ಕೆಲ ಕ್ಷಣಗಳಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನ; ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗಿ!
ಬೆಂಗಳೂರು, ಸೆ. 24: ರಾಜ್ಯ ವಿಧಾನಸಭೆ ಶುಕ್ರವಾರ ಮಹತ್ವದ ಕಲಾಪಕ್ಕೆ ಸಾಕ್ಷಿಯಾಗಲಿದೆ. ಇಂದು ಮಧ್ಯಾಹ್ನ 02.30ಕ್ಕೆ ವಿಧಾನ ಮಂಡಲ ಜಂಟಿ ಆಧಿವೇಶನ ನಡೆಯಲಿದೆ. ಸಾಮಾನ್ಯವಾಗಿ ವರ್ಷದ ಮೊದಲ ವಿಧಾನ ಮಂಡಲ ಅಧಿವೇಶನ ಜಂಟಿಯಾಗಿ ನಡೆಯುತ್ತದೆ. ಆದರೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕರ್ನಾಟಕದ ಅಧಿವೇಶನದಲ್ಲಿ ಭಾಗವಹಿಸುತ್ತಿರುವುದರಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ್ ಹೆಗಡೆ ಕಾಗೇರಿ ಜಂಟಿ ಅಧಿವೇಶನವನ್ನು ಕರೆದಿದ್ದಾರೆ.
ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ 'ಪ್ರಜಾಪ್ರಭುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ' ಕುರಿತು ಇಂದಿನ ಜಂಟಿ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಸೆ. 13ರಂದು ಆರಂಭವಾಗಿದ್ದ ಮಳೆಗಾಲದ ಅಧಿವೇಶನ ಹತ್ತು ದಿನಗಳ ಬಳಿಕ ಇಂದು ಮುಂದೂಡಿಕೆಯಾಗಲಿದೆ. ಅದಕ್ಕಿಂತ ಮೊದಲು ಇಂದು ಮಧ್ಯಾಹ್ನ 02.30ಕ್ಕೆ ಜಂಟಿ ಅಧಿವೇಶನ ಆರಂಭವಾಗಲಿದೆ. ಅಷ್ಟಕ್ಕೂ ವಿಧಾನ ಮಂಡಲ ಅಧಿವೇಶನದ ಮುಕ್ತಾಯದ ಸಂದರ್ಭದಲ್ಲಿ ಜಂಟಿ ಅಧಿವೇಶನ ಕರೆದಿದ್ದಾದರೂ ಯಾಕೆ? ಸದನದಲ್ಲಿ ಏನೇನು ಚರ್ಚೆ ನಡೆಯಲಿದೆ? ಮುಂದಿದೆ ಮಾಹಿತಿ!
ಐತಿಹಾಸಿಕ ಜಂಟಿ ಅಧಿವೇಶನ!
ಇಂದು ಮಧ್ಯಾಹ್ನದ ಬಳಿಕ ವಿಶೇಷ ಜಂಟಿ ಅಧಿವೇಶನ ಕರೆಯಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. "ಜಂಟಿ ಅಧಿವೇಶನದಲ್ಲಿ ಸಂಸದೀಯ ಮೌಲ್ಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜಂಟಿ ಕಲಾಪದಲ್ಲಿ ಭಾಗವಹಿಸಲಿದ್ದು, ಸಂಸದೀಯ ಮೌಲ್ಯಗಳ ಬಗ್ಗೆ ಜಂಟಿ ಕಲಾಪದಲ್ಲಿ ಅವರು ಮಾತನಾಡಲಿದ್ದಾರೆ" ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಜೊತೆಗೆ ಮತ್ತೊಂದು ಮಹತ್ವದ ಸಂಗತಿ ಕೂಡ ಸದನದಲ್ಲಿ ನಡೆಯಲಿದೆ.
ಅತ್ಯುತ್ತಮ ಶಾಸಕ ಪಶಸ್ತಿ ಕೊಡಲಿದ್ದಾರೆ ಓಂ ಬಿರ್ಲಾ!
