ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಸುಮಲತಾ ಘೋಷಣೆ
Recommended Video
ಬೆಂಗಳೂರು, ಮಾರ್ಚ್ 18: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಸುಮಲತಾ ಅಂಬರೀಷ್ ಘೋಷಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ತಮ್ಮ ರಾಜಕೀಯ ಪ್ರವೇಶದ ನಿರ್ಧಾರವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಸಿನಿಮಾ ನಟರಾದ ದರ್ಶನ, ಯಶ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಉಪಸ್ಥಿತರಿದ್ದರು.
ಇದೇ 20ರಂದು 10 ಗಂಟೆಗೆ ಮಂಡ್ಯಕ್ಕೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ಸುಮಲತಾ ತಿಳಿಸಿದರು.
ನಾನು ಬೇರೆ ಯಾವುದೇ ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ. ನನ್ನ ಪತಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದಿದ್ದರಿಂದ ಅದರಿಂದಲೇ ಸ್ಪರ್ಧಿಸಬೇಕು ಎಂದು ಬಯಸಿದ್ದೆ. ಆದರೆ, ಅಲ್ಲಿ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕಿದ್ದರಿಂದ ಟಿಕೆಟ್ ಸಿಗುವುದಿಲ್ಲ ಎಂದು ಖಾತರಿಯಾಯಿತು. ಹೀಗಾಗಿ ಸ್ವತಂತ್ರಳಾಗಿ ಸ್ಪರ್ಧಿಸಲು ಬಯಸಿದ್ದೇನೆ ಎಂದರು.
ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ!
ಮಂಡ್ಯದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರಿಗೆ ಅಸ್ಮಿತೆಯ ಸಮಸ್ಯೆ ಎದುರಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ಗೆ ತೀವ್ರ ಹಿನ್ನಡೆಯುಂಟಾಗಿದೆ. ಆ ಬೆಂಬಲಿಗರನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದರು.
ಸುಮಲತಾ ಅಂಬರೀಷ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳ ಆಯ್ದ ಭಾಗ ಇಲ್ಲಿದೆ...
ಬೇರೆ ಅರ್ಥ ಕಲ್ಪಿಸುತ್ತಿದ್ದಾರೆ
ಅಂಬರೀಷ್ ಯಾವತ್ತೂ ಸ್ವಾರ್ಥ ರಾಜಕಾರಣ, ಕುಟುಂಬ ರಾಜಕಾರಣ ಮಾಡಲಿಲ್ಲ. ಅವರು ರಾಜಕಾರಣದ ಏಳುಬೀಳು ನೋಡಿ ಬಂದವರು. ಅದರಲ್ಲಿ ಬರುವ ಕಷ್ಟ ಅವರಿಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ಕುಟುಂಬದವರನ್ನು ನಾನು ಪ್ರಮೋಟ್ ಮಾಡಲು ಇಷ್ಟವಿಲ್ಲ ಎಂದಿದ್ದರು. ಬೇರೆಯವರ ಮಕ್ಕಳೂ ಬರಲಿ ಅವರಿಗೆ ಬೆಂಬಲ ನೀಡುತ್ತೇನೆ. ನನ್ನ ಕುಟುಂಬದವರು ಸಾಮರ್ಥ್ಯ ಇದ್ದರೆ ಅವರೇ ಬರಲಿ ಎಂದಿದ್ದರು. ಇದರ ಬಗ್ಗೆ ಅವರ ಸ್ವಭಾವ ಗೊತ್ತಿರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಈ ಹೇಳಿಕೆಯನ್ನು ಇಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ಬೇರೆ ಅರ್ಥ ಕಲ್ಪಿಸುವುದಾದರೆ ಅವರಿಗೆ ಬಿಟ್ಟಿದ್ದು.
ಮಂಡ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದ ಸುಮಲತಾ-ಎಸ್ಎಂ ಕೃಷ್ಣ ಭೇಟಿ
ಜನರ ಆಶಯದಿಂದ ಬಂದಿರುವುದು
ನಾನು ರಾಜಕಾರಣಕ್ಕೆ ಬಂದಿರುವುದು ಮಂಡ್ಯದ ಜನರ ಆಶಯದಿಂದ ಮಾತ್ರ. ಈ ಹಿಂದೆ ಬೆಂಗಳೂರು ದಕ್ಷಿಣ, ಉತ್ತರ, ಎಂಎಲ್ಸಿ ಆಫರ್ಗಳಿದ್ದವು. ಅವುಗಳನ್ನು ತಿರಸ್ಕರಿಸಿದ್ದೆ. ಸೋಲು ಗೆಲುವು ನಮ್ಮ ಕೈಯಲ್ಲಿಲ್ಲ. ಅದು ದೇವರಿಚ್ಛೆ. ಜನರ ಆಶೀರ್ವಾದ ಮುಖ್ಯ. ನಾನು ಸ್ಪರ್ಧಿಸಿರುವುದು ನಿಂತಿರುವುದು ಜನರ ಒತ್ತಾಸೆ ಮೇರೆಗೆ, ಅವರಿಗಾಗಿ ಸ್ಪಂದಿಸಬೇಕು ಎಂದು ಹೇಳಿದರು.
ಜನರು ನಮ್ಮ ಬಳಿ ಬಂದಾಗ ಅವರನ್ನು ನೋಡದೆ ಇದ್ದರೆ ನಮಗೆ ಮಾನವೀಯತೆ ಇಲ್ಲ ಎಂದರ್ಥ. ಇದರಿಂದ ಅಂಬರೀಷ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ: ಸುಮಲತಾ ಅಭಿಮತ
ದರ್ಶನ್, ಯಶ್ ಜೊತೆಗಿದ್ದಾರೆ
ಬಿಜೆಪಿಯ ಕೆಲವು ಮುಖಂಡರಿಂದ ಬೆಂಬಲ ವ್ಯಕ್ತವಾಗಿದೆ ಎಂದು ಮಾಧ್ಯಮಗಳಿಂದ ಗೊತ್ತಾಗಿದೆ. ಯಾರೊಂದಿಗೂ ನೇರವಾಗಿ ಮಾತನಾಡಿಲ್ಲ. ಮಂಡ್ಯದಲ್ಲಿ ಅನೇಕ ಗುಂಪುಗಳಿವೆ, ಅವರಿಂದ ಬೆಂಬಲ ದೊರಕಿದೆ. ರಾಕ್ಲೈನ್ ವೆಂಕಟೇಶ್, ದರ್ಶನ್, ಯಶ್ ಎಲ್ಲರೂ ನಿಮ್ಮ ಜೊತೆಗೆ ನಾವಿದ್ದೇವೆ ಎಂದಿದ್ದಾರೆ.
ಅಂಬರೀಷ್ ಪಕ್ಷಕ್ಕೆ ಎಲ್ಲರೂ ಸೇರಿದವರು. ಅವರು ಯಾವ ಪಕ್ಷಕ್ಕೆ ಸೇರಿದವರಲ್ಲ. ಹೀಗಾಗಿ ಚಿತ್ರರಂಗದ ಎಲ್ಲರ ಬೆಂಬಲ ಇದ್ದೇ ಇರುತ್ತದೆ. ನಾನು ಕಾಂಗ್ರೆಸ್ ರೆಬೆಲ್ ಅಲ್ಲ. ನಾನು ಯಾವುದೇ ಪಕ್ಷಕ್ಕೆ ಸೇರಿರಲಿಲ್ಲ. ನಾನು ಸ್ವತಂತ್ರ ಅಭ್ಯರ್ಥಿ. ಗೆದ್ದರೆ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡಲೇಬೇಕು ಎಂದಿಲ್ಲ. ಅಂತಹ ಸ್ಥಿತಿ ಬಂದರೆ ಜನರನ್ನೇ ಕೇಳುತ್ತೇನೆ. ಜನಾಭಿಪ್ರಾಯವೇ ಆಗಬೇಕು. ನನ್ನದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗುವುದಿಲ್ಲ.
ಇದುವರೆಗೂ ಕಾಂಗ್ರೆಸ್ ಅಥವಾ ಬಿಜೆಪಿಯವರು ಈ ಬಗ್ಗೆ ಚರ್ಚೆ ಮಾಡಿಲ್ಲ. ಆಗ ಯಾರು ಏನು ಏನೇ ಹೇಳಿದರೂ ನಾನು ಕೇಳುವುದು ಜನರನ್ನೇ. ನಾನು ಯಾವ ಪಕ್ಷಕ್ಕೂ ಬದ್ಧಳಲ್ಲ. ಜನರಿಗೆ ಬದ್ಧಳು.
ಕತ್ತಲೆಯ ಮನಸ್ಥಿತಿಯಲ್ಲಿದ್ದೆ
ಜೀವನದಲ್ಲಿ ಕೆಲವು ಕ್ಷಣಗಳನ್ನು ನಾವು ಹುಡುಕಿಕೊಂಡು ಹೋಗಿ ಒಳ್ಳೆಯದಾಗಬೇಕು ಎಂಬ ನಿರ್ಧಾರ ಹಾಕಿಕೊಳ್ಳುತ್ತೇವೆ. ಕೆಲವೊಮ್ಮ ಆ ಕ್ಷಣಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ನಾಲ್ಕು ತಿಂಗಳ ಹಿಂದೆ ನಾನು ಯಾವ ಕ್ಷಣವನ್ನು ನೋಡಲೇಬಾರದು ಎಂದುಕೊಂಡಿದ್ದೇನೋ ಅದು ನನ್ನನ್ನು ಹುಡುಕಿಕೊಂಡು ಬಂದಿತ್ತು. ಈಗ ಅದರ ಬಗ್ಗೆ ಮಾತನಾಡಿದರೆ ಬೇರೆ ಅರ್ಥ ತೆಗೆದುಕೊಳ್ಳಬಹುದು.
ಆಗ ಕತ್ತಲೆಯ ಮನಸ್ಥಿತಿಯಲ್ಲಿದ್ದೆ. ನನ್ನ ಜೀವನಕ್ಕೆ ಏನು ಅರ್ಥ ಇದೆ. ಈ ಜೀವನ ವ್ಯರ್ಥವೇ ಎಂಬ ಯೋಚನೆಗಳು ಮನದಲ್ಲಿತ್ತು. ಆಗ ಸನ್ಮಿತ್ರರು, ಅಪ್ತರು, ಕುಟುಂಬದವರು ಧೈರ್ಯ ತುಂಬುತ್ತಿದ್ದರು. ಆದರೂ ಮನಸಿಗೆ ಸಮಾಧಾನ ಇರಲಿಲ್ಲ. ಈ ಮನಸ್ಥಿತಿಯಿಂದ ಹೊರಬರುತ್ತೇನೋ ಇಲ್ಲವೋ ಎಂಬುದು ಗೊತ್ತಿರಲಿಲ್ಲ. ಆತ್ಮಸ್ಥೈರ್ಯ ಕಳೆದುಕೊಂಡಂತಿದ್ದೆ.
ಅಂಬರೀಷ್ ಹೋದ ಬಳಿಕ ಎಲ್ಲ ಖಾಲಿ
ಅಂಬರೀಷ್ ಸುತ್ತ 24 ಗಂಟೆ ಸ್ನೇಹಿತರಿದ್ದರು. ಮನೆ ತುಂಬಿಕೊಂಡಿತ್ತು. ಅವರು ಹೋದ ಬಳಿಕ ಎಲ್ಲವೂ ಖಾಲಿ. ಇದರಿಂದ ಆಘಾತ ಏನೂ ಆಗಲಿಲ್ಲ. ಪ್ರಪಂಚ ಇರುವುದೇ ಹಾಗೆ ಎಂದು ತಿಳಿದಿತ್ತು. ಈ ಸಂದರ್ಭದಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಬಂದವರು ಮಂಡ್ಯದ ಅಭಿಮಾನಿಗಳು, ಅಂಬರೀಷ್ ಅವರನ್ನು ಪ್ರೀತಿಸುವ ಜನತೆ. ಧೈರ್ಯ ಕಳೆದುಕೊಳ್ಳಬೇಡಿ ಎಂದರು. ಅಂಬರೀಷ್ ಅವರನ್ನು ಪ್ರೀತಿಸುತ್ತಾರೆ ಎನ್ನುವುದು ಗೊತ್ತಿತ್ತು. ಆದರೆ, ಅವರು ಹೋದ ಬಳಿಕ ನನಗೆ ಮತ್ತು ಅಭಿಷೇಕ್ ಬಳಿ ಬಂದು ಅದೇ ರೀತಿ ಪ್ರೀತಿ ತೋರಿಸುತ್ತಾರೆ ಎಂದು ಗೊತ್ತಿರಲಿಲ್ಲ. ಆಗ ಧೈರ್ಯ ಬಂತು.
ಕಳೆದ 45 ವರ್ಷಗಳ ಚಿತ್ರರಂಗ, ರಾಜಕಾರಣದಲ್ಲಿ ಅಂಬರೀಷ್ ಅವರನ್ನು ಪ್ರೀತಿಯಿಂದ ಕೈಹಿಡಿದು ಬಂದಿದ್ದೆವು. ಈ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ಇಷ್ಟವಿಲ್ಲ ಎನ್ನುವ ಮಾತು ಹೇಳಿದ್ದೆ. ಪ್ರೀತಿ ಇದ್ದೇ ಇರುತ್ತದೆ. ನೀವು ಬಂದಾಗ ನಾವು ಮಾತನಾಡುತ್ತೇವೆ. ನಾವು ಬಂದಾಗ ನೀವು ಮಾತನಾಡಿಸುತ್ತೀರಿ. ಆದರೆ, ನಿಮ್ಮ ಸೇವೆ ಬೇಕಿದೆ. ಅಂಬರೀಷ್ ಕೆಲಸ ಮಾಡಿದ್ದರು. ಅವರು ಬಿಟ್ಟು ಹೋದ ಕನಸು ಇದೆ. ಅದನ್ನು ಈಡೇರಿಸಲು ನೀವು ಬರಬೇಕು ಎಂದು ನೂರಾರು ಮಂದಿ ಹೆಳಿದರು,.
ಎರಡು ದಾರಿಯ ಆಯ್ಕೆಗಳಿದ್ದವು
ನಾನು ರಾಜಕಾರಣಿ ಅಲ್ಲ. ರಾಜಕೀಯದ ಬಗ್ಗೆ ಏನೇನೂ ಗೊತ್ತಿಲ್ಲ. ಅಂಬರೀಷ್ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದವಳಲ್ಲ. ಇದನ್ನು ಬಾಯಿಮಾತಿಗೆ ಹೇಳುತ್ತಿಲ್ಲ.
ಅಂಬರೀಷ್ ಅಗಲಿದ ಬಳಿಕ ನನಗೆ ಎರಡು ದಾರಿ ಕಾಣಿಸುತ್ತಿತ್ತು. ನಾನು ಮತ್ತು ಅಭಿ ನಮ್ಮ ಪಾಡಿಗೆ ಆರಾಮಾಗಿ ಶಾಂತಿಯುತ ಜೀವನ ನಡೆಸುತ್ತಾ ಹೋಗಬಹುದು. ನಮಗೆ ಯಾವುದಕ್ಕೂ ಕೊರತೆಯಿಲ್ಲ. ಇದ್ದಾಗ ರಾಜನಂತೆ ಇದ್ದರು. ನಮ್ಮನ್ನು ಜೀವನಪೂರ್ತಿ ಅಷ್ಟೇ ಚೆನ್ನಾಗಿ ನೋಡಿಕೊಂಡು ಹೋದರು. ಅದರಲ್ಲಿಯೇಬದುಕಬಹುದು.
ಇನ್ನೊಂದು ದಾರಿ ಸುಲಭವಾದುದ್ದಲ್ಲ. ಹಾಗೆಂದರೆ ಅದು ಸರಿಯಾದ ದಾರಿ. ಅದು ಸುಗಮವಾದ ದಾರಿ ಆಗಿರೊಲ್ಲ ಎನ್ನುವುದು ಗೊತ್ತು. ಕಷ್ಟಕಾರ್ಪಣ್ಯ, ಮುಳ್ಳಿನ ಹಾದಿ, ಅವಮಾನ, ಅಪಮಾನ ಟೀಕೆಗಳನ್ನು ಎದುರಿಸಬೇಕು ಎನ್ನುವುದು ಗೊತ್ತಿದೆ. ಚುನಾವಣೆ ಎದುರಿಸಲು ಆತ್ಮಸ್ಥೈರ್ಯ ಮಾತ್ರವಲ್ಲ, ಅನೇಕ ಶಕ್ತಿ ಬೇಕಾಗುತ್ತದೆ.
ಅಂಬರೀಷ್ ಅವರೆಡೆಗಿನ ಪ್ರೀತಿ
ಜನರಿಗೆ ನನ್ನಿಂದ ಏನು ಬೇಕಿದೆ ಎಂದು ಜನರಿಂದಲೇ ಕೇಳಲು ಬಯಸಿದೆ. ಊರುಗಳಿಗೆ ತೆರಳಿ ಸಾವಿರಾರು ಜನರನ್ನು ಕೇಳಿದೆ. ಯಾವುದೇ ಕಾರಣಕ್ಕೂ ಅಂಬರೀಷಣ್ಣ ಅವರ ಪ್ರೀತಿಯನ್ನು ಬಿಟ್ಟುಕೊಡಲು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ನಿಮ್ಮ ಮೂಲಕ ಅಂಬರೀಷ್ ಅವರನ್ನು ತುಂಬಿಕೊಳ್ಳಬೇಕು. ಅವರ ಹೆಸರು, ಕನಸು, ಪ್ರೀತಿ ವಿಶ್ವಾಸವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ನನ್ನ ಸನ್ಮಿತ್ರರು, ಆಪ್ತರನ್ನು ಕರೆದು ಸಮಾಲೋಚನೆ ಮಾಡಿದ್ದೇವೆ. ನೀವು ಯಾವ ನಿರ್ಧಾರ ತೆಗೆದುಕೊಂಡರೂ ಜತೆಗೆ ಇರ್ತೀವಿ ಎಂಬ ಶಕ್ತಿ ತುಂಬುವ ಮಾತು ಹೇಳಿದರು. ಸುಲಭದ ಹಾದಿ ತೆಗೆದುಕೊಳ್ಳಲೋ, ಕಷ್ಟವಾದ ದಾರಿ ಆಯ್ದುಕೊಳ್ಳಲೋ ಎಂಬ ಆಯ್ಕೆಯಲ್ಲಿ, ಅಂಬರೀಷ್ ಅವರನ್ನು ಇಷ್ಟು ವರ್ಷ ಕಾಪಾಡಿ ಆಶೀರ್ವಾದ ಮಾಡಿ ಕಳಿಸಿದ ಜನರು ಈಗಲೂ ಅದೇ ಪ್ರೀತಿ ಉಳಿಸಿಕೊಂಡಿದ್ದಾರೆ. ಜನರ ಪರವಾಗಿ ನಿಲ್ಲದೆ ಇದ್ದರೆ ಅಂಬರೀಷ್ ಅವರ ಪತ್ನಿ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ ಎನಿಸಿತ್ತು.
ಸಂಬಂಧ, ಸ್ನೇಹ ದೂರವಾಗುತ್ತದೆ
ಈ ನಿರ್ಧಾರ ಅನೇಕರಿಗೆ ಇಷ್ಟವಾಗದೆ ಇರಬಹುದು. ಇನ್ನು ಕೆಲವರಿಗೆ ಅನುಕೂಲ ಆಗದೇ ಇರಬಹುದು. ಈ ನಿರ್ಧಾರಕ್ಕೆ ಬಂದಿರುವುದು ಮಂಡ್ಯದ ಜನರು ಅಂಬರೀಷ್ ಬಗ್ಗೆ ಇರಿಸಿರುವ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಬೇಕು ಎಂದೇ ಹೊರತು, ಬೇರೆ ಯಾವ ಉದ್ದೇಶವೂ ಇಲ್ಲ. ಇದರಿಂದ ಒಂದಷ್ಟು ಸಂಬಂಧ, ಸ್ನೇಹಗಳು ದೂರು ಆಗುತ್ತವೆ. ಈಗಾಗಲೇ ದೂರ ಆಗಿವೆ. ಯಾರನ್ನೂ ವಿರೋಧ ಮಾಡಲು ಈ ನಿರ್ಧಾರ ತೆಗೆದುಕೊಂಡಿಲ್ಲ. ನನಗೆ ಒಂದಷ್ಟು ಧೈರ್ಯ ಬೇಕಿತ್ತು. ಅದನ್ನು ಜನರು ನೀಡಿದ್ದಾರೆ. ಯಾರನ್ನೋ ನೋಯಿಸಲು ಈ ನಿರ್ಧಾರ ತೆಗೆದುಕೊಂಡಿಲ್ಲ.
ಯಾರೂ ಯಾರಿಗೂ ನೋಯಿಸುವ ಮಾತುಗಳನ್ನು ಆಡುವ ಅಗತ್ಯವಿದೆ. ರಾಜಕಾರಣವೇ ಇರಬಹುದು, ಚುನಾವಣೆಯೇ ಇರಬಹುದು. ಜನರಿಗೆ ಒಳ್ಳೆಯದನ್ನು ಮಾಡುವುದನ್ನು ಮಾತನಾಡೋಣ, ವೈಯಕ್ತಿಕವಾಗಿ ನೋವು ನೀಡುವ ಮಾತುಗಳು ಬೇಕಿಲ್ಲ.
ಯಾರೂ ವೈರಿಗಳಾಗಬೇಕಿಲ್ಲ
ಈಗಿನ ಯುವಕರಿಗೆ ಮಾರ್ಗದರ್ಶನವಾಗಿ ನಿಲ್ಲಬೇಕಾದ ಜವಾಬ್ದಾರಿ ನಮಗಿದೆ. ನನ್ನ ಜತೆಯಲ್ಲಿ ಚಿತ್ರರಂಗ ಯಾಕೆ ನಿಂತಿದೆ? ದರ್ಶನ್, ಯಶ್, ಸುದೀಪ್ ಅವರೆಲ್ಲ ನನ್ನ ಹಿತೈಷಿಗಳು. ಏಕೆಂದರೆ, ನಮ್ಮಲ್ಲಿ ಒಗ್ಗಟ್ಟಿದೆ. ಸಿನಿಮಾ ಬಿಡುಗಡೆಯಾದಾಗ ಎಲ್ಲರೂ ಪೈಪೋಟಿ ಮಾಡುತ್ತಾರೆ. ಆದರೆ ವೈರಿಗಳಲ್ಲ. ಹಾಗೆಯೇ ರಾಜಕೀಯದಲ್ಲಿಯೂ ವೈರಿಗಳಾಗಬೇಕಿಲ್ಲ. ಅದನ್ನು ತೋರಿಸೋಣ. ಇದು ಮೊದಲ ಹೆಜ್ಜೆಯಾಗಲಿ ಎಂಬುದು ನನ್ನ ಆಸೆ.
ದೇವರ ಆಶೀರ್ವಾದ, ನಿಮ್ಮ ಆಶೀರ್ವಾದ, ಅಂಬರೀಷ್ ಮಾರ್ಗದರ್ಶನ ಇಟ್ಟುಕೊಂಡು ಹೊಸ ಪ್ರಯಾಣ ಆರಂಭಿಸುತ್ತೇನೆ.
ಭೇಟಿ ಮಾಡಿದ್ದು ಆಶೀರ್ವಾದ ಪಡೆಯಲು
ಸಿದ್ದರಾಮಯ್ಯ, ಕೃಷ್ಣ ಅವರನ್ನು ಭೇಟಿ ಮಾಡಿದ್ದು, ಮಂಡ್ಯದ ಸ್ಥಿತಿ ಬಗ್ಗೆ ವಿವರಿಸಲು ಮತ್ತು ಅವರ ಸಲಹೆ ಆಶೀರ್ವಾದ ಪಡೆದುಕೊಳ್ಳಲು. ಬೇರಾವ ಅರ್ಥವೂ ಇಲ್ಲ. ಅಂಬರೀಷ್ ಅವರು ಯಾವತ್ತೂ ಪಕ್ಷಾತೀತರಾಗಿದ್ದರು. ಎಲ್ಲ ಪಕ್ಷದಲ್ಲಿಯೂ ಸ್ನೇಹಿತರಿದ್ದರು. ಪಕ್ಷಗಳು ಪರ ನಿಲ್ಲಬೇಕು. ವಿರುದ್ಧವಾಗಿ ನಿಲ್ಲೊಲ್ಲ ಎಂಬ ನಂಬಿಕೆ ಇದೆ. ಪಕ್ಷಗಳು ಹೇಳಿಕೆಗಳ ಮೂಲಕ ನೀಡದೆ ಇರಬಹುದು. ಜನತೆಗಾಗಿ ಮಾಡುತ್ತಿರುವುದು. ಅವರ ಬೆಂಬಲ ಇದೆ ಎಂಬ ಭರವಸೆ ಇದೆ.