5 ತಿಂಗಳಿಂದ ಲೋಕಾಯುಕ್ತ ಹುದ್ದೆ ಖಾಲಿ: ಹೈಕೋರ್ಟ್ಗೆ ಸರ್ಕಾರ ಹೇಳಿದ್ದೇನು?
ಬೆಂಗಳೂರು ಜೂ.7. ಕೊನೆಗೂ ರಾಜ್ಯ ಸರ್ಕಾರ ಲೋಕಾಯುಕ್ತರ ಹುದ್ದೆ ಭರ್ತಿಗೆ ಮನಸ್ಸು ಮಾಡಿದಂತೆ ಕಾಣುತ್ತಿದೆ.
ಕಳೆದ ಜನವರಿಯಿಂದ ಸಾಂವಿಧಾನಿಕ ಹುದ್ದೆ ಖಾಲಿ ಇದ್ದರೂ ತಲೆ ಕೆಡಿಸಿಕೊಳ್ಳದ ಸರ್ಕಾರ ಇದೀಗ ಲೋಕಾಯುಕ್ತ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದೆ. ಹಾಗೆಂದು ಹೈಕೋರ್ಟ್ ಮುಂದೆ ಸರ್ಕಾರವೇ ಹೇಳಿಕೆ ನೀಡಿದೆ.
ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಎಸ್. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಂಗಳವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಅರ್ಜಿದಾರರೂ ಆಗಿರುವ ಉಮಾಪತಿ ಸ್ವತಃ ವಾದ ಮಂಡಿಸಿ, 2022ರ ಜನವರಿ 28ರಂದು ಲೋಕಾಯುಕ್ತರಾಗಿದ್ದ ನ್ಯಾ. ಪಿ.ವಿಶ್ವನಾಥ ಶೆಟ್ಟಿ ಅವರು ನಿವೃತ್ತಿಹೊಂದಿದರು. ಆನಂತರ ಕಳೆದು ಐದು ತಿಂಗಳು ಸಾಂವಿಧಾನಿಕ ಹುದ್ದೆ ಖಾಲಿ ಇದೆ. ಆದರೆ ಸರ್ಕಾರ ಆ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆಸಿಲ್ಲ ಎಂದರು.
ಸರ್ಕಾರದ ಕ್ರಮವಿಲ್ಲ:
ಅಲ್ಲದೆ, ನಿಯಮದಂತೆ ಲೋಕಾಯುಕ್ತ ಹುದ್ದ ಖಾಲಿ ಆಗುವ ಮುನ್ನವೇ ಹೊಸ ಲೋಕಾಯುಕ್ತರ ನೇಮಕ ಪ್ರಕ್ರಿಯೆ ನಡೆಸಬೇಕು. ಒಂದು ದಿನವೂ ಆ ಹುದ್ದೆ ಖಾಲಿ ಬಿಡುವಂತಿಲ್ಲ. ಆದರೆ ಬಹುತೇಕ ಐದು ತಿಂಗಳಿಂದ ಖಾಲಿ ಇದೆ, ಸರ್ಕಾರ ಇನ್ನೂ ನೇಮಕ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸಂಸ್ಥೆಗೆ ಮುಖ್ಯಸ್ಥರಿಲ್ಲದಂತಾಗಿದೆ.
ಹಾಗಾಗಿ ಕೂಡಲೇ ಲೋಕಾಯುಕ್ತರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಕ್ರಮ ಕೈಗೊಂಡಿಲ್ಲ, ಆದ್ದರಿಂದ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಕೋರಿದರು.
ಆಗ ಸರ್ಕಾರಿ ವಕೀಲರು ಉತ್ತರ ನೀಡಿ, ಸರ್ಕಾರ ಈಗಾಗಲೇ ಹೊಸ ಲೋಕಾಯುಕ್ತರ ನೇಮಕ ಪ್ರಕ್ರಿಯೆ ಆರಂಭಿಸಿದೆ. ಆ ಕುರಿತಂತೆ ಸಮಾಲೋಚನಾ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆದಷ್ಟು ಶೀಘ್ರ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.
ಆ ಹಿನ್ನೆಲೆಯಲ್ಲಿ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸರ್ಕಾರ ಮಾಹಿತಿ ನೀಡಿದ್ದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು 10 ದಿನ ಮುಂದೂಡಿತು. ಅಷ್ಟರಲ್ಲಿ ಲೋಕಾಯುಕ್ತರ ನೇಮಕ ಕುರಿತಂತೆ ಆಗಿರುವ ಪ್ರಗತಿಯನ್ನು ಸಲ್ಲಿಸಿ ಎಂದು ನಿರ್ದೇಶನ ನೀಡಿತು.
ಐದು ತಿಂಗಳಿನಿಂದ ಖಾಲಿ:
ಒಂದು ಕಾಲದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಗೆ 2018ರ ಜ.28ರಂದು ನ್ಯಾ.ಪಿ.ವಿಶ್ವನಾಥ ಶೆಟ್ಟಿ ಲೋಕಾಯುಕ್ತರಾಗಿ ನೇಮಕಗೊಂಡಿದ್ದರು. ಅವರ ಅಧಿಕಾರವಾವಧಿ 2022ರ ಜ.28ಕ್ಕೆ ಮುಕ್ತಾಯವಾಗಿದೆ. ಆನಂತರ ಆ ಹುದ್ದೆಗೆ ಹೊಸಬರನ್ನು ನೇಮಕ ಮಾಡದೆ, ಸರ್ಕಾರ ವಿಳಂಬ ಮಾಡುತ್ತಿದೆ.