿ. ಎಸ್. ಪಾಟೀಲ್ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ. ನಂತರ ಪರಿಷತ್ತಿನ ಸೇವೆ ಕುರಿತು ಕೆಲ ಕಾಲ ಅಧ್ಯಕ್ಷರ ಜತೆ ಚರ್ಚಿಸಿದ್ದಾರೆ.
ಜನಸಾಮಾನ್ಯರ ಪರಿಷತ್ತು ಆಗಲಿದೆ; ಸದಸ್ಯತ್ವ ಪಡೆದು ಮಾತನಾಡಿದ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ್ ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಕನ್ನಡಿಗರರ ಅಸ್ಮಿತೆಯ ಪ್ರತೀಕವಾಗಿದೆ.
ಕನ್ನಡಿಗರ ಹೆಮ್ಮೆಯ ಸಂಸ್ಥೆಯ ಚುಕ್ಕಾಣಿಯನ್ನು ನಾಡೋಜ ಡಾ. ಮಹೇಶ ಜೋಶಿ ವಹಿಸಿಕೊಂಡಿದ್ದಾರೆ. ದೂರದರ್ಶನವನ್ನು ಸಮೀಪ ದರ್ಶನವನ್ನಾಗಿ ಮಾಡುವಲ್ಲಿ ಕ್ರಿಯಾಶೀಲರಾಗಿದ್ದ ಅವರು ಇದೀಗ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಅವರ ನಂಬಿಕೆ ಸಾಕಾರವಾಗಲಿದೆ ಎಂದು ತಿಳಿಸಿದರು.
ರಾಜ್ಯದ ಲೋಕಾಯುಕ್ತ ವ್ಯಾಪ್ತಿಯ ಎಲ್ಲ ಸಿಬ್ಬಂದಿ ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮಹೇಶ್ ಜೋಶಿ ವಿನಂತಿಸಿಕೊಂಡರು. ಅದಕ್ಕೆ ನ್ಯಾ. ಬಿ. ಎಸ್. ಪಾಟೀಲ್ ಸಕಾರಾತ್ಮಕವಾಗಿ ಸಮ್ಮತಿಸಿದರು. ಈ ವೇಳೆ ಪರಿಷತ್ತಿನ ಕೋಶಾಧ್ಯಕ್ಷ ಬಿ. ಎಂ. ಪಟೇಲ್ ಪಾಂಡು ಉಪಸ್ಥಿತರಿದ್ದರು.