ವಿಧಾನಸಭೆ ಮಳೆಗಾಲದ ಅಧಿವೇಶನದಲ್ಲಿ ಗೈರಾಗದೆ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿರುವ ಒಬ್ಬ ಶಾಸಕರಿಗೆ ಜಂಟಿ ಅಧಿವೇಶನದಲ್ಲಿ 'ಅತ್ಯುತ್ತಮ ಶಾಸಕ' ಪ್ರಶಸ್ತಿ ಕೊಡಲು ತೀರ್ಮಾನ ಮಾಡಲಾಗಿದೆ. ಕಲಾಪದಲ್ಲಿ ಭಾಗವಹಿಸುವ ಉತ್ತಮ ಶಾಸಕರೊಬ್ಬರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಜೊತೆಗೆ ಸಂಸದೀಯ ಮೌಲ್ಯಗಳ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಜಂಟಿ ಸದನದಲ್ಲಿ ಮಾತನಾಡಲಿದ್ದಾರೆ. ಆದರೆ ಅದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಲೋಕಸಭಾ ಸ್ಪೀಕರ್ ಭಾಗಿ; ಇತಿಹಾಸ ಸೃಷ್ಟಿ!
ಸಾಮಾನ್ಯವಾಗಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದ ಉದಾಹರನೆಗಳಿವೆ. ಆದರೆ ಇತಿಹಾಸದಲ್ಲಿ ಇದೇ ಮೊದಲು ಬಾರಿ ಲೋಕಸಭಾ ಸ್ಪೀಕರ್ ಅವರು ಭಾಗವಹಿಸಲಿದ್ದಾರೆ. ಜೊತೆಗೆ ಕುಸಿಯುತ್ತಿರುವ ಸಂಸದೀಯ ಮೌಲ್ಯಗಳ ಕುರಿತು ಇಡೀ ದೇಶದ ಜನರು ಕಳವಳಗೊಂಡಿದ್ದಾರೆ. ಹೀಗಾಗಿ ಸಂಸದೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು ಸೇರಿದಂತೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಲೋಕಸಭಾಧ್ಯಕ್ಷ ಓ ಬಿರ್ಲಾ ಮಾತನಾಡಲಿದ್ದಾರೆ. ಕೊನೆಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರಕಟವಾಗಲಿದ್ದು, ಆ ಬಳಿಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಆದರೆ ಈ ಜಂಟಿ ಅಧಿವೇಶನವನ್ನು ಭಹಿಷ್ಕರಿಸುವುದಾಗಿ ಕಾಂಗ್ರೆಸ್ ತಿಳಿಸಿದೆ.
Recommended Video
ಜಂಟಿ ಅಧಿವೇಶನ ಬಹಿಷ್ಕರಿಸುವ ಎಚ್ಚರಿಕೆ ಕೊಟ್ಟ ಕಾಂಗ್ರೆಸ್!
"ಸಂಸದೀಯ ವ್ಯವಸ್ಥೆಯಲ್ಲಿ ಉಭಯ ಸದನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಆದರೂ ವಿಧಾನಸಭೆಯಲ್ಲಿ ಈ ಕಾರ್ಯಕ್ರಮ ನಡೆಸಲು ಸರ್ಕಾರ ಮುಂದಾಗಿದೆ. ಸಂಸದೀಯ ವ್ಯವಹಾರಗಳ ಸಲಹಾ ಸಮಿತಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಆದ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ" ಎಂದು ಜಂಟಿ ಅಧಿವೇಶನದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
"ಈ ಕಾರ್ಯಕ್ರಮ ನಡೆಸುವುದಾದರೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಿ, ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ ಎಂದು ನಾವು ಸಲಹೆ ನೀಡಿದ್ದೆವು. ಸರ್ಕಾರ ಇದನ್ನು ಒಪ್ಪದೇ, ವಿಧಾನಸಭೆಯಲ್ಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದೆ."
"ವಿಧಾನಸಭೆಯಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ನಮ್ಮ ಪಕ್ಷ ಚರ್ಚೆ ಮಾಡಿದೆ. ಈ ರೀತಿಯ ಕೆಟ್ಟ ಪದ್ಧತಿ ಆರಂಭಿಸುತ್ತಿರುವುದನ್ನು ವಿರೋಧಿಸಿ ಈ ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ." ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಜಂಟಿ ಅಧಿವೇಶನದಿಂದ ದೂರ ಉಳಿಯಲಿದ್ದಾರೆ ಎಂಬ ಮಾಹಿತಿಯಿದೆ.