ಜೆಡಿಎಸ್ ಮತ ಬಿಜೆಪಿಗೆ: ಜಿ.ಟಿ. ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಅಚ್ಚರಿ
Recommended Video
ಬೆಂಗಳೂರು, ಮೇ 2: ಮೈಸೂರು-ಕೊಡಗು ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತಗಳೂ ಬಿಜೆಪಿಗೆ ಹೋಗಿವೆ ಎಂಬ ಸಚಿವ ಜಿ.ಟಿ. ದೇವೇಗೌಡ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜಿ.ಟಿ. ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ದೇವೇಗೌಡ ಅವರ ಹೇಳಿಕೆ ಸುಳ್ಳಾಗಲಿ ಎಂದು ಅವರು ಆಶಿಸಿದ್ದಾರೆ. ಅವರ ಹೇಳಿಕೆಯು ನಿಜವೇ ಅಥವಾ ಸುಳ್ಳೇ ಎಂಬುದನ್ನು ಅವರು ಫಲಿತಾಂಶ ಪ್ರಕಟವಾದ ಬಳಿಕ ಅದರ ಆಧಾರದಲ್ಲಿ ನಿರ್ಧರಿಸಲು ತೀರ್ಮಾನಿಸಿದ್ದಾರೆ.
ಮೈಸೂರು ಲೋಕಸಭಾ ಚುನಾವಣೆ ಬಗ್ಗೆ ಜಿ.ಟಿ.ದೇವೇಗೌಡ ಶಾಕಿಂಗ್ ಹೇಳಿಕೆ
ಜತೆಗೆ ಅವರು ಮೈಸೂರಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯು ಸಮಪರ್ಕವಾಗಿ ನಡೆಯದೆ ಇರುವ ಬಗ್ಗೆ ಮೊದಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈಗ ಅದರ ಬಗ್ಗೆ ಯೋಚಿಸಿದರೆ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಗರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಸಚಿವ ಜಿ.ಟಿ. ದೇವೇಗೌಡ ಅವರು ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದ್ದರು.
ಜೆಡಿಎಸ್ ಮಾತ್ರವಲ್ಲ, ಕಾಂಗ್ರೆಸ್ ಮತಗಳು ಕೂಡ ನನಗೆ: ಪ್ರತಾಪ್ ಸಿಂಹ
ಮೈಸೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಲು ಸಾಧ್ಯವಾಗಿಲ್ಲ. ಎರಡೂ ಪಕ್ಷಗಳಲ್ಲಿ ವಿರೋಧಿ ನಾಯಕರ ಮೇಲೆ ತೀವ್ರ ಅಸಮಾಧಾನಗಳಿವೆ. ಹೀಗಾಗಿ ಮೈತ್ರಿ ಪಕ್ಷದ ಅಭ್ಯರ್ಥಿಯ ಪರವಾಗಿ ಅವರು ಇಲ್ಲಿ ಕೆಲಸ ಮಾಡಿಲ್ಲ. ಹೆಚ್ಚಿನವರು ಮೈತ್ರಿ ಅಭ್ಯರ್ಥಿ ಸೋಲಲಿ ಎಂಬ ಕಾರಣಕ್ಕಾಗಿಯೇ ಬಿಜೆಪಿಗೆ ಮತ ಹಾಕಿದ್ದಾರೆ. ಅದರಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯನ್ನು ಇಲ್ಲಿ ನಿಲ್ಲಿಸಿರುವುದರಿಂದ ಪಕ್ಷದ ಪ್ರಾಬಲ್ಯ ಕುಂದುತ್ತದೆ. ಹೀಗಾಗಿ ಕಾಂಗ್ರೆಸ್ ಗೆಲುವು ತಮಗೆ ಅಪಾಯಕಾರಿ ಎಂದು ಜೆಡಿಎಸ್ ಕಾರ್ಯಕರ್ತರು ಮೈತ್ರಿ ಧರ್ಮವನ್ನು ಪಾಲಿಸಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಪುಷ್ಟಿ ನೀಡುವಂತೆ ಜಿ.ಟಿ. ದೇವೇಗೌಡ ಹೇಳಿಕೆ ನೀಡಿದ್ದರು.
ಜಿ.ಟಿ. ದೇವೇಗೌಡ ಹೇಳಿದ್ದೇನು?
ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಆದರೆ ಮೈತ್ರಿಯಲ್ಲಿ ತಪ್ಪಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನವರು ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಜೆಡಿಎಸ್ನವರು ಬಿಜೆಪಿಗೆ ವೋಟ್ ಹಾಕಿದ್ದಾರೆ. ಉದ್ಬೂರು ಗ್ರಾಮ ಪಂಚಾಯಿತಿ ಸೇರಿದಂತೆ ಕೆಲವು ಕಡೆ ಹೀಗಾಗಿದೆ ಎಂದು ಜಿ.ಟಿ. ದೇವೇಗೌಡ ಹೇಳಿದ್ದರು.
|
ಚಿಂತಿಸಿ ಫಲವಿಲ್ಲ ಎಂದ ಸಿದ್ದರಾಮಯ್ಯ
ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ನನ್ನಲ್ಲಿಯೂ ಅಚ್ಚರಿ ಮೂಡಿಸಿದೆ. ದೇವೇಗೌಡರ ಮಾತುಗಳು ಸುಳ್ಳಾಗಲಿ ಎಂದು ಆಶಿಸುತ್ತೇನೆ. ಮೇ 23ರ ಫಲಿತಾಂಶದಲ್ಲಿ ಈ ಹೇಳಿಕೆಯ ಸತ್ಯಾಸತ್ಯತೆ ಗೊತ್ತಾಗಲಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲ ಇಲ್ಲ. ಕಾದು ನೋಡೋಣ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಜೆಡಿಎಸ್ ಬೆಂಬಲಿಗರಿಂದ ಬಿಜೆಪಿಗೆ ಮತ: ಜಿಟಿಡಿ ಹೇಳಿಕೆಗೆ ಡಿಕೆಶಿ ಏನಂದ್ರು?
ತಡವಾಗಿ ಮೈತ್ರಿ ಮಾಡಿಕೊಂಡೆವು
ಮೈತ್ರಿ ಸರಿಯಾಗಿ ಕೆಲಸ ಮಾಡಿಲ್ಲ. ಒಂದು ವೇಳೆ ಜೆಡಿಎಸ್- ಕಾಂಗ್ರೆಸ್ ಒಟ್ಟಾಗಿದ್ದರೆ ಬಿಜೆಪಿಗೆ 3 ಸ್ಥಾನ ಗೆಲ್ಲುವುದಕ್ಕೂ ಜಾಗ ಇರುತ್ತಿರಲಿಲ್ಲ. ನಾವು ತಡವಾಗಿ ಮೈತ್ರಿ ಮಾಡಿಕೊಂಡೆವು. ಪರಿಣಾಮ ಕಾರ್ಯಕರ್ತರು ಒಟ್ಟಾಗಲು ಸಾಧ್ಯ ಆಗಲಿಲ್ಲ ಎಂದು ಜಿ.ಟಿ. ದೇವೇಗೌಡ ಹೇಳಿದ್ದರು.
ಜಿಟಿಡಿ ಹೇಳಿಕೆ ಸತ್ಯ: ಯಡಿಯೂರಪ್ಪ
ಜಿಟಿ ದೇವೇಗೌಡ ಅವರು ನೀಡಿರುವ ಹೇಳಿಕೆ ಸತ್ಯವಾಗಿದೆ. ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ಸೋತರೆ ಹೊಣೆಯಲ್ಲ
ಕಳೆದ ತಿಂಗಳು ಚುನಾವಣೆ ನಡೆಯುವ ಮುನ್ನವೇ ಮೈತ್ರಿ ಕುರಿತು ಹೇಳಿಕೆ ನೀಡಿದ್ದ ಜಿ.ಟಿ. ದೇವೇಗೌಡ, ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ನ ವಿಜಯಶಂಕರ್ ಸೋತರೆ ನಾವು ಜವಾಬ್ದಾರರಲ್ಲ ಎಂದಿದ್ದರು. ಇದು ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸಿತ್ತು. ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಚುನಾವಣೆ ಮುಗಿದ ಬಳಿಕ ಅವರು ಹೇಳಿರುವುದು ಮತ್ತಷ್ಟು ಆಘಾತ ಮೂಡಿಸಿದೆ